ಪ್ರಧಾನಿ ಮನಮೋಹನ್ ಸಿಂಗ್ ಯಾರಿಗೆ ಎಷ್ಟು ಒಳ್ಳೆಯವರೋ ಗೊತ್ತಿಲ್ಲ. ಆದ್ರೆ ಬೆಂಗಳೂರಿನ ಯುವಕನೊಬ್ಬನ ಪಾಲಿಗೆ ಈ ದೇಶದ ಪ್ರಧಾನಿಯೇ ವಿಲನ್. ಹೌದು ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಿಂದ ಬೇಸತ್ತ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ…
ಬೆಂಗಳೂರಿನ ಪೊಲೀಸ್ರ ಕ್ರೈಂ ಲಿಸ್ಟ್ ಗೆ ಹೊಸ ರೀತಿಯ ಪ್ರಕರಣವೊಂದು ದಾಖಲಾಗಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಿಂದ ಯಾರು ಬೇಸತ್ತಿದ್ದಾರೊ ಗೊತ್ತಿಲ್ಲ… ಆದ್ರೆ ಬೆಂಗಳೂರಿನ ಯುವಕನೊಬ್ಬನಿಗೆ ಕೇಂದ್ರ ಸರ್ಕಾರದ ಆಡಳಿತ ವೈಕರಿ ಯಾವ ಮಟ್ಟಿಗೆ ಬೇಸರ ಹುಟ್ಟಿಸಿದೆ ಅಂದ್ರೆ ಅದು ನೇಣಿಗೆ ಶರಣಾಗುವಷ್ಟರ ಮಟ್ಟಿಗೆ….ಈ ವಿಚಿತ್ರ ಘಟನೆ ನಡೆದಿರೋದು ಬೆಂಗಳೂರಿನ ಪೀಣ್ಯಾ ಠಾಣಾ ವ್ಯಾಪ್ತಿಯ ಟಿ.ದಾಸರಹಳ್ಳಿಯಲ್ಲಿ. 28 ವರ್ಷದ ಪದವೀಧರ ಸಂತೋಷ್ ನೇಣಿಗೆ ಶರಣಾದ ಯುವಕ. ಮೂಲತಃ ಸಕಲೇಶಪುರದವನಾದ ಈತ 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡ್ತಿದ್ದ. ಬಾಟಾ ಇಂಡಿಯಾ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ನಿನ್ನೆ ಸಂತೋಷ್ ಮನೆಯಲ್ಲಿ ವೇಲ್ ನಿಂದ ನೇಣು ಭಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸಾವಿಗೆ ಮುನ್ನ ಸಂತೋಷ್ ಮೂರು ಪುಟಗಳ ಡೆತ್ ನೋಟ್ ಬರೆದಿದ್ದಾನೆ.
ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬೆಂಗಳೂರಿಗೆ ಬಂದೆ. ಆದ್ರೆ ಇಲ್ಲಿ ಬಂದ ಮೇಲೆ ಏನೂ ಸಾಧನೆ ಮಾಡಲು ಸಾಧ್ಯವಾಗಲೇ ಇಲ್ಲ. ದೇಶದಲ್ಲಿನ ಬಡವರಿಗೆರ ಸಹಾಯ ಮಾಡಬೇಕು ಅಂದುಕೊಂಡಿದ್ದೆ. ಆದ್ರೆ ಬರುವ 10 ಸಾವಿರ ಸಂಬಳದಲ್ಲಿ ಯಾರಿಗೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಕರಿಯಿಂದಾಗಿ ಗಡಿಯಲ್ಲಿ ಅಮಾಯಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದಿನಬೆಳಗಾದ್ರೆ ಪಾಕಿಸ್ತಾನದ ಉಗ್ರಗಾಮಿಗಳು ಈ ದೇಶದ ಸೈನಿಕರ ರಕ್ತ ಹೀರುತ್ತಿದ್ದರೂ ಈ ಸರಕಾರಕ್ಕೆ ಪಾಕಿಸ್ತಾನಕ್ಕೆ ಪ್ರತಿರೋಧ ತೋರುವ ದೈರ್ಯವಿಲ್ಲ. ಮುಂದಿನ ಜನ್ಮ ಅಂತೇನಾದ್ರೂ ಇದ್ರೆ ಇದೇ ದೇಶದಲ್ಲಿ ಸೈನಿಕನಾಗು ಹುಟ್ಟಿ ಭಾರತ ಮಾತೆಯ ಸೇವೆ ಮಾಡುತ್ತೇನೆ….
ಇದು ಸಂತೋಷ್ ಬರೆದಿರುವ ಮೂರು ಪುಟಗಳ ಡೆತ್ ನೋಟ್ ನ ಸಾರಾಂಶ. ಇತ್ತೀಚೆಗೆ ಕಾಶ್ಮೀರದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ಸಂತೋಷ್ ಗೆ ಈ ವಿಚಾರದಲ್ಲಿ ಸರ್ಕಾರ ಕೈಕಟ್ಟಿ ಕುಳಿತಿದೆ ಅನ್ನಿಸಿತ್ತು. ಇದ್ರಿಂದ ಬೇಸತ್ತಿದ್ದ ಸಂತೋಷ್ ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ವೇಲ್ ಗೆ ನೇಣು ಭಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಅಂತೂ ಇಂತೂ ಪ್ರಧಾನಿ ಮನಮೋಹನ್ ಸಿಂಗ್ ಅವ್ರ ಆಡಳಿತ ವೈಕರಿ ಯುವಕನೊಬ್ಬನ ಸಾವಿಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ದಿನ ಬೆಳಗಾದ್ರೆ ಕೇಂದ್ರ ಸರಕಾರದ ಆಡಳಿತದ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡ್ತಾ ಕಾಲ ಕಳೆಯುತ್ತವೆ. ಆದ್ರೆ ಸಂತೋಷ್ ಪಾಲಿಗೆ ಮಾತ್ರ ಇದು ಗಂಭೀರ ವಿಷಯವಾಗಿ ಕಾಡಿದೆ.