ಮೋದಿ 20 ಲಕ್ಷ ಕೋಟಿ ಪ್ಯಾಕೇಜ್, ಅಂಗೈಯಲ್ಲಿ ಆಕಾಶ..?
ಮೇ 20, 2020 ನಿಮ್ಮ ಟಿಪ್ಪಣಿ ಬರೆಯಿರಿ
ಇದು ನನ್ನ ಪ್ರತಿಬಿಂಬ…
ಮೇ 20, 2020 ನಿಮ್ಮ ಟಿಪ್ಪಣಿ ಬರೆಯಿರಿ
ಮೇ 19, 2020 ನಿಮ್ಮ ಟಿಪ್ಪಣಿ ಬರೆಯಿರಿ
ಬೆಂಗಳೂರಿನಲ್ಲಿ ಬಂದೂಕಿಗೆ ಬಲಿಯಾದ ಮೊದಲ ಭೂಗತ ಪಾತಕಿ ಎಂ.ಪಿ ಜಯರಾಜ್. ರಾಜ್ಯದಲ್ಲೇ ಮೊದಲಿಗೆ ಪಾತಕಲೋಕದಲ್ಲಿ ಡಾನ್ ಪಟ್ಟವನ್ನ ಗಿಟ್ಟಿಸಿಕೊಂಡವನೂ ಇದೇ ಜಯರಾಜ್. ಇಂಥಾ ಜಯರಾಜ್ ನನ್ನ ಗುಂಡಿಕ್ಕಿ ಕೊಲ್ಲಿಸಿ ನಂತರ ಡಾನ್ ಪಟ್ಟಕ್ಕೇರಿದ್ದು ಮುತ್ತಪ್ಪ ರೈ. ಮಚ್ಚು, ಲಾಂಗುಗಳೇ ಅಬ್ಬರಿಸಿಸುತ್ತಿದ್ದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುಂಡಿನ ಶಬ್ಧ ಕೇಳಿಸಿತ್ತು. ಅದರ ಹಿಂದೆಯೇ ಕೇಳಿಸಿದ್ದು ಮುತ್ತಪ್ಪ ರೈ ಅನ್ನೋ ಹೆಸರು. ಹಾಗೆ ಭೂಗತ ಲೋಕಕ್ಕೆ ಎಂಟ್ರಿಯಾಗಿದ್ದರು ಮುತ್ತಪ್ಪ ರೈ.
ಪುತ್ತೂರಿನಿಂದ ಬೆಂಗಳೂರಿಗೆ ಬಂದು ವಿಜಯಾಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತಪ್ಪ ರೈ ಆ ಕೆಲಸ ಬಿಟ್ಟು ಬ್ರಿಗೇಡ್ ರಸ್ತೆಯಲ್ಲಿ ಉಮರ್ ಖಯ್ಯಾಂ ಹೆಸರಿನ ಡ್ಯಾನ್ಸ್ ಬಾರ್ ನಡೆಸ್ತಿದ್ರು. 80-90 ರ ದಶಕದಲ್ಲಿ ಹಫ್ತಾ ವಸೂಲಿ, ಡ್ಯಾನ್ಸ್ ಬಾರ್ ದಂಧೆ, ಆಯಿಲ್ ಮಾಫಿಯಾ ಅಂದ್ರೆ ಕಲಬೆರಕೆ ದಂಧೆ, ಸುಫಾರಿ ಕೊಲೆಗಳಿಗೆ ಸೀಮಿತವಾಗಿತ್ತು ಬೆಂಗಳೂರಿನ ಭೂಗತ ಜಗತ್ತು. ರಾಜಧಾನಿಯ ರೌಡಿಸಂಗೆ ಮುಂಬೈನಿಂದ ಹಿಡಿದು ದುಬೈ ವರೆಗೆ ಲಿಂಕ್ ಬೆಳೆಸಿದ್ದು ಮುತ್ತಪ್ಪ ರೈ. ರೈ ನಡೆಸುತ್ತಿದ್ದ ಉಮರ್ ಖಯ್ಯಾಂ ಡ್ಯಾನ್ಸ್ ಬಾರ್ ಗೆ ಹಫ್ತಾ ಕೇಳಲು ಜಯರಾಜ್ ನ ಕಡೆಯ ಹುಡುಗರು ಬರುತ್ತಿದ್ದರು. ಅವತ್ತಿನ ಕಾಲಕ್ಕೆ ಅದು ಮಾಮೂಲಿಯಾಗಿತ್ತು, ರೈ ಕೂಡ ದುಡ್ಡು ಕೊಟ್ಟು ಕಳಿಸಿ ಸುಮ್ಮನಾಗ್ತಿದ್ರು. ಅಲ್ಲಿಯವರೆಗೆ ಜಯರಾಜ್ ಮತ್ತು ಮುತ್ತಪ್ಪ ರೈ ಮಧ್ಯೆ ಯಾವ ದ್ವೇಷವೂ ಇರಲಿಲ್ಲ. ಆ ನಂತರವೂ ಇರಲಿಲ್ಲವಾದರೂ ಜಯರಾಜ್ ನನ್ನ ಕೊಲ್ಲುವ ಹೊಣೆಯನ್ನ ಹೆಗಲೇರಿಸಿಕೊಂಡು ಅದನ್ನ ಡೀಲ್ ಮಾಡಿದ್ದು ಇದೇ ಮುತ್ತಪ್ಪ ರೈ.
ಅವತ್ತಿನ ಕಾಲಕ್ಕೆ ಬೆಂಗಳೂರನ್ನ ಮತ್ತು ಬೆಂಗಳೂರಿನ ಪೊಲೀಸರನ್ನ ನಡುಗಿಸುತ್ತಿದ್ದವನು ರೌಡಿ ಜಯರಾಜ್. ಬೆಂಗಳೂರಿನ ಇಡೀ ಭೂಗತ ಲೋಕವನ್ನ ತನ್ನ ಬೆರಳ ತುದಿಯಲ್ಲಿ ಆಡಿಸಿದವನು ಜಯರಾಜ್. ಇಂಥಾ ಜಯರಾಜ್ ಗೆ ಪೊಲೀಸರ ಮೇಲೆ ಮೂರು ಜನ್ಮಕ್ಕೂ ಮೀರಿದ ದ್ವೇಷವಿತ್ತು. ಪೊಲೀಸರನ್ನ ನಾಯಿಗಳೂ ಅಂತಲೇ ಕರೆಯುತ್ತಿದ್ದ. ಇಂಥಾ ಸಮಯದಲ್ಲೇ ಬೆಂಗಳೂರಿನಲ್ಲಿ ಆಯಿಲ್ ಕುಮಾರ್ ಇಡೀ ಆಯಿಲ್ ದಂಧೆಯನ್ನ ನಿಯಂತ್ರಿಸುತ್ತಿದ್ದ. ಇವತ್ತು ಬಡವರ ಜಮೀನಿಗೆ ಬೇಲಿ ಸುತ್ತಿ ರಿಯಲ್ ಎಸ್ಟೇಟ್ ದಂಧೆ ಮಾಡಿ ದುಡ್ಡು ಮಾಡುವಂತೆ, ಅವತ್ತು ಆಯಿಲ್ ಕಲಬೆರೆಕೆ ದಂಧೆಯಿಂದ ಕೈ ತುಂಬಾ ದುಡ್ಡು ಮಾಡುತ್ತಿದ್ದವನು ಆಯಿಲ್ ಕುಮಾರ್. ಈ ದಂಧೆಯನ್ನ ಹಿಡಿತಕ್ಕೆ ತೆಗೆದುಕೊಳ್ಳೋದಕ್ಕೆ ಜಯರಾಜ್ ಯತ್ನಿಸುತ್ತಿದ್ದ. ಹಫ್ತಾ ವಸೂಲಿ, ಸೇಟು ಮಾರ್ವಾಡಿಗಳಿಂದ ಬರ್ತಿದ್ದ ದುಡ್ಡಿನ ಜತೆಗೆ ಆಯಿಲ್ ಮಾಫಿಯಾವನ್ನೂ ಆಳಲು ಮುಂದಾಗಿದ್ದ ಜಯರಾಜ್. ಆಯಿಲ್ ಮಾಫಿಯಾ ತನ್ನ ಕೈತಪ್ಪಿಬಿಡುತ್ತೆ ಅಂತ ಆಯಿಲ್ ಕುಮಾರ್ ಚಡಪಡಿಸುತ್ತಿದ್ದಾಗಲೇ ಅವನ ಕಣ್ಣಿಗೆ ಬಿದ್ದಿದ್ದು ಇದೇ ಮುತ್ತಪ್ಪ ರೈ. ಜಯರಾಜ್ ಬದುಕಿಗೆ ಫುಲ್ ಸ್ಟಾಪ್ ಹಾಕೋ ನಿರ್ಧಾರಕ್ಕೆ ಬಂದಿದ್ದ ಆಯಿಲ್ ಕುಮಾರ. ಆ ಕಾಲದ ಸ್ಟೂಡೆಂಟ್ ಲೀಡರ್ ಮತ್ತು ಅಬಕಾರಿ ಕಂಟ್ರಾಕ್ಟರ್ ಆಗಿದ್ದ ಅಮರ್ ಆಳ್ವಗೆ ಮುಂಬಯಿ ಭೂಗತ ಜಗತ್ತಿನ ಪರಿಚಯವಿತ್ತು. ಅವನೇ ಮುತ್ತಪ್ಪ ರೈಗೆ ಮುಂಬೈ ಭೂಗತ ಜಗತ್ತನ್ನು ಪರಿಚಯಿಸಿದ್ದು. ಮುತ್ತಪ್ಪ ರೈ ಮೂಲಕ ಮುಂಬಯಿ ಶೂಟರ್ಗಳನ್ನು ಕರೆಸಿ ಜಯರಾಜ್ ನನ್ನ ಮುಗಿಸಬಹುದು ಅನ್ನೋ ಲೆಕ್ಕಾಚಾರ ಆಯಿಲ್ ಕುಮಾರ್ದಾಗಿತ್ತು.
ಆಯಿಲ್ ಕುಮಾರನೊಬ್ಬನಿಂದಲೇ ಜಯರಾಜ್ ನನ್ನ ಮುಗಿಸೋದಕ್ಕೆ ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಅವತ್ತಿಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜಯರಾಜ್ ನ ಬೆಂಬಲಿಗರಿದ್ದರು. ಮುತ್ತಪ್ಪ ರೈ ಬಂದೂಕಿನ ಗುಂಡಿನಿಂದ ಜಯರಾಜ್ ಹೆಣವಾಗೋದಕ್ಕೆ ಕಾರಣವಾಗಿದ್ದು ಅದೊಂದು ಮರ್ಡರ್ ಕೇಸ್. ಹೌದು 1987 ರಲ್ಲಿ ಕೇರಳದ ವಕೀಲ ರಶೀದ್ ಎಂಬಾತನನ್ನ ತಮಿಳುನಾಡಿನಲ್ಲಿ ಕೊಲೆ ಮಾಡಲಾಗಿತ್ತು. ಆ ಕೊಲೆ ಕೇಸ್ ನಲ್ಲಿ ಅವತ್ತಿನ ಗೃಹ ಸಚಿವ ಆರ್ ಎಲ್ ಜಾಲಪ್ಪ ಮತ್ತು ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದರು ಅನ್ನೋ ಆರೋಪವಿತ್ತು. ಸಿಬಿಐ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು. ಪೊಲೀಸರೆಂದರೆ ಕೆಂಡಾಮಂಡಲನಾಗ್ತಿದ್ದ ಜಯರಾಜ್ ಈ ಕೇಸ್ ಅನ್ನ ಬಳಸಿಕೊಂಡು ಪೊಲೀಸರನ್ನ ಹೆಣೆಯಲು ನಿಂತುಬಿಟ್ಟ. ರಶೀದ್ ಕೊಲೆ ಕೇಸ್ ನಲ್ಲಿ ಜಾಲಪ್ಪ, ಡಿಸಿಪಿ ನಾರಾಯಣ್ ಸೇರಿ ಹಲವರು ಅರೆಸ್ಟ್ ಆದ್ರು. ಈ ಕೇಸ್ ನಲ್ಲಿ ಸಾಕ್ಷಿಧಾರರ ಬೆನ್ನಿಗೆ ನಿಂತು ಸಿಬಿಐ ಕೋರ್ಟ್ ನಲ್ಲಿ ಸಾಕ್ಷಿ ಹೇಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಜಯರಾಜ್. ಯಾವಾಗ ಪೊಲೀಸರ ವಿರುದ್ಧವೇ ಜಯರಾಜ್ ನಿಂತನೋ ಆಗಲೇ ಅವನ ಕೊನೆಯ ದಿನಗಳೂ ಹತ್ತಿರವಾದವು.
ಜಯರಾಜ್ ನನ್ನ ವಿರೋಧಿಸುತ್ತಿದ್ದ ಆಯಿಲ್ ಕುಮಾರನ ಗ್ಯಾಂಗು ಮತ್ತು ಜಯರಾಜ್ ನನ್ನ ವಿರೋಧಿಸುತ್ತಿದ್ದ ಪೊಲೀಸ್ ಟೀಂ ಒಂದಾಯ್ತು. ಈ ಎರಡೂ ಟೀಂಗೆ ಕೊಂಡಿಯಾಗಿದ್ದು ಮುತ್ತಪ್ಪ ರೈ. ಜಯರಾಜ್ ನನ್ನ ಕೊಲ್ಲುವ ಗಂಡು ಬೆಂಗಳೂರಲ್ಲೇ ಇಲ್ಲ ಅಂತ ಪೊಲೀಸ್ ಅಧಿಕಾರಿಯೊಬ್ಬ ಹೇಳಿದಾಗ, ಯಾಕೆ ಅವನ ಮೈಯಲ್ಲಿ ಗುಂಡು ಇಳಿಯುವುದಿಲ್ಲವಾ ಎಂದು ಗುಂಡು ಹೊಡೆದಂತೆ ಮಾತನಾಡಿದ್ದು ಇದೇ ಮುತ್ತಪ್ಪ ರೈ. ಆ ನಂತರವೇ ನಡೆದದ್ದು ಜಯರಾಜ್ ಮೇಲಿನ ಎರಡು ಹತ್ಯಾ ಪ್ರಯತ್ನಗಳು, ಮತ್ತು ಮೂರನೇ ಸಕ್ಸಸ್ ಫುಲ್ ಆಪರೇಷನ್.
1989ರ ಸೆಪ್ಟೆಂಬರ್ ಕೊನೆಯಲ್ಲಿ ಈಗಿನ ಫ್ರೀಡಂ ಪಾರ್ಕ್ ಬಳಿಯಿದ್ದ ಅವತ್ತಿನ ಸೆಂಟ್ರಲ್ ಜೈಲಿನ ಮುಂದೆ ಜಯರಾಜ್ ಮೇಲೆ ಮೊದಲ ದಾಳಿ ನಡೆದಿತ್ತು. ಕಾಟನ್ಪೇಟೆ ಪುಷ್ಪ, ಬೆಕ್ಕಿನಕಣ್ಣು ರಾಜೇಂದ್ರ, ಚಕ್ರೆ ಟೀಂ ನಡೆಸಿದ್ದ ದಾಳಿಯನ್ನು ಹಿಮ್ಮೆಟ್ಟಿಸಿ ಜಯರಾಜ್ ಬಚಾವಾಗಿದ್ದ. ಮಚ್ಚು ಲಾಂಗ್ ಗಳಿಂದ ಜಯರಾಜ್ ನನ್ನ ಕೊಲ್ಲೋದು ಸಾಧ್ಯವೇ ಇಲ್ಲ ಅಂತ ರೈ ಗೆ ಅರ್ಥವಾಗಿತ್ತು. ಮೊದಲ ದಾಳಿ ಬಳಿಕ ಜಯರಾಜ್ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಆಗಿದ್ದ. ಮೈಸೂರಿನ ಕೆಆರ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿದ್ದ ಜಯರಾಜ್ ಮೇಲೆ ಮುಂಬೈನಿಂದ ಬಂದಿದ್ದ ಶೂಟರ್ ಗಳು ಗುಂಡಿನ ದಾಳಿ ನಡೆಸಿದ್ರು. ಅವತ್ತಿನ ಮಟ್ಟಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಂದೂಕುಗಳು ಅಬ್ಬರಿಸಿದ್ದವು. ಜೈಲ್ ವಾರ್ಡ್ನಲ್ಲೇ ಕೈ ಬಾಂಬ್ಗಳನ್ನು ಇಟ್ಟುಕೊಂಡಿದ್ದ ಜಯರಾಜ್ ಅವುಗಳನ್ನೆಸೆದಯ ಬಚಾವ್ ಆಗಿಬಿಟ್ಟ. ಈ ದಾಳಿಯಲ್ಲಿ ಬೆಂಗಳೂರಿನ ಯಾವ ರೌಡಿಗಳೂ ಭಾಗಿಯಾಗಿರಲಿಲ್ಲ. ಮುಂಬೈ ಶೂಟರ್ ಗಳು ಜಯರಾಜ್ ನನ್ನ ಮುಗಿಸಲು ಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗ ಅದರ ಬೆನ್ನ ಹಿಂದೆ ಕೇಳಿಸಿದ್ದ ಮುತ್ತಪ್ಪ ರೈ ಹೆಸರು.
ತನ್ನ ಮೇಲೆ ಎರಡು ದಾಳಿಯಾದರೂ ಜಯರಾಜ್ ಎಂಎಲ್ ಎ ಆಗುವ ಉಮೇದಿಯಲ್ಲಿದ್ದ. ಎಂಎಲ್ ಎ ಆಗಿಬಿಡುವ ತನ್ನನ್ನ ಮುಟ್ಟೋರು ಯಾರಿದ್ದಾರೆ ಅನ್ನೋ ಹುಂಬತನ. ಈ ಹುಂಬತನವೇ ಜಯರಾಜ್ ಗೆ ಮುಳುವಾಗಿತ್ತು. ಎಲೆಕ್ಷನ್ ಗೆ ನಿಲ್ಲೋದಕ್ಕೆ ಅಂತ ಜಾಮೀನಿನ ಮೇಲೆ ಜಯರಾಜ್ ಹೊರಗೆ ಬಂದ. ಜಾಮೀನಿನ ಷರತ್ತಿನಂತೆ ಜಯರಾಜ್ ಪ್ರತೀ ದಿನ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ ಹೋಗಬೇಕಿತ್ತು. ಅವತ್ತಿಗೆ ಜಯರಾಜ್ ಗೆ ನೀಡಲಾಗಿದ್ದ ಜಾಮೀನಿನ ಅವಧಿ ಮುಗಿದಿತ್ತು. ಮಾರನೆಯ ದಿನ ಜೈಲಿಗೆ ಹೋಗಬೇಕಾಗಿತ್ತು. 1989ರ ನ.21 ನೇ ತಾರೀಕು ಪೊಲೀಸ್ ಸ್ಟೇಷನ್ ಗೆ ಬಂದು ಸಹಿ ಮಾಡಿ ವಾಪಸಾಗುವಾಗ ಲಾಲ್ಬಾಗ್ನ ಸಿದ್ದಾಪುರ ಗೇಟ್ ಎದುರಿಗೇ ಜಯರಾಜ್ ಮೇಲೆ ಮೂರನೇ ದಾಳಿ ನಡೆಯಿತು. ವಕೀಲ ವರ್ಧಮಾನಯ್ಯ ಮತ್ತು ಜಯರಾಜ್ ಗುಂಡಿಗೆ ಬಲಿಯಾದರು. ಈ ಬಾರಿ ಬಂದಿದ್ದವರು ಮುಂಬೈನ ಮಾಮೂಲಿ ಶೂಟರ್ಗಳಲ್ಲ, ಶಾರ್ಪ್ ಶೂಟರ್ಗಳು. ಅಲ್ಲಿಗೆ ಬೆಂಗಳೂರನ್ನ ನಡುಗಿಸಿದ್ದ ಮೊದಲ ಡಾನ್ ಜಯರಾಜ್ ನ ಹೆಣ ಉರುಳಿತ್ತು. ಅಲ್ಲಿ ಮತ್ತೊಬ್ಬ ಡಾನ್ ಉದಯಿಸಿದ್ದ ಆತನೇ ಮುತ್ತಪ್ಪ ರೈ. ಜಯರಾಜ್ ಕೊಲೆ, ಮುತ್ತಪ್ಪ ರೈ ಹೆಸರನ್ನು ಇಡೀ ಕರ್ನಾಟಕ ಮತ್ತು ಮುಂಬೈ ವರೆಗೂ ಕರೆದುಕೊಂಡು ಹೋಯ್ತು. ಅದುವರೆಗೂ ರೌಡಿ ಜಗತ್ತಿಗೆ ಮಾತ್ರ ಗೊತ್ತಿದ್ದ ರೈ ಹೆಸರು ಇಲ್ಲಿಂದ ಮುಂದಕ್ಕೆ ದಾವೂದ್ ಇಬ್ರಾಹಿಂವರೆಗೂ ತಲುಪಿಬಿಟ್ಟಿತು.
ಮೇ 15, 2020 ನಿಮ್ಮ ಟಿಪ್ಪಣಿ ಬರೆಯಿರಿ
ಮಾಜಿ ಡಾನ್, ಸಮಾಜ ಸೇವಕ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅನ್ನ ನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮುತ್ತಪ್ಪ ರೈಗೆ ಅಂಟಿದ್ದ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರಿಂದಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೇ ರೈ ಕೊನೆಯುಸಿರೆಳೆದಿದ್ದಾರೆ. ಮೂರು ತಿಂಗಳ ಹಿಂದೆ ಮಾಧ್ಯಮಗಳ ಮುಂದೆ ಬಂದು ತಮಗೆ ಕ್ಯಾನ್ಸರ್ ಬಂದಿದೆ ಅನ್ನೋ ವಿಚಾರವನ್ನ ಬಹಿರಂಗಪಡಿಸಿದ್ದರು. ವೈದ್ಯರು ಸಾಯುತ್ತೇನೆ ಎಂದು ಹೇಳಿದ್ದಾರೆ.. ಆದರೆ ನಾನು ಸಾವಿಗೆ ಹೆದರೋದಿಲ್ಲ ಎಂದು ಹೇಳಿದ್ದರು. ಆದ್ರೀಗ ಕ್ಯಾನ್ಸರ್ ಮುತ್ತಪ್ಪ ರೈ ಅವರ ಜೀವವನ್ನ ಬಲಿ ಪಡೆದುಬಿಟ್ಟಿದೆ. ಕ್ಯಾನ್ಸರ್ ವಿರುದ್ಧ ಕೊನೇ ಕ್ಷಣದವರೆಗೂ ಹೋರಾಡಿದ ಮುತ್ತಪ್ಪ ರೈ ಇನ್ನು ನೆನಪು ಮಾತ್ರ.
ಅಪಾರ ಅಭಿಮಾನಿಗಳು, ದೊಡ್ಡ ಕುಟುಂಬದವನ್ನ ಬಿಟ್ಟು ಮುತ್ತಪ್ಪ ರೈ ಹೊರಟು ಹೋಗಿದ್ದಾರೆ. ಮುತ್ತಪ್ಪ ರೈ ಅನ್ನೋ ವರ್ಣರಂಜಿತ ಬದುಕಿನ ಕಥೆ ಇಲ್ಲಿಗೆ ಮುಕ್ತಾಯವಾಗಿದೆ. ಮುತ್ತಪ್ಪ ರೈ ಅನ್ನೋ ಕಲರ್ ಫುಲ್ ಪರ್ಸನಾಲಿಟಿ ಇನ್ನು ನೆನಪು ಮಾತ್ರ. ತಾವು ಆಪ್ತವಾಗಿ ಪ್ರೀತಿಸ್ತಿದ್ದ ಬಿಡದಿಯ ಮನೆ, ಸಕಲೇಶಪುರದ ತೋಟ, ಬೆಂಗಳೂರಿನ ಸದಾಶಿವನಗರದ ಅಪಾರ್ಟ್ ಮೆಂಟು, ಸಾವಿರಾರು ಕೋಟಿ ಆಸ್ತಿ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ ಮುತ್ತಪ್ಪ ರೈ. ಕಳೆದ ಐದಾರು ತಿಂಗಳಿಂದ ಮುತ್ತಪ್ಪ ರೈ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ದಿನ ಕಳೆದಿದ್ರು. ಅಂಡರ್ ವರ್ಲ್ಡ್ ನ ಕಠೋರ ದಿನಗಳಿಗಿಂತ ಕ್ಯಾನ್ಸರ್ ನೊಂದಿಗಿನ ಹೋರಾಟವೇ ಅವರನ್ನ ಹೈರಣಾಗಿಸಿತ್ತು.
ದಶಕಗಳ ಕಾಲ ವಿದೇಶದಲ್ಲೇ ಇದ್ದು ಭಾರತದ ಭೂಗತ ಲೋಕವನ್ನ ನಿಯಂತ್ರಿಸಿದ್ದ ಡಾನ್ ನಂತ್ರ ತಮ್ಮ ರೌಡಿಸಂ ಚಟುವಟಿಕೆಯಿಂದ ವಿಆರ್ ಎಸ್ ಪಡೆದಿದ್ರು. ಕ್ಯಾನ್ಸರ್ ವಿರುದ್ಧ ಹೋರಾಡ್ತಿದ್ದ ಮುತ್ತಪ್ಪ ರೈ ಕೊನೆ ದಿನಗಳಲ್ಲಿ ಸಾವಿನ ದಿನವನ್ನ ಮುಂದೆ ಹಾಕೋದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ರು. ಆದ್ರೆ ಸಾವು ಅವರ ಬದುಕಿನಲ್ಲಿ ತುಂಬಾ ದಿನಗಳ ಕಾಲ ಅಂದರ್ ಬಾಹರ್ ಆಟವಾಡಿತ್ತು. ಮುತ್ತಪ್ಪ ರೈಗೆ ಕೂಡಾ ಸಾವಿನ ದಿನಗಳು ಸಮೀಪಿಸುತ್ತಿದ್ದ ಸಮಯದಲ್ಲಿ ವಿಧಿ ಯಾಕೆ ನನ್ನನ್ನ ಹೀಗೆಲ್ಲಾ ಆಡಿಸುತ್ತಿದೆ ಅಂತ ಅಂದುಕೊಂಡಿದ್ರು. ಮುತ್ತಪ್ಪ ರೈ ಅಂದ್ರೇನೆ ಗಟ್ಟಿಮುಟ್ಟಿನ ದೇಹ, ತಮ್ಮದೇ ಖದರ್, ತಮ್ಮದೇ ಸ್ಟೈಲ್, ಆತ್ಮ ವಿಶ್ವಾಸದ ನಡೆ, ಅವರ ಹಿಂದೆ ಹುಡುಗರ ದಂಡು. ಆದ್ರೆ ಅವತ್ತು ಪ್ರೆಸ್ ಮೀಟ್ ನಲ್ಲಿ ಮುತ್ತಪ್ಪ ರೈ ಅವರನ್ನ ನೋಡಿದವರಿಗೆ ತುಂಬಾ ದಿನ ಇವರು ಬದುಕೋದಿಲ್ಲ ಅನ್ನಿಸಿತ್ತು. ಮುತ್ತಪ್ಪ ರೈ ಕೂಡ ಅದನ್ನೇ ಹೇಳಿದ್ರು.
ಮುತ್ತಪ್ಪ ರೈ ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ನಾಪತ್ತೆಯಾಗಿದ್ರು. ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ನಂತ್ರ ವಿಷಯ ಗೊತ್ತಾದಾಗ ಕ್ಯಾನ್ಸರ್ ಅನ್ನೋ ಮಾರಕ ಖಾಯಿಲೆ ಗಟ್ಟಿಗುಂಡಿಗೆಯ ರೈ ಅನ್ನ ಕರಗಿಸ್ತಿದೆ ಅನ್ನೋದು ಗೊತ್ತಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ್ತಿದ್ದ ಹಾಗೆ ರೈ ಮಾಧ್ಯಮಗಳನ್ನ ಕರೆದು ಸುದ್ದಿಗೋಷ್ಠಿ ನಡೆಸಿದ್ರು. ಸಾವು, ಬದುಕು, ಪ್ರೀತಿಯ ಬಗ್ಗೆ ಮಾಜಿ ಡಾನ್ ಸಂತನಂತೆ ಮಾತನಾಡಿದ್ರು. ಇವ್ರೇನಾ ಅಂಡರ್ ವರ್ಲ್ಡ್ ನ ಡಾನ್ ಅಂತ ಅನುಮಾನ ಮೂಡಿಸುವಷ್ಟು ಅಧ್ಯಾತ್ಮದ ಬಗ್ಗೆ ಮಾತನಾಡಿದ್ರು.
ಆಸ್ತಿ,ಹಣ ಇವೆಲ್ಲಾ ಇವತ್ತಿಗೆ ಯಾವುದು ನನ್ನದಲ್ಲ ಅನ್ನೋದನ್ನ ಕೊನೆ ಕ್ಷಣದಲ್ಲಿ ಅವರೇ ಒಪ್ಪಿಕೊಂಡಿದ್ರು. ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ ಒಮ್ಮೆಲೇ ಬುದ್ಧನಂತಾಗಿ ಹೋಗಿದ್ದ. ಅವತ್ತಿನ ಪ್ರೆಸ್ ಮೀಟ್ ಆದ ನಂತರ ಟಿವಿ ಚಾನಲ್ಲುಗಳಿಗೆ ಸಂದರ್ಶನ ಕೊಟ್ಟ ಮುತ್ತಪ್ಪ ರೈ ಆಮೇಲೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ರೈ ಅನಾರೋಗ್ಯದ ಬೆನ್ನಲ್ಲೆ, ಸಾವಿನ ದಾರಿಯಲ್ಲಿ ನಡೆಯುವಾಗ್ಲೇ ಆಸ್ತಿ ವಿಚಾರವಾಗಿ ಎಲ್ಲಾ ಪ್ರೋಸೆಸ್ ನಡೆಸೋದಕ್ಕೆ ಶುರುಮಾಡಿದ್ರು. ಆಗ್ಲೇ ಅವರೊಳಗೆ ಬುದ್ಧನ ಜೊತೆ ಇನ್ನೊಬ್ಬ ರೌಡಿ ಇದ್ದಾನೆ ಅನ್ನೋದು ಗೊತ್ತಾಗಿತ್ತು. ಜೊತೆಗಿದ್ದವರ ಮರ್ಡರ್ ಸುಪಾರಿ ಕೇಸ್ ಜೀವನದ ಕೊನೇ ಹಂತದಲ್ಲಿ ಅವರನ್ನ ಇನ್ನಷ್ಟು ಹಿಂಡಿ ಹಿಪ್ಪೆ ಮಾಡಿ ಹಾಕಿತ್ತು. ಅದರ ನಡುವಲ್ಲೇ ರೈ ಅವರನ್ನ ಸಿಸಿಬಿ ಪೊಲೀಸ್ರು ವಿಚಾರಣೆ ನಡೆಸಿದ್ರು. ಅದಾದ ಕೆಲ ದಿನಗಳಿಗೆ ರೈ ಮೃತಪಟ್ಟಿದ್ದಾರೆ ಅನ್ನೋ ಸುಳ್ಳುಸುದ್ದಿ ಹರಡೋದಕ್ಕೆ ಶುರುವಾಗಿತ್ತು. ಆಗ ರೈ ತಮ್ಮ ಸೋದರಿ ಜತೆ ಚೆಸ್ ಆಡ್ತಿದ್ದ ಪೋಟೋವೊಂದನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ರೈ ಸಾವಿನ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿದ್ರು. ಕೊನೆಯ ದಿನಗಳಲ್ಲಾದರೂ ಎಲ್ಲ ಜಂಜಾಟಗಳಿಂದ ದೂರವಿದ್ದು ನೆಮ್ಮದಿಯಾಗಿ ಕಳೆಯಬೇಕು ಅಂದುಕೊಂಡಿದ್ದ ಮುತ್ತಪ್ಪ ರೈಗೆ ಅದು ಸಾಧ್ಯವಾಗಲೇ ಇಲ್ಲ.
ಕಡೆಯ ದಿನಗಳಲ್ಲಿ ಸಾವಿಗೆ ನಾನು ಹೆದರೋದಿಲ್ಲ ಅಂದಿದ್ದ ಮುತ್ತಪ್ಪ ರೈ ಸಾವನ್ನ ತಪ್ಪಿಸಿಕೊಳ್ಳೋದಕ್ಕೆ ಏನೆಲ್ಲಾ ಮಾಡಬೇಕೋ ಎಲ್ಲ ಪ್ರಯತ್ನಗಳನ್ನೂ ಮಾಡಿಬಿಟ್ಟರು. ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯರಿಂದ ಹಿಡಿದು, ಪ್ರಖ್ಯಾತ ವೈದ್ಯರ ಬಳಿಗೆಲ್ಲಾ ಹೋಗಿಬಂದ್ರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಏರ್ ಆ್ಯಂಬ್ಯುಲೆನ್ಸ್ ಮಾಡಿಕೊಂಡು ಗುಜರಾತ್ ನ ಅಹಮದಾಬಾದ್ ಗೆ ಹೋಗಿಬಂದ್ರು. ಆದ್ರೆ ಅಲ್ಲಿ ಟ್ರೀಟ್ ಮೆಂಟ್ ಸಿಗದೇ ಬೆಂಗಳೂರಿಗೆ ವಾಪಸ್ ಆಗಿ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು.
ಮುತ್ತಪ್ಪ ರೈ ಹುಟ್ಟು ಹೋರಾಟಗಾರ. ಮೂರು ಗುಂಡುಗಳು ಎದೆಯನ್ನ ಸೀಳಿದ್ರು ಸಾವನ್ನ ಗೆದ್ದು ಬಂದಿದ್ರು. ಬದುಕಿರೋ ವೇಳೆ ಎಲ್ಲವನ್ನ ಕಂಡಿದ್ದ ಅವರನ್ನ ಕ್ಯಾನ್ಸರ್ ಹೆಚ್ಚು ಹೆದರಿಸಿತ್ತು. ಬಹಿರಂಗವಾಗಿ ತಾನು ಎದೆಗುಂದಿದ್ದೇನೆ ಅನ್ನೋದನ್ನ ರೈ ತೋರಿಸಿಕೊಳ್ಳದೇ ದೈರ್ಯವಾಗಿಯೇ ಇದ್ದರು. ದಿನದಿಂದ ದಿನಕ್ಕೆ ಕುಗ್ಗಿಹೋಗುತ್ತಿದ್ದ ದೇಹ, ಮಾನಸಿಕ ಜರ್ಜರಿತ ಎಲ್ಲವೂ ಅವರನ್ನ ಇನ್ನಿಲ್ಲದಂತೆ ಕಾಡಿತ್ತು. ಸಾಮಾಜಿಕವಾಗಿ ತಮ್ಮದೇ ಆತ ವರ್ಚಸ್ಸನ್ನ ಬೆಳೆಸಿಕೊಂಡಿದ್ದ ಮುತ್ತಪ್ಪ ರೈ ಅವರಿಗೆ ಸಾವಿನ ಸಮಯದಲ್ಲಿನ ಸನ್ನಿವೇಶಗಳು ಬದುಕಿನ ನಿಜ ದರ್ಶನವನ್ನ ಮಾಡಿಸಿತ್ತು. ಆದ್ರೆ ಎಲ್ಲೂ ರೈ ತಮ್ಮ ಆತ್ಮವಿಶ್ವಾಸವನ್ನ ಬಿಟ್ಟುಕೊಡಲಿಲ್ಲ. ಕಣ್ಣು ಮುಂದಿರೋ ಸಾವು, ದಕ್ಕಿದ್ದಷ್ಟೇ ಪ್ರೀತಿ, ಬದುಕಿದ್ದಷ್ಟೇ ಜೀವನ ಅನ್ನೋ ಬ್ರಹ್ಮಾಂಡ ಸತ್ಯವನ್ನ ಅರ್ಥ ಮಾಡಿಸಿತ್ತು. ಕೊನೆಗೆ ಕ್ಯಾನ್ಸರ್ ರೋಗ ಮುತ್ತಪ್ಪ ರೈ ಅವರನ್ನ ಇನ್ನೊಂದು ಪ್ರಪಂಚಕ್ಕೆ ಕರ್ಕೊಂಡು ಹೋಗಿದೆ.
ಭೂಗತ ಲೋಕದಿಂದ ಹೊರಬಂದು ಸಮಾಜ ಸೇವಕನ ಇಮೇಜ್ ಕಟ್ಟಿಕೊಳ್ಳೋದು ಅಸಾಧ್ಯ. ಆದ್ರೆ ಈ ಅಸಾಧ್ಯವಾದುದನ್ನ ರೈ ಸಾಧಿಸಿ ತೋರಿಸಿದರು. ಸಾಯೋ ಕೊನೆಕ್ಷಣದವರೆಗೂ ದಾನ ಧರ್ಮಗಳಲ್ಲಿ ನಿರತರಾಗಿದ್ದ ರೈ, ಕರಾಳ ಜಗತ್ತಿನ ವ್ಯಕ್ತಿಯೊಬ್ಬ ವ್ಯಕ್ತಿತ್ವವನ್ನ ಬದಲಿಸಿಕೊಂಡು ಬದುಕಬಹುದು ಅನ್ನೋದನ್ನ ತೋರಿಸಿ ಹೋಗಿದ್ದಾರೆ.
ಏಪ್ರಿಲ್ 28, 2020 ನಿಮ್ಮ ಟಿಪ್ಪಣಿ ಬರೆಯಿರಿ
ಕಿಮ್ ಜಾಂಗ್ ಉನ್… ಕೊರೊನಾ ಹೊಡೆತದ ಮಧ್ಯೆಯೂ ಇಡೀ ಜಗತ್ತಿನಾದ್ಯಂತ ಕೇಳಿಬರುತ್ತಿರೋ ಹೆಸರು. ಉತ್ತರ ಕೊರಿಯಾ ಅನ್ನೋ ದುರಂತ ದೇಶದ ಸರ್ವಾಧಿಕಾರಿ ಈತ. ಜಗತ್ತನ್ನ ಆಳಿ ಹೋದ ಹಲವು ಸರ್ವಾಧಿಕಾರಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿ. ಹಿಟ್ಲರ್, ಮುಸಲೋನಿ, ಸದ್ದಾಂ ಹುಸೇನ್, ಗಡ್ಡಾಫಿ, ಇದಿ ಅಮೀನ್ ರಂಥ ನರ ರಾಕ್ಷಸರನ್ನೂ ಮೀರಿಸಬಲ್ಲಂತವನು ಈತ. ಒಂದಿಡೀ ದೇಶವನ್ನ ತನ್ನ ಮುಷ್ಠಿಯಲ್ಲಿಟ್ಟುಕೊಂಡು ಆಡಿಸುತ್ತಿರೋ ವ್ಯಕ್ತಿ. ತನ್ನ ಹುಚ್ಚು ನಿರ್ಧಾರಗಳು, ನಿಗೂಢ ಬದುಕಿನ ಕಾರಣದಿಂದಲೇ ಇಡೀ ಜಗತ್ತಿನ ಗಮನ ಸೆಳೆದವನು. ಅಮೆರಿಕದಂತಹ ಬಲಾಡ್ಯ ದೇಶವನ್ನೇ ಹೈಡ್ರೋಜನ್ ಬಾಂಬ್ ಹಾಕಿ ಉಡಾಯಿಸಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ ಭೂಪ ಈತ. ಇವನನ್ನ ಕಂಡರೆ ಜಗತ್ತಿನ ಹಲವು ದೇಶಗಳು ಹೆದರುತ್ವೆ. ಇಂಥಾ ಕಿಮ್ ಜಾಂಗ್ ಉನ್ ಈಗ ಸತ್ತೇ ಹೋಗಿದ್ದಾನೆ ಎಂದು ಸುದ್ದಿಯಾಗುತ್ತಿದೆ. ಉತ್ತರ ಕೊರಿಯಾಗೆ ಮಹಿಳೆಯೊಬ್ಬಳು ಉತ್ತರಾಧಿಕಾರಿಯಾಗಲಿದ್ದಾಳೆ ಅನ್ನೋ ಸುದ್ದಿಗಳು ಬರಲಾರಂಭಿಸಿವೆ. ಕಿಮ್ ಜಾಂಗ್ ಉನ್ ಸತ್ತಿದ್ದಾನೋ ಇಲ್ಲವೋ ಅನ್ನೋದನ್ನ ಇದುವರೆಗೂ ಆ ದೇಶ ಖಚಿತಪಡಿಸುತ್ತಿಲ್ಲ. ಒಂದಿಡೀ ದೇಶವನ್ನ ಜಗತ್ತಿನಿಂದಲೇ ದೂರವಿಟ್ಟು ತನ್ನ ಬೆರಳ ನೇರಕ್ಕೆ ಆಡಿಸುತ್ತಿರೋ ಈತನ ಹಿನ್ನೆಲೆಯೇನು..? ಕೇವಲ 27 ವರ್ಷಕ್ಕೆ ಈತ ಒಂದು ದೇಶದ ಸರ್ವಾಧಿಕಾರಿಯಾಗಿದ್ದು ಹೇಗೆ..? ಅಧಿಕಾರ ಉಳಿಸಿಕೊಳ್ಳಲು ಈತ ಮಾಡಿದ ಪಾತಕಗಳೆಷ್ಟು..? ಉರುಳಿಸಿದ ತಲೆಗಳೆಷ್ಟು..?
ಕಿಮ್ ಜಾಂಗ್ ಉನ್… ಈತ ಉತ್ತರ ಕೊರಿಯಾದ ಮೂರನೇ ಸರ್ವಾಧಿಕಾರಿ. ಇವನಿಗೂ ಮೊದಲು ಇವನ ಅಪ್ಪ, ತಾತ ಆ ದೇಶವನ್ನ ನಿರ್ಧಾಕ್ಷಿಣ್ಯವಾಗಿ ಆಳಿ ಹೋಗಿದ್ದಾರೆ. 2011 ರಿಂದ ಕಿಮ್ ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಆಗಿ ಅಧಿಕಾರ ನಡೆಸುತ್ತಿದ್ದಾನೆ. ಅಲ್ಲಿ ಇವನು ಮಾಡಿದ್ದೇ ಕಾನೂನು, ಹೇಳಿದ್ದೇ ನ್ಯಾಯ. ಎಲ್ಲಿಯವರೆಗೆ ಅಂದ್ರೆ ಆ ದೇಶದಲ್ಲಿ ಹೇರ್ ಕಟ್ ಯಾವ ರೀತಿ ಮಾಡಿಸಬೇಕು ಅನ್ನೋದನ್ನೂ ನಿರ್ಧರಿಸೋದು ಇವನೇ. ಇವನು ಹೇಳಿದ್ದನ್ನ ಬಿಟ್ಟು ಬೇರೆ ರೀತಿಯ ಹೇರ್ ಕಟ್ ಮಾಡಿಸಿಕೊಂಡ ಅಂದ್ರೆ ಮುಗಿದೇ ಹೋಯ್ತು ಕತೆ. ಅಂಥವನೆದೆಗೆ ಗುಂಡು ಬಿತ್ತು ಅಂತಲೇ ಅರ್ಥ. ಇವನೆಂಥಾ ಹುಚ್ಚು ದೊರೆ ಅನ್ನೋದಕ್ಕೆ ಇದೊಂದು ಉದಾಹರಣೆ ಸಾಕು. ಅಧಿಕಾರಕ್ಕಾಗಿ ತನ್ನ ಅಣ್ಣನನ್ನೇ ಕೊಲೆ ಮಾಡಿಸಿದ ಕ್ರೂರಿ ಈತ. ಅಷ್ಟೇ ಅಲ್ಲ, ತನ್ನ ಮಾತು ಕೇಳಲಿಲ್ಲ ಅನ್ನೋ ಕಾರಣಕ್ಕೆ ಸ್ವಂತ ಮಾವನಿಗೇ ಮರಣದಂಡನೆ ವಿಧಿಸಿದ ಪಾಪಿ ಇವನು. ಜಗತ್ತಿನ ಎಲ್ಲ ದೇಶಗಳಲ್ಲಿ ಮರಣದಂಡನೆ ಅನ್ನೋದು ಕಟ್ಟ ಕಡೇ ಶಿಕ್ಷೆಯಾದ್ರೆ ಈತನ ಆಡಳಿತದಲ್ಲಿ ಮರಣದಂಡನೆಯೇ ಮೊಟ್ಟ ಮೊದಲ ಶಿಕ್ಷೆ.
ಈ ಕಿಮ್ ಜಾಂಗ್ ಉನ್ ಬಗ್ಗೆ ಹೇಳಬೇಕು ಅಂದ್ರೆ ಉತ್ತರ ಕೊರಿಯಾದ ಇತಿಹಾಸದ ಬಗ್ಗೆಯೂ ಹೇಳಲೇಬೇಕು. ಮೊದಲಿಗೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎರಡೂ ಒಂದೇ ದೇಶವಾಗಿದ್ದವು. ವಸಾಹತುಶಾಹಿ ವ್ಯವಸ್ಥೆ ಉತ್ತುಂಗದಲ್ಲಿದ್ದಂತ ಸಂದರ್ಭದಲ್ಲಿ ಬಲಿಷ್ಠವಾಗಿದ್ದ ಜಪಾನ್ 1910ರಲ್ಲಿ ಈ ದೇಶವನ್ನ ಆಕ್ರಮಿಸಿಕೊಳ್ತು. 1945ರ ವರೆಗೆ ಅಂದ್ರೆ ಎರಡನೇ ಮಹಾಯುದ್ಧ ಮುಗಿಯೋವರೆಗೆ ಜಪಾನ್ ಕೊರಿಯಾದಲ್ಲಿ ಅಧಿಕಾರ ನಡೆಸಿತ್ತು. ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋತ ಮೇಲೆ ಅಮೆರಿಕ ಮತ್ತು ರಷ್ಯಾ ಒಟ್ಟಾಗಿದ್ದ ಕೊರಿಯಾವನ್ನ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಹಂಚಿಕೊಂಡ್ವು. ಉತ್ತರ ಕೊರಿಯಾ ರಷ್ಯಾದ ಪಾಲಾಗಿ ಕಮ್ಯುನಿಸಂ ಅನ್ನ ಅಳವಡಿಸಿಕೊಂಡ್ರೆ, ದಕ್ಷಿಣ ಕೊರಿಯಾ ವಶಪಡಿಸಿಕೊಂಡ ಅಮೆರಿಕ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾರಣವಾಯ್ತು. ಹಾಗೆ ರೂಪುಗೊಂಡಿದ್ದೇ ಕಮ್ಯುನಿಸ್ಟ್ ದೇಶ ಉತ್ತರ ಕೊರಿಯಾ. ಒಂದು ದೇಶವನ್ನ ಎರಡು ತುಂಡು ಮಾಡಿದ ಅಮೆರಿಕ ಮತ್ತು ರಷ್ಯಾ 1948-49ರ ವೇಳೆಗೆ ಅಲ್ಲಿಂದ ಎದ್ದು ಹೋದವು. ಆಗ ಉತ್ತರ ಕೊರಿಯಾದ ಅಧಿಕಾರ ಹಿಡಿದವನು ಕಿಮ್ ಇಲ್ ಸಂಗ್. ಈತ ಉತ್ತರ ಕೊರಿಯಾದ ಪಿತಾಮಹ. ಇವನು ಉತ್ತರ ಕೊರಿಯಾವನ್ನ 40 ವರ್ಷಗಳ ಕಾಲ ಆಳಿದ್ದ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಕಿಮ್ ಇಲ್ ಸಂಗ್ ಸೂಕ್ತ ಚಿಕಿತ್ಸೆ ಸಿಗದೇ ನರಳಿ ಸತ್ತುಹೋದ. ನಂತರ ಅಧಿಕಾರ ಹಿಡಿದವನು ಈತನ ಮಗ ಕಿಮ್ ಜಾಂಗ್ ಇಲ್. ಈತನ ಅವಧಿಯಲ್ಲೇ ಆ ದೇಶ ರಕ್ಷಣೆಯ ವಿಚಾರದಲ್ಲಿ ಬಲಿಷ್ಠವಾಗಿದ್ದು. ಇದಕ್ಕೆ ಚೀನಾ ಬೆನ್ನಿಗಿತ್ತು ಅನ್ನೋದೂ ಅಷ್ಟೇ ನಿಜ. 1994 ರಿಂದ 2011 ರವರೆಗೆ ದೇಶದ ಸರ್ವಾಧಿಕಾರಿಯಾಗಿದ್ದ. 2011ರಲ್ಲಿ ಕಿಮ್ ಜಾಂಗ್ ಇಲ್ ಅನಾರೋಗ್ಯದಿಂದ ಮೃತಪಟ್ಟಾಗ ತನ್ನ 27 ನೇ ವರ್ಷಕ್ಕೆ ಸರ್ವಾಧಿಕಾರಿಯಾದವನು ಈಗಿನ ಕಿಮ್ ಜಾಂಗ್ ಉನ್.
ಉತ್ತರ ಕೊರಿಯಾದ ಜನರ ಪಾಲಿಗೆ ಕಿಮ್ ಜಾಂಗ್ ಉನ್, ಆತನ ತಂದೆ ಮತ್ತು ತಾತ ಸಾಕ್ಷಾತ್ ದೇವರುಗಳೇ. ದೇಶೋದ್ಧಾರಕ್ಕಾಗಿ ಸ್ವರ್ಗದಿಂದಲೇ ಇಳಿದುಬಂದವರು. ಹಾಗಂತ ಇಡೀ ದೇಶದ ಜನರನ್ನ ನಂಬಿಸಲಾಗಿದೆ. ನಂಬದೇ ಇರುವವರನ್ನ ಬಂದೂಕಿನ ನಳಿಕೆಯಿಟ್ಟು ನಂಬಿಸಲಾಗುತ್ತೆ. ಈ ಸರ್ವಾಧಿಕಾರಿಗಳು ಮಾಡೋ ಹುಚ್ಚಾಟವನ್ನ ಅಲ್ಲಿನ ಜನ ಸಾಕ್ಷಾತ್ ದೇವರ ಲೀಲೆ ಅಂತಲೇ ನಂಬುತ್ತಾರೆ. ಹಾಗೆ ಅವರನ್ನ ಈ ಸರ್ವಾಧಿಕಾರಿಗಳೇ ನಂಬಿಸಿದರೋ, ಅಥವಾ ಜನರೇ ವದಂತಿಗಳನ್ನ ಸೃಷ್ಟಿಸಿಕೊಂಡು ನಂಬಿದರೋ ಗೊತ್ತಿಲ್ಲ. ಆದ್ರೆ ಒಂದಿಡೀ ದೇಶವನ್ನ ಈ ಕಿಮ್ ನ ಕುಟುಂಬ ಕಳೆದ 70 ವರ್ಷಗಳಿಂದ ಇಡೀ ಜಗತ್ತಿನಿಂದಲೇ ದೂರ ಇಟ್ಟಿದೆ. ಉತ್ತರ ಕೊರಿಯಾ ಜಗತ್ತಿನಲ್ಲೇ ಸುಭಿಕ್ಷ ದೇಶ ಅಂತ ಅಲ್ಲಿನ ಜನರನ್ನ ನಂಬಿಸಲಾಗಿದೆ. ಇಡೀ ಜಗತ್ತಿನದ್ದೇ ಒಂದು ದಾರಿಯಾದ್ರೆ, ಉತ್ತರ ಕೊರಿಯಾದ್ದೇ ಮತ್ತೊಂದು ದಾರಿ. ಈ ದೇಶದೊಳಗೆ ಏನಾಗುತ್ತೆ ಅನ್ನೋದು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಇನ್ನು ಹೊರಜಗತ್ತಿನ ಆಗುಹೋಗುಗಳು ಇಲ್ಲಿನ ಜನರಿಗೆ ತಿಳಿಯುವುದೇ ಇಲ್ಲ. ಯಾಕಂದ್ರೆ ಅಲ್ಲಿ ಇಂಟರ್ ನೆಟ್ ಎಲ್ಲರಿಗೂ ಲಭ್ಯವಿಲ್ಲ. ಮೊಬೈಲ್ ಫೋನ್ ಸಂಪರ್ಕ ಇದೆಯಾದ್ರೂ ಅದು ದೇಶದ ಒಳಗೆ ಮಾತ್ರ. ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅಲ್ಲಿ ಪ್ರವೇಶವಿಲ್ಲ. ವಿದೇಶಿ ಸಂಗೀತಕ್ಕೂ ನಿಷೇಧವಿದೆ. ಅದೊಂತರ ಇಡೀ ಜಗತ್ತಿನ ಪಾಲಿಗೆ ನಿಗೂಢ ದೇಶ. ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ಬದುಕು ಕೂಡ ಅಷ್ಟೇ ನಿಗೂಢ.
ತನ್ನ 27 ನೇ ವರ್ಷಕ್ಕೆ ಉತ್ತರ ಕೊರಿಯಾದ ಸರ್ವಾಧಿಕಾರಿಯಾದ ಕಿಮ್ ಜಾನ್ ಉನ್ ಇನ್ನೇನು ಮಾಡಬಲ್ಲ ಅಂತಲೇ ಜಗತ್ತು ಭಾವಿಸಿತ್ತು. ಆದ್ರೆ ಅಧಿಕಾರ ಹಿಡಿದ ಎರಡೇ ವರ್ಷಕ್ಕೆ ಜಗತ್ತಿನ ಪ್ರಭಾವಿ ವ್ತಕ್ತಿಗಳ ಸಾಲಿಗೆ ಬಂದುಬಿಟ್ಟ. ಎರಡೂವರೆ ಕೋಟಿ ಜನಸಂಖ್ಯೆಯ ದೇಶದಲ್ಲಿ ಹತ್ತು ಲಕ್ಷ ಸೈನಿಕರ ಸೇನೆ ಕಟ್ಟಿದ. ತನ್ನ ಆದೇಶವನ್ನ ಮೀರಿದವರನ್ನ ನಿರ್ಧಾಕ್ಷಿಣ್ಯವಾಗಿ ನೇಣಿಗೇರಿಸಿದ. ಅಂಥವರ ಇಡೀ ಕುಟುಂಬವನ್ನೇ ಜೈಲಿಗೆ ದೂಡುಬಿಡುತ್ತಿದ್ದ. ಹಾಗೆ ಉಸಿರು ಚೆಲ್ಲಿದವರ ಸಂಖ್ಯೆ ಅದೆಷ್ಟೋ. ಸರ್ಕಾರದಲ್ಲಿ ತನ್ನ ಮಾತು ಕೇಳದ ಅಧಿಕಾರಿಗಳನ್ನ ಗುಂಡಿಟ್ಟು ಮುಗಿಸಿಬಿಡುತ್ತಿದ್ದ. ಜನ ಇವನ ಆಡಳಿತವನ್ನ ನೋಡಿ ಈ ಹುಚ್ಚು ದೊರೆ ಹೇಳಿದ್ದನ್ನ ಚಾಚೂ ತಪ್ಪದೇ ಪಾಲಿಸಲಾರಂಭಿಸಿದ್ರು. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲಾ ಕ್ರೌರ್ಯಗಳನ್ನ ಮಾಡಬೇಕೋ ಅದನ್ನೆಲ್ಲವನ್ನೂ ಮಾಡಿಬಿಟ್ಟ. ಇಂಥಾ ಕಿಮ್ 2009ರಲ್ಲೇ ರಿ ಸೋಲ್ ಜು ಎಂಬಾಕೆಯನ್ನ ಮದುವೆಯಾಗಿದ್ದ. ಈತ ಹೋದಲ್ಲಿ ಬಂದಲ್ಲೆಲ್ಲಾ ಆಕೆ ಕಾಣಿಸಿಕೊಳ್ತಿದ್ಲು. ಆದ್ರೆ ಕಳೆದ ಒಂದೆರಡು ವರ್ಷಗಳಿಂದ ಆಕೆ ಎಲ್ಲಿದ್ದಾಳೆ, ಏನಾದಳು ಅನ್ನೋ ಮಾಹಿತಿಯೇ ಇಲ್ಲ.
ಕಿಮ್ ಜಾಂಗ್ ಉನ್ ಅನ್ನೋ ಆಕೃತಿಯನ್ನ ನೋಡಿದ್ರೆ ಆತನ ದೇಶದ ಜನರಷ್ಟೇ ನಡುಗೋದಿಲ್ಲ. ಜಗತ್ತಿನ ಬಲಾಡ್ಯ ದೇಶ ಅಂತ ಹೇಳಿಕೊಳ್ಳೋ ಅಮೆರಿಕವೂ ಕೂಡ ಈತನನ್ನ ನೋಡಿದ್ರೆ ಹೆದರುತ್ತೆ. ಯಾವಾಗ ತನ್ನ ದೇಶದ ಮೇಲೆ ದಂಡೆತ್ತಿ ಬರುತ್ತಾನೋ ಅಂತ ದಕ್ಷಿಣ ಕೊರಿಯಾ ದಿನದ 24 ಗಂಟೆಯೂ ಯುದ್ಧ ಸನ್ನದ್ಧವಾಗಿಯೇ ಇರುತ್ತೆ. ಜಪಾನ್ ಈತನ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟೇ ಇರುತ್ತೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾವನ್ನ ಆಜನ್ಮ ವೈರಿಗಳೆಂದೇ ಪರಿಗಣಿಸೋ ಕಿಮ್ ಜಾಂಗ್ ಉನ್ ಒಂದರ ಬೆನ್ನಿಗೊಂದರಂತೆ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸಿಬಿಟ್ಟ. ಇಡೀ ಜಗತ್ತನ್ನೇ ಬೂದಿ ಮಾಡಿಬಿಡಬಲ್ಲ ಹೈಡ್ರೋಜನ್ ಬಾಂಬ್ ಪ್ರಯೋಗಿಸಿ ಅಮೆರಿಕವನ್ನ ಅಕ್ಷರಶಃ ನಡುಗಿಸಿದ್ದ. ನ್ಯೂಕ್ಲಿಯರ್ ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಪ್ರಯೋಗಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಮೇಲೆ ಯುದ್ಧ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಕಿಮ್ ಜಾಂಗ್ ಉನ್ ಅಮೆರಿಕದ ಮೇಲೆ ಹೈಡ್ರೋಜನ್ ಬಾಂಬ್ ಹಾಕಿ ಉಡಾಯಿಸಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ. ಆಗಲೇ ವಿಶ್ವದ ದೊಡ್ಡಣ್ಣ ಅಂತ ಬೀಗುತ್ತಿದ್ದ ಅಮೆರಿಕ ನಡುಗೋದಕ್ಕೆ ಶುರುವಾಗಿದ್ದು. ಅದಾದ ಮೇಲೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಮಧ್ಯೆ ಶಾಂತಿಯ ಮಾತುಕತೆ ನಡೆದಿತ್ತು. ಈ ಮಾತುಕತೆಯ ನಂತರವೂ ಈತನನ್ನ ಜಗತ್ತಿನ ಯಾವ ದೇಶವೂ ನಂಬೋದಿಲ್ಲ, ಚೀನಾವೊಂದನ್ನ ಬಿಟ್ಟು.
ಇಂಥಾ ತಿಕ್ಕಲು ಸರ್ವಾಧಿಕಾರಿ ಈಗ ಹೃದಯ ಶಸ್ತ್ರಚಿಕಿತ್ಸೆಯಿಂದಾದ ಯಡವಟ್ಟಿನಿಂದ ಸಾಯುವ ಹಂತದಲ್ಲಿದ್ದಾನೆ. ಸತ್ತೇ ಹೋಗಿದ್ದಾನೆ ಅನ್ನೋ ಸುದ್ದಿಗಳು ಬರುತ್ತಿವೆ. ಇವನು ಬದುಕಿ ಬಂದರೆ ಉತ್ತರ ಕೊರಿಯಾದ ಜನರ ಪಾಲಿನ ನರಕ ಮುಂದುವರಿಯುತ್ತೆ. ಸತ್ತು ಹೋಗಿದ್ದೇ ನಿಜವಾದ್ರೆ ಆ ದೇಶವನ್ನ ಈತನ ತಂಗಿ ಕಿಮ್ ಯೋ ಜಾಂಗ್ ಆಳ್ವಿಕೆ ಮಾಡಬಹುದು. ಇಲ್ಲವೇ ಉತ್ತರ ಕೊರಿಯಾದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ, ಚೀನಾ ಮೆಲಾಟ ನಡೆಸಲೂಬಹುದು. ಎಲ್ಲವೂ ಕಿಮ್ ನ ಸಾವು-ಬದುಕಿನ ಮೇಲೆ ನಿರ್ಧಾರವಾಗಲಿದೆ.
ಏಪ್ರಿಲ್ 12, 2019 ನಿಮ್ಮ ಟಿಪ್ಪಣಿ ಬರೆಯಿರಿ
ಅದು 100 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಇಂತಹ ಮತ್ತೊಂದು ನಿರ್ಧಯ ಮಾರಣಹೋಮ ದೇಶದ ಇತಿಹಾಸದಲ್ಲಿ ದಾಖಲಾಗಿಯೇ ಇಲ್ಲ… ನೂರು ವರ್ಷಗಳ ಹಿಂದೆ ನಡೆದು ಹೋದ ಆ ಹಳೇ ಗಾಯದ ಗುರುತು ಇನ್ನೂ ಮಾಸಿಲ್ಲ.. ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ಮೊನ್ನೆ ಮೊನ್ನೆಯಷ್ಟೇ ವಿಷಾಧ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ನೂರು ವರ್ಷಗಳ ನಂತರ ಇಂಗ್ಲೆಂಡ್ ಗೆ ಇದೊಂದು ನಾಚಿಗೆಗೇಡಿನ ಕೃತ್ಯ ಅಂತ ಅನ್ನಿಸಿದೆ..
ಅದು ಸಿಖ್ರ ನಾಡು ಪಂಜಾಬ್ನ ಅಮೃತಸರದಲ್ಲಿ ನಡೆದು ಹೋದ ಭೀಕರ ಮಾರಣ ಹೋಮ. ಅದು 1919ರ ಏಪ್ರಿಲ್ 13 ನೇ ತಾರೀಖಿನ ಭಾನುವಾರ. ಅವತ್ತು ಸಿಖ್ಖರ ಪಾಲಿನ ಯುಗಾದಿ ಬೈಸಾಕಿ ಹಬ್ಬ. ಹೊಸ ವರ್ಷ ಆಚರಿಸಲು ಸಾವಿರಾರು ಜನ ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನದಲ್ಲಿ ಸೇರಿದ್ರು. ಆರರಿಂದ ಏಳು ಎಕರೆ ವಿಸ್ತೀರ್ಣದ ಪಾರ್ಕ್ ಅದು. ಎಲ್ಲರೂ ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ರು. ಇನ್ನೇನು ಸೂರ್ಯ ಮುಳುಗುವ ಸಮಯ. ಆಗ ಅಲ್ಲಿಗೆ ಬಂದಿದ್ದು ತೊಂಭತ್ತು ಸೈನಿಕರ ಬ್ರಿಟೀಷ್ ತುಕಡಿ. ಯಾರೂ ತಪ್ಪಿಸಿಕೊಳ್ಳಬಾರದೆಂದು ಉದ್ಯಾನವನಕ್ಕಿದ್ದ ಒಂದೇ ಒಂದು ಬಾಗಿಲನ್ನ ಮುಚ್ಚಲಾಯಿತು. ಬ್ರಿಟೀಷ್ ಸೈನಿಕ ತುಕಡಿ ಪೊಸೀಷನ್ ತೆಗೆದುಕೊಂಡು ತಮ್ಮ ಬಂದೂಕುಗಳಿಂದ ಗುಂಡುಗಳ ಮಳೆಗರೆದರು. ಅದು ಸುಮಾರು 10 ನಿಮಿಷಗಳ ಕಾಲ ನಡೆದ ಗುಂಡಿನ ಬೋರ್ಗರೆತ. ಹಬ್ಬದ ಸಂಭ್ರಮದಲ್ಲಿದ್ದ ಉದ್ಯಾನವನ ಅಕ್ಷರಶಃ ಸ್ಮಶಾನವಾಗಿತ್ತು. ಅವತ್ತು ಹಾಗೆ ಬ್ರಿಟೀಷರ ಗುಂಡಿಗೆ ಪ್ರಾಣ ತೆತ್ತವರ ಸಂಖ್ಯೆ 1200 ಕ್ಕೂ ಹೆಚ್ಚು. ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಎಳೆಯ ಕಂದಮ್ಮಗಳು, ಮಕ್ಕಳು, ಮಹಿಳೆಯರೂ, ವೃದ್ಧರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಇಂತದ್ದೊಂದು ಘೋರ ಹತ್ಯಾಕಾಂಡ ನಡೆಸಿದವನ ಹೆಸರು ಜನರಲ್ ಡಯರ್. ಬ್ರಿಟೀಷ್-ಇಂಡಿಯಾ ಸೇನೆಯ ಅಧಿಕಾರಿಯಾಗಿದ್ದ ಈತನನ್ನ ಇತಿಹಾಸ ರಕ್ತ ಪಿಪಾಸು ಅಂತಲೇ ಗುರುತಿಸುತ್ತೆ.
ಇಂತದ್ದೊಂದು ಭೀಕರ ಹತ್ಯಾಕಾಂಡ ನಡೆಸಲಿಕ್ಕೆ ಅಲ್ಲಿ ಸೇರಿದ್ದ ಜನ ಮಾಡಿದ್ದ ತಪ್ಪಾದ್ರೂ ಏನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಬ್ರಿಟೀಷರ ವಿರುದ್ಧ ಭಾರತೀಯರು ದಂಗೆಯೇಳಬಹುದು ಅನ್ನೋ ಕಾರಣಕ್ಕೆ ಎಲ್ಲ ಸಭೆ ಸಮಾರಂಭಗಳನ್ನೂ ನಿಷೇಧಿಸಲಾಗಿತ್ತು. ಬ್ರಿಟೀಷ್ ಅಧಿಕಾರಿಗಳೂ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ಹಬ್ಬದ ಸಂಭ್ರಮಕ್ಕೆ ಸೇರಿದ್ದೇ ಆ ಜನ ಮಾಡಿದ್ದ ತಪ್ಪು. ಈ ಹತ್ಯಾಕಾಂಡದಲ್ಲಿ ಪ್ರಾಣ ತೆತ್ತವರ ಸಂಖ್ಯೆ 1200ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಆದ್ರೆ ಅವತ್ತಿನ ಬ್ರಿಟೀಷ್ ಸರ್ಕಾರ ಸತ್ತವರ ಸಂಖ್ಯೆ ಕೇವಲ 379 ಅನ್ನೋ ಕಾಟಾಚಾರದ ಲೆಕ್ಕ ಕೊಟ್ಟಿತ್ತು.
ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆಯೂ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿ, ನೆಹರೂ ಸೇರಿದಂತೆ ಯಾರಿಗೂ ಇರಲಿಲ್ಲ. ಅವತ್ತಿಗೆ ಜನರಲ್ ಡಯರ್ ಮತ್ತು ಬ್ರಿಟೀಷ್ ಆಡಳಿತದ ವಿರುದ್ಧ ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು. ಆಕ್ರೋಶಕ್ಕೆ ಮಣಿದ ಬ್ರಿಟೀಷ್ ಸರ್ಕಾರ ಕಾಟಾಚಾರಕ್ಕೊಂದು ತನಿಖೆಯನ್ನೂ ಮಾಡಿ, ಡಯರ್ ನನ್ನ ಲಂಡನ್ ಗೆ ವಾಪಸ್ ಕರೆಸಿಕೊಂಡಿತ್ತು. 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲ ವರ್ಷಗಳ ನಂತರ ಬ್ರಿಟನ್ ನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಮಲಗಿದ್ದಲ್ಲೇ ಸತ್ತ.
ಹಬ್ಬದ ಸಂಭ್ರಮದಲ್ಲಿದ್ದವರನ್ನ ಮಾರಣ ಹೋಮ ಮಾಡಿದ್ದನ್ನ ಬಾಲಕ ಉದಮ್ ಸಿಂಗ್ ಕಣ್ಣಾರೆ ನೋಡಿದ್ದ. ಅವತ್ತು ತನ್ನವರನ್ನೆಲ್ಲಾ ಕಳೆದುಕೊಂಡು ಗುಂಡೇಟಿನಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರದ ಪಣ ತೊಟ್ಟಿದ್ದ. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು, ತನ್ನ ಜೀವಿತಾವಧಿವರೆಗೆ ಜತೆಗೇ ಇಟ್ಟುಕೊಂಡಿದ್ದ ಉದಮ್ ಸಿಂಗ್. ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೆ ಉದಮ್ ಸಿಂಗ್ ನ ಪ್ರತೀಕಾರದ ಜ್ವಾಲೆ ಮಾತ್ರ ಆರಿರಲಿಲ್ಲ. ಆದರೆ ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಮಾರಣ ಹೋಮ ನಡೆಸಿದವನು ಪ್ರಾಣ ಬಿಟ್ಟಾಗಿತ್ತು. ಗುಂಡಿನ ಮಳೆ ಸುರಿಸುವಂತೆ ಜನರಲ್ ಡಯರ್ ಗೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರೇ ಮೈಕಲ್ ಓಡ್ವೈರ್. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್ನ ಲೆಫ್ಟಿನೆಂಟ್ ಗೌವರ್ನರ್ ಆಗಿದ್ದವನು ಈ ಮೈಕಲ್. ಹತ್ಯಾಕಾಂಡದ ನಂತರ ಮಾತನಾಡಿದ್ದ ಮೈಕಲ್ ಬ್ರಿಟೀಷ್ ಸೇನೆ ಮಾಡಿದ್ದು ಸರಿಯಾದ ಕ್ರಮ ಎಂದಿದ್ದ.
ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್ ಮೈಕಲ್ ಓಡ್ವೈರ್ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. 21 ವರ್ಷಗಳ ಹೋರಾಟದ ನಂತರ ಉದಮ್ ಸಿಂಗ್ ಮೈಕೆಲ್ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದ. ಪ್ರತೀಕಾರದ ನಿರ್ಧಾರ ಮಾಡಿದ್ದ ಉದಮ್ ಸಿಂಗ್ 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದು ನಂತರ ಇಂಗ್ಲೆಂಡ್ ತಲುಪಿಕೊಂಡಿದ್ದ. ಅಲ್ಲೊಂದು ಬಾಡಿಗೆ ಮನೆ ಮಾಡಿಕೊಂಡು ಮೈಕಲ್ ಓಡ್ವೈರ್ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಲೆಫ್ಟಿನೆಂಟ್ ಗೌವರ್ನರ್ ಮೈಕಲ್ ಬಂದಿದ್ದ. ಆ ಕಾರ್ಯಕ್ರಮಕ್ಕೆ ಹೋಗಿದ್ದ ಉದಮ್ ಸಿಂಗ್ ಪಿಸ್ತೂಲ್ನಿಂದ ಮೈಕೆಲ್ನ ಎದೆಗೆ ಗುಂಡಿಕ್ಕಿ ಪ್ರತೀಕಾರ ಮುಗಿಸಿದ್ದ. ತನ್ನ ನೆಲದಲ್ಲಿ ಮಾರಣ ಹೋಮ ನಡೆಸಿದವನನ್ನ ಅವನದ್ದೇ ನೆಲಕ್ಕೆ ನುಗ್ಗಿ ಕೊಂದು ಹಾಕಿದ್ದ ಉದಮ್ ಸಿಂಗ್. ಅವತ್ತು ಜಲಿಯನ್ ವಾಲಾಬಾಗ್ ನಲ್ಲಿ ರಕ್ತ ಚೆಲ್ಲಿದ ಸಾವಿರಾರು ಜನರ ಆತ್ಮಗಳ ಆರ್ತನಾದಕ್ಕೆ ಅಂತ್ಯ ಸಿಕ್ಕಿತ್ತು.
ಪ್ರತೀಕಾರದ ಜ್ವಾಲೆಯನ್ನ ತೀರಿಸಿಕೊಂಡ ಉದಮ್ ಸಿಂಗ್ ಲಂಡನ್ ಕೋರ್ಟ್ನಲ್ಲಿ ನಿಂತು ಹೇಳಿದ್ದು ಮಾತ್ರ ಕೆಚ್ಚದೆಯ ಮಾತುಗಳನ್ನ. ನನ್ನ ಜನಗಳ ರಕ್ತ ಕುಡಿದವನನ್ನ ನಾನು ಕೊಂದು ಹಾಕಿದೆ. ನನಗೀಗ ಆನಂದವಾಗಿದೆ, ಇದು ತಾಯ್ನಾಡಿಗಾಗಿ ನಾನು ಮಾಡಿದ ಕರ್ತವ್ಯ. ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ ಎಂಬ ದಿಟ್ಟ ಮಾತುಗಳನ್ನಾಡಿದ್ದ. ಈ ಘಟನೆ ನಡೆದ ಮೂರು ತಿಂಗಳಲ್ಲೇ ಉದಮ್ ಸಿಂಗ್ ನನ್ನ ಲಂಡನ್ ನಲ್ಲಿ ನೇಣಿಗೇರಿಸಲಾಯಿತು.
ಅವತ್ತು ಧೀರ ಉದಮ್ ಸಿಂಗ್ ತೋರಿದ ದೈರ್ಯ ಸಾಹಸ ನೂರಾರು ಸ್ವಾತಂತ್ರ ಹೋರಾಟಗಾರರಿಗೆ ಸ್ಪೂರ್ತಿಯಾಗಿತ್ತು. ಈ ಘಟನೆ ನಡೆದ ಏಳು ವರ್ಷಗಳ ನಂತರ ಸ್ವಾತಂತ್ರ್ಯ ಭಾರತದ ಉದಯವಾಗಿತ್ತು. ಇವತ್ತಿಗೂ ಅಮೃತಸರದಲ್ಲಿರುವ ಇವತ್ತಿಗೂ ಜಲಿಯನ್ ವಾಲಾಬಾಗ್ ನ ಗೋಡೆಗಳ ಮೇಲಿರೋ ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತನಾದದ ಕಥೆ ಹೇಳುತ್ವೆ.. ಈ ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ನೂರು ವರ್ಷಗಳಾಗುತ್ತೆ. ಆ ಮಾರಣ ಹೋಮ ನಡೆದು ನೂರು ವರ್ಷಗಳಾದ್ರೂ ಅವತ್ತು ಆದ ಗಾಯ ಇನ್ನೂ ಮಾಸಿಲ್ಲ ಅನ್ನೋದು ಮಾತ್ರ ಸತ್ಯ.
ಮಾರ್ಚ್ 28, 2019 ನಿಮ್ಮ ಟಿಪ್ಪಣಿ ಬರೆಯಿರಿ
ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಸೂಪರ್ ಪವರ್… ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನ ಕ್ಷಿಪಣಿಯ ಮೂಲಕ ಹೊಡೆದುರುಳಿಸುವ ತಂತ್ರಜ್ಞಾನವನ್ನ ಭಾರತ ಅಭಿವೃದ್ಧಿ ಪಡಿಸಿದೆ. ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಅಂತರಿಕ್ಷದಲ್ಲಿದ್ದ ಉಪಗ್ರಹ ಹೊಡೆದುರುಳಿಸಿದ್ದೇವೆ ಅಂತ ಘೋಷಿಸಿದ್ರು.. ಅಲ್ಲಿಗೆ ಭಾರತ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಅನ್ನೋ ಖ್ಯಾತಿ ಮುಡಿಗೇರಿಸಿಕೊಂಡಿತು. ಈ ತಂತ್ರಜ್ಞಾನ ಹೊಂದಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಈಗ ಭಾರತ ಸೇರಿದಂತಾಗಿದೆ. ಜಗತ್ತಿನ ಕೆಲವು ಪ್ರವಲ ದೇಶಗಳಾದ ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಗಳು ಮಾಡದ ಸಾಧನೆಯನ್ನ ಭಾರತ ಮಾಡಿದೆ. . ಇಸ್ರೋ ಮತ್ತು ಡಿಆರ್ಡಿಓ ಇಂತದ್ದೊಂದು ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿವೆ.
ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನದ ಬಗ್ಗೆ ತಿಳೀಬೇಕು ಅಂದ್ರೆ ಸ್ವಲ್ಪ ಇತಿಹಾಸದತ್ತ ನೋಡ್ಬೇಕು. ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿಗೆ ಕಾರಣವಾಗಿತ್ತು. ರಷ್ಯಾದ ಕ್ಷಿಪಣಿಗಳು ಆಕಾಶಮಾರ್ಗವಾಗಿ ಅಮೆರಿಕವನ್ನ ನುಗ್ಗಿಬಿಡಬಲ್ಲವು ಅನ್ನೋ ಆತಂಕ ಶುರುವಾಗಿದ್ದು ಈ ತಂತ್ರಜ್ಞಾನ. ಹಾಗೆ ಆಕಾಶ ಮಾರ್ಗವಾಗಿ ಬರುವ ಖಂಡಾಂತರ ಕ್ಷಿಪಣಿಗಳನ್ನು ಮಾರ್ಗಮಧ್ಯೆಯೇ ಹೊಡೆದುರುಳಿಸುವ ತಂತ್ರಜ್ಞಾನವನ್ನ ಅಮೆರಿಕ ಅಭಿವೃದ್ಧಿ ಪಡಿಸಿತು. ಈಗ ಜಗತ್ತಿನ ಹಲವು ದೇಶಗಳು ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆಯನ್ನ ಹೊಂದಿವೆ. ಇದೇ ರೀತಿಯಲ್ಲೇ ಶತೃ ದೇಶದ ಉಪಗ್ರಹವೊಂದು ಅಂತರಿಕ್ಷಕ್ಕೆ ಹಾರಿ ಅಲ್ಲಿಂದಲೇ ನಮ್ಮ ದೇಶದ ಮೇಲೆ ಕಳ್ಳಗಣ್ಣಿಟ್ಟರೆ..? ಅಥವಾ ಶತೃ ರಾಷ್ಟ್ರದ ಮೇಲೆ ಯುದ್ಧಕ್ಕೆ ದಂಡೆತ್ತಿ ಹೋಗದೇ ನಿಂತ್ರಿಸಬೇಕಾದರೆ..? ಆ ದೇಶದ ಉಪಗ್ರಹವನ್ನ ಭೂಮಿಯಿಂದ ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸುವ ತಂತ್ರಜ್ಞಾನವೇ ಉಪಗ್ರಹ ಪ್ರತಿರೋಧ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನ. ಇದನ್ನ ಇಂಗ್ಲೀಷ್ನಲ್ಲಿ ಎ-ಸ್ಯಾಟ್ ಅಂತ ಕರೀತಾರೆ. ಬಾಹ್ಯಾಕಾಶದಲ್ಲಿದ್ದ ನಮ್ಮದೇ ದೇಶದ ಲೈವ್ ಉಪಗ್ರಹವೊಂದನ್ನ ಕೇವಲ ಮೂರೇ ಮೂರು ನಿಮಿಷಗಳಲ್ಲಿ ಹೊಡೆದುರುಳಿಸಿ ಭಾರತ ಮಹತ್ ಸಾಧನೆ ಮಾಡಿದೆ.
ಈ ಸಾಧನೆಯಿಂದ ಭಾರತಕ್ಕೇನು ಲಾಭ ಅಂದ್ರೆ, ಪಾಕಿಸ್ತಾನ ಅಥವಾ ಚೀನಾದ ಉಪಗ್ರಹಗಳನ್ನ ಹೊಡೆದುರುಳಿಸುವಂತಹ ತಾಕತ್ತಿದೆ ಅಂತ ಅರ್ಥ. ಒಂದು ವೇಳೆ ಭಾರತ ಅಂತರಿಕ್ಷದಲ್ಲಿರುವ ಪಾಕಿಸ್ತಾನದ ಉಪಗ್ರಹಗಳನ್ನ ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಿಬಿಟ್ಟರೆ, ಪಾಕಿಸ್ತಾನ ಕೆಲವೇ ನಿಮಿಷಗಳಲ್ಲಿ ಭಾರತದ ಮುಂದೆ ನಡು ಬಗ್ಗಿಸಿ ನಿಂತುಬಿಡುತ್ತೆ. ಅಂತಹ ಸಾಮರ್ಥ್ಯ ನಮ್ಮ ದೇಶಕ್ಕೆ ಬಂದಿದೆ. ಆದರೆ ಭಾರತದ ಈ ಸಾಮರ್ಥ್ಯದಿಂದ ಹೆದರಬೇಕಾಗಿದ್ದು ಚೀನಾ ದೇಶವೇ ಹೊರತು ಪಾಕಿಸ್ತಾನ ಅಲ್ಲ.. ಯಾಕಂದ್ರೆ ಆ ದೇಶಕ್ಕೆ ಈ ಬಗ್ಗೆ ಕಿಂಚಿತ್ತೂ ಗೊತ್ತೇ ಇಲ್ಲ ಬಿಡಿ. ಭಾರತದ ವಿರುದ್ಧ ಸದಾ ಕಾಲು ಕೆರೆದು ನಿಲ್ಲುವ ಚೀನಾ ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯ ಮಾಡಲು ಯತ್ನಿಸಿದರೆ, ತಿರುಗೇಟು ನೀಡೋ ಸಾಮರ್ಥ್ಯ ಭಾರತಕ್ಕಿದೆ. ಅಥವಾ ಭಾರತದ ಮೇಲೆ ಕಳ್ಳಗಣ್ಣು ಇಡಲು ತಮ್ಮ ಉಪಗ್ರಹವನ್ನ ಬಳಸಿಕೊಂಡ್ರೆ ಅವುಗಳನ್ನ ಹೊಡೆದುರುಳಿಸುವ ತಾಕತ್ತು ಭಾರತಕ್ಕಿದೆ. ಅದಕ್ಕೇ ಭಾರತ ಮಾಡಿದ ಈ ಸಾಧನೆಗೆ ಅಷ್ಟೊಂದು ಮಹತ್ವ ಬಂದಿದ್ದು.
ಅಮೆರಿಕಾ ಮತ್ತು ರಷ್ಯಾ ಮಧ್ಯದ ಶೀತಲ ಸಮರ ಅಂತರಿಕ್ಷದಲ್ಲಿನ ಉಪಗ್ರಹಗಳನ್ನ ಹೊಡೆದುರುಳಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಯ್ತು. 1980ರಲ್ಲೇ ಅಮೆರಿಕಾ ರಷ್ಯಾದ ಉಪಗ್ರಹಗಳನ್ನು ಹೊಡೆಯುವ ಭಯ ಸೃಷ್ಟಿಸಲು ಈ ತಂತ್ರಜ್ಞಾನವನ್ನ ಅಭಿವೃದ್ಧಿ ಮಾಡಿತು. ಐದೇ ವರ್ಷಗಳಲ್ಲಿ ರಷ್ಯಾ ಕೂಡ ತಾನೇನು ಕಡಿಮೆ ಇಲ್ಲ ಅನ್ನೋದನ್ನ ತೋರಿಸಿತ್ತು. ಅಮೆರಿಕದ ಉಪಗ್ರಹಗಳನ್ನ ಹೊಡೆದುರುಳಿಸುವ ಸಾಮರ್ಥ್ಯವನ್ನ ರಷ್ಯಾ 1985ರಲ್ಲಿ ಗಳಿಸಿಕೊಳ್ತು. ಚೀನಾ 2007ರಲ್ಲಿ ಈ ಸಾಧನೆಯನ್ನ ಮಾಡಿದ ಮೂರನೇ ರಾಷ್ಟ್ರವಾಯಿತು. ಈಗ ಭಾರತದ ಸರದಿ. ಅಂದ ಹಾಗೆ ಇಸ್ರೋ ಮತ್ತು ಡಿಆರ್ಡಿಓ 2012ರಲ್ಲೇ ಇಂತದ್ದೊಂದು ಪ್ರಯೋಗ ನಡೆಸಲು ಸಿದ್ಧವಿತ್ತು. ಆದ್ರೆ ಅವತ್ತಿನ ಯುಪಿಎ ಸರ್ಕಾರ ದೈರ್ಯ ತೋರಿಸಲಿಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳ ವಿರೋಧ ಕಟ್ಟಿಕೊಳ್ಳಬೇಕಾದೀತು ಅನ್ನೋ ಆತಂಕ ಅಂದಿನ ಯುಪಿಎ ಸರ್ಕಾರಕ್ಕಿತ್ತು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಇಸ್ರೋ ಮತ್ತು ಡಿಆರ್ಡಿಓ ಪ್ರಸ್ತಾಪಕ್ಕೆ ಓಕೆ ಅಂದಿತ್ತು. ಅದರ ಪರಿಣಾಮವೇ ಈಗ ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಸೂಪರ್ ಪವರ್ ಅನ್ನೋ ಹಿರಿಮೆಗೆ ಪಾತ್ರವಾಗಿದ್ದು.
ಸಾಮಾನ್ಯವಾಗಿ ಉಪಗ್ರಹಗಳು ಭೂಮಿಯಿಂದ 300 ರಿಂದ 600 ಕಿಲೋಮೀಟರ್ ಎತ್ತರದಲ್ಲಿ ಪ್ರದಕ್ಷಿಣೆ ಹಾಕುತ್ತವೆ. ಇವತ್ತಿನ ನಮ್ಮ ಜನಜೀವನವೆಲ್ಲವೂ ಅವಲಂಭಿತವಾಗಿರೋದು ಈ ಉಪಗ್ರಹಗಳ ಮೇಲೆಯೇ. ನಮ್ಮ ಮೊಬೈಲ್ ಫೋನ್ಗಳು, ಇಂಟರ್ ನೆಟ್, ಆರೋಗ್ಯ, ವಿಮಾನದಿಂದ ಹಿಡಿದು ಕ್ಯಾಬುಗಳ ವರೆಗಿನ ಎಲ್ಲ ಸಾರಿಗೆ ವ್ಯವಸ್ಥೆ, ಹವಾಮಾನ ಮುನ್ಸೂಚನೆ, ಸಾಫ್ಟ್ ವೇರ್, ಕೃಷಿ, ರಕ್ಷಣಾ ಕ್ಷೇತ್ರ ಹೀಗೆ ಎಲ್ಲವೂ ಸುಸೂತ್ರವಾಗಿ ನಡೆಯೋದು ಈ ಉಪಗ್ರಹಗಳಿಂದಲೇ. ಇವತ್ತು ಉಪಗ್ರಹಗಳಿಲ್ಲದೆ ಈ ಜಗತ್ತು ಒಂದಿಂಚೂ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ಶತೃದೇಶವನ್ನ ಒಂದೇ ಒಂದು ಸಾವೂ ಇಲ್ಲದೇ, ಯುದ್ಧ ವಿಮಾನಗಳ ಅಬ್ಬರ, ಬಾಂಬ್ ದಾಳಿ, ಗುಂಡಿನ ಮೊರೆತ ಏನೇನೂ ಇಲ್ಲದೆ ತನ್ನೆದುರು ಮಂಡಿಯೂರಿಸಿಕೊಳ್ಳಬೇಕು ಅಂದ್ರೆ ಅದು ಅಂತರಿಕ್ಷ ಯುದ್ಧದಿಂದ ಮಾತ್ರ ಸಾಧ್ಯ. ಶತೃದೇಶದ ಉಪಗ್ರಹಗಳನ್ನೇ ಉಡಾಯಿಸಿಬಿಟ್ಟರೆ, ಆ ದೇಶ ಕ್ಷಣ ಮಾತ್ರದಲ್ಲಿ ಅಕ್ಷರಶಃ ಸ್ಥಬ್ಧವಾಗಿಬಿಡುತ್ತದೆ. ಯುದ್ಧ ಅಂದಾಕ್ಷಣ ಶತೃ ದೇಶದ ಮೇಲೆ ಬಾಂಬ್ ಹಾಕೋದು, ಸಾವಿರಾರು ಜನರ ಸಾವು, ಆಸ್ತಿ ಪಾಸ್ತಿ ನಷ್ಟ ಇದೆಲ್ಲವೂ ಹಳೇ ಮಾಡೆಲ್ಲು. ಅಂದರೆ ಮುಂದಿನ ದಿನಗಳಲ್ಲಿ ಯುದ್ಧ ಭೂಮಿ, ಆಕಾಶ, ಸಮುದ್ರದಲ್ಲಿ ನಡೆಯೋಲ್ಲ.. ಅಂತರಿಕ್ಷದಲ್ಲಿ ನಡೆಯುತ್ತೆ. ಈ ಅಂತರಿಕ್ಷ ಯುದ್ಧಕ್ಕೆ ಭಾರತ ಈಗಲೇ ಸಜ್ಜಾಗಿದೆ.
ನವೆಂಬರ್ 4, 2018 ನಿಮ್ಮ ಟಿಪ್ಪಣಿ ಬರೆಯಿರಿ
ಈ ದೇಶವನ್ನು ಬಹುಕಾಲ ಆಳಿದ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅನ್ನೋದಕ್ಕೆ ಕಿಂಚಿತ್ತು ಬೆಲೆ ಇದ್ದಿದ್ದರೆ ಈ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್. ಆಂತರಿಕ ಪ್ರಜಾಪ್ರಭುತ್ವ ಅನ್ನೋದಕ್ಕೆ ಅರ್ಥವೇ ಇಲ್ಲದಿದ್ದರಿಂದ ನೆಹರು ಮೊದಲ ಪ್ರಧಾನಿಯಾದರು. 1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ದೇಶ ಮುನ್ನಡೆಸಬೇಕಿತ್ತು. ದೇಶದ 15 ಕಾಂಗ್ರೆಸ್ ಕಮಿಟಿ ಸದಸ್ಯರಲ್ಲಿ 12 ಮತಗಳು ಸರ್ದಾರ್ ಪಟೇಲ್ರಿಗೆ ಬಿದ್ದಿದ್ದವು. ಉಳಿದ ಮೂರು ಕಮಿಟಿ ಸದಸ್ಯರು ಯಾರನ್ನೂ ಬೆಂಬಲಿಸಲಿಲ್ಲ.. ನೆಹರು ಅವರ ಪರವಾಗಿ ಒಂದೇ ಒಂದು ಮತವೂ ಬೀಳಲಿಲ್ಲ. ಹೀನಾಯ ಸೋಲಿನಿಂದ ಕುದ್ದು ಹೋಗಿದ್ದ ನೆಹರು, ಗಾಂಧೀಜಿ ಅವರ ಬಳಿ ಕಾಂಗ್ರೆಸ್ ಅನ್ನು ಒಡೆಯುವ ಮಾತುಗಳನ್ನಾಡಿದ್ದರು.. ದೇಶ ಕಟ್ಟಬೇಕಾದ ಸಮಯದಲ್ಲಿ ಒಡಕಿನ ಮಾತು ಕೇಳಿದ ಗಾಂಧೀಜಿ, ಸರ್ದಾರ್ ಪಟೇಲರಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಮತ್ತು ಪ್ರಧಾನಿ ಪಟ್ಟದಿಂದ ಹಿಂದೆ ಸರಿಯುವಂತೆ ಸೂಚಿಸಿದರು ಅನ್ನುತ್ತದೆ ನೈಜ ಇತಿಹಾಸ.. ಗಾಂಧೀಜಿಯುವರ ಮೇಲೆ ಅಪಾರ ಗೌರವ ಹೊಂದಿದ್ದ ಸರ್ದಾರ್ ಪಟೇಲ್ ವಿರೋಧದ ಮಾತಾಡದೇ ಹಿಂದೆ ಸರಿದು ಎರಡನೇ ಸ್ಥಾನ ಒಪ್ಪಿಕೊಂಡಿದ್ದರು. ಆದ್ರೆ ಈ ಇತಿಹಾಸವನ್ನು ಸ್ವಾತಂತ್ರಾ ನಂತರದ ಪೀಳಿಗೆಗೆ ಹೇಳದೇ ಮೋಸ ಮಾಡಿದ್ದು ಯಾರು..? ದೇಶ ತುಂಡು ತುಂಡಾಗಲು ಬಿಡದೇ ಬಂಡೆಯಂತೆ ನಿಂತು ಒಗ್ಗೂಡಿಸಿದ ಸರ್ದಾರ್ ಪಟೇಲರಿಗೆ ನೆಹರು ಅವರಿಗೆ ಸಿಕ್ಕ ಪ್ರಾಶಸ್ತ್ಯವಾಗಲೀ, ಗೌರವವಾಗಲೀ ಸಿಗಲಿಲ್ಲ.. ಮೊದಲ ಪ್ರಧಾನಿಯಾದ ನೆಹರು ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡರು.. ಆದ್ರೆ ದೇಶ ಕಟ್ಟಿದ ನೇತಾರನಿಗೆ 1991ರಲ್ಲಿ ಮರಣೋತ್ತರ ಭಾರತ ರತ್ನ ನೀಡಲಾಯಿತು.. ಈಗ ಸರ್ದಾರ್ ಪಟೇಲ್ರ ವ್ಯಕ್ತಿತ್ವದಷ್ಟೇ ಎತ್ತರದ ಪ್ರತಿಮೆ ನಿರ್ಮಿಸಿ ಗೌರವಿಸಲಾಗಿದೆ..
#StatueOfUnity #SardarVallabhbhaiPatel #RashrtriyaEktaDivas #RunForUnity #IronManOfIndia
ಏಪ್ರಿಲ್ 13, 2018 1 ಟಿಪ್ಪಣಿ
ಅದು 99 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಆ ಹತ್ಯಾಕಾಂಡದ ರೂವಾರಿ ನಿರ್ಧಯಿ ಪಶು ಜನರಲ್ ಡಯರ್. ಇಷ್ಟೊಂದು ದೊಡ್ಡ ಮಟ್ಟದ ನಿರ್ಧಯ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಬೇರೆ ಯಾವುದೂ ಇಲ್ಲ… ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಆ ಹತ್ಯಾಕಾಂಡದಲ್ಲಿ ಅವತ್ತು ಪ್ರಾಣಬಿಟ್ಟಿದ್ದು 1200 ಕ್ಕೂ ಹೆಚ್ಚು ಅಮಾಯಕರು…ಇಂದಿಗೆ ಆ ಘಟನೆ ನಡೆದು 99 ವರ್ಷ. ಅದು ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನ. 1919 ರ ಏಪ್ರಿಲ್ 13 ರಂದು ಅವತ್ತು ಉಧ್ಯಾನದಲ್ಲಿ ಸಾವಿರಾರು ಮಂದಿ ಬೈಸಾಕಿ ಹಬ್ಬ ಆಚರಿಸಲು ಸೇರಿದ್ದರು. ಬೈಸಾಕಿ ಹಬ್ಬ ಸಿಕ್ಕರ ಸಂಭ್ರಮದ ದಿನಗಳಲ್ಲೊಂದು. ಹಬ್ಬಕ್ಕೆ ಅಂತ ಸೇರಿದ್ದ ಜನರಲ್ಲಿ ಬ್ರಿಟೀಷರ ವಿರುದ್ಧದ ಆಕ್ರೋಶ ಇತ್ತು. ಹಾಗಾಗಿಯೇ ಉದ್ಯಾನವನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಸಾವಿರಾರು ಮಂದಿ. ಅವತ್ತು ಸಂಜೆ ಐದೂ ಹದಿನೈದರ ಸಮಯ. 90 ಸೈನಿಕರೊಂದಿಗೆ ಉದ್ಯಾನಕ್ಕೆ ರಕ್ತಪಿಪಾಸುವಂತೆ ಬಂದವನು ಜನರಲ್ ಡಯರ್. ಒಳಬಂದವನೇ ಒಂದಿನಿತೂ ಯೋಚಿಸದೇ ಸೈನಿಕರಿಗೆ ಗುಂಡಿನ ಮಳೆಗರೆಯುವಂತೆ ಆಜ್ಞೆಯಿತ್ತಿದ್ದ. ಸುಮಾರು 15 ನಿಮಿಷಗಳ ಕಾಲ ಗುಂಡಿನ ಬೋರ್ಗರೆತ. ಅಷ್ಟೇ ಉದ್ಯಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಉಸಿರನ್ನ ಅಷ್ಟು ಬರ್ಭರವಾಗಿ ನಿಲ್ಲಿಸಲಾಗಿತ್ತು.
ಅವತ್ತು ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲೆಂದು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಅವತ್ತಿನ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ 379. ಇದು ಅಂದಿನ ಬ್ರಿಟಿಷ್ ಸರ್ಕಾರ ಕೊಟ್ಟ ಕಾಟಾಚಾರದ ಲೆಕ್ಕಾಚಾರ. ಅಸಲಿಗೆ ಅವತ್ತು ಬ್ರಿಟಿಷರ ಗುಂಡಿಗೆ ಬಲಿಯಾದವರ ಸಂಖ್ಯೆ 1200 ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಮಕ್ಕಳೂ ಮಹಿಳೆಯರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಕಾನೂನು ಬಾಹಿರವಾಗಿ ಇಷ್ಟೊಂದು ದೊಡ್ಡ
ಸಂಖ್ಯೆಯಲ್ಲಿ ಜನ ಸೇರಿದ್ದು ಅಪರಾಧನ ಅದಕ್ಕಾಗಿಯೇ ಈ ಶಿಕ್ಷೆ ಅಂದಿತ್ತು ಅವತ್ತಿನ ಬ್ರಿಟಿಷ್ ಸರ್ಕಾರ. ಇಷ್ಟೊಂದು ಜನರನ್ನ ಹೀಗೆ ನಿಲ್ಲಿಸಿ ಗುಂಡು ಹೊಡೆಯುವುದು ಯಾವ ಕಾನೂನು ಅಂತ ಪ್ರಶ್ನಿಸುವ ಗುಂಡಿಗೆ ಯಾರಿಗೂ ಇರಲಿಲ್ಲ. ಕಾಟಾಚಾರಕ್ಕೊಂದು ತನಿಖಾ ಸಮಿತಿ ನೇಮಕ ಮಾಡಿ ಕೈತೊಳೆದುಕೊಂಡಿತ್ತು ಬ್ರಿಟಿಷ್ ಸರ್ಕಾರ. ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆಯೂ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಹಾಗೆ 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲದಿನಗಳ ನಂತರ ಬ್ರಿಟನ್ ಗೆ ಹೋಗಿ ನೆಮ್ಮದಿಯಾಗಿಬಿಟ್ಟ. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿಗೂ ಇರಲಿಲ್ಲ, ನೆಹರೂ ಗೂ ಇರಲಿಲ್ಲ. ಅವತ್ತಿನ ಘಟನೆಯನ್ನ ಕೇಳಿ ಅಕ್ಷರಶಃ ಕುದ್ದು ಹೋದವನು ಬಾಲಕ ಉದಮ್ ಸಿಂಗ್. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು ತನ್ನ ಜೀವಿತಾವದಿಯವರೆಗೂ ಜೊತೆಯಲ್ಲಿಟ್ಟುಕೊಂಡಿದ್ದ, ಬ್ರಿಟೀಷರನ್ನ ಭಾರತದಿಂದ ಹೊರಗಟ್ಟಲೇ ಬೇಕು ಅಂತ ಪಣ ತೊಟ್ಟಿದ್ದ.
ಜಲಿಯನ್ ವಾಲಾಬಾಗ್ನಲ್ಲಿ ಮಾರಣಹೋಮ ನಡೆಸಿದ್ದ ಜನರಲ್ ಡಯರ್ನನ್ನ ಅವನು ಮಾಡಿದ ಪಾಪವೇ ಬಲಿತೆಗೆದುಕೊಂಡಿತ್ತು. 1200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಎಂಟೇ ವರ್ಷಕ್ಕೆ ಜನರಲ್ ಡಯರ್ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದ. ಅದಾದ ನಂತರ ಕೊನೆಯ ದಿನಗಳಲ್ಲಿ ಆತನಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಮಾಡಿದ ಘೋರ ಅಪರಾಧಕ್ಕೆ ಶಿಕ್ಷೆ ಅನುಭವಿಸಿದವನಂತೆ ಜನರಲ್ ಡಯರ್ 1927ರ ಒಂದು ದಿನ ಮಲಗಿದ್ದಲ್ಲೇ ಕಣ್ಣು ಮುಚ್ಚಿದ. ಅಲ್ಲಿಗೆ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಗೆ ಕಾರಣವಾಗಿದ್ದವನ ಕತೆ ಅಂತ್ಯವಾಗಿತ್ತು.
ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೆ ಪ್ರತೀಕಾರದ ಸೇಡಿನ ಜ್ವಾಲೆ ಮಾತ್ರ ಆರಿರಲಿಲ್ಲ. ಮಾರಣ ಹೋಮದ ಸೇಡಿನ ಜ್ಬಾಲೆ ದಹಿಸುತ್ತಿದ್ದದ್ದು ಅವನೊಬ್ಬನಲ್ಲಿ ಮಾತ್ರ. ಆತನ ಹೆಸರು ಉದಮ್ ಸಿಂಗ್. ಹತ್ಯಾಕಾಂಡವನ್ನ ಕಣ್ಣಾರೆ ನೋಡಿದ್ದ ಮತ್ತು ಬ್ರಿಟೀಷರ ಗುಂಡುಗಳಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರ ಕೈಗೊಳ್ಳಲು ಪಣ ತೊಟ್ಟಿದ್ದ. ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಗುಂಡಿಟ್ಟಿದ್ದವನು ಆಗಲೇ ಪ್ರಾಣ ಬಿಟ್ಟಾಗಿತ್ತು. ಆದ್ರೆ ಜನರಲ್ ಡಯರ್ಗೆ ಹಾಗೆ ಜನರ ಮೇಲೆ ಗುಂಡಿನ ಮಳೆ ಸುರಿಸುವಂತೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರು ಮೈಕಲ್. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್ನ ಲೆಫ್ಟಿನೆಂಟ್ ಗೌವರ್ನರ್ ಆಗಿದ್ದವನು ಈ ಮೈಕಲ್. ಮೈದಾನದಲ್ಲಿ ಸೇರಿದ್ದ ಜನರ ಮೇಲೆ ಸಾಮೂಹಿಕವಾಗಿ ಗುಂಡಿಕ್ಕಲು ಈತನ ಆದೇಶವೇ ಕಾರಣ ಅನ್ನೋದು ಬಹಿರಂಗವಾಗಲು ತುಂಬಾ ದಿನಗಳೇನು ಹಿಡಿಯಲಿಲ್ಲ. ಈ ಬಗ್ಗೆ ಮಾತನಾಡಿದ್ದ ಮೈಕಲ್ ಹತ್ಯಾಕಾಂಡ ನಡೆಸಿದ್ದು ಸರಿಯಾದ ಕ್ರಮವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದ. ಜನರಲ್ ಡಯರ್ಗೆ ಹತ್ಯಾಕಾಂಡ ನಡೆಸುವಂತೆ ಲೆಫ್ಟಿನೆಂಟ್ ಗೌವರ್ನರ್ ಆಗಿದ್ದ ಮೈಕಲ್ ಸ್ವತಃ ಸೂಚನೆ ನೀಡಿದ್ದ ಅನ್ನೋದು ಆತನ ಈ ಹೇಳಿಕೆಯಿಂದ ಸ್ಪಷ್ಟವಾಗಿ ಹೋಗಿತ್ತು. ಅದಕ್ಕೇ ಹೇಳಿದ್ದು ಪ್ರತೀಕಾರದ ಜ್ವಾಲೆ ಆರಿರಲಿಲ್ಲ ಅಂತ.
ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್ ಮೈಕಲ್ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. ಆ ಗುರಿಯ ಸಾಕಾರಕ್ಕಾಗಿ ಉದಮ್ ಸಿಂಗ್ ಹೋರಾಟ ನಡೆಸಿದ್ದು ಬರೊಬ್ವರಿ ಇಪ್ಪತ್ತೊಂದು ವರ್ಷ. 1927 ರಲ್ಲಿ ಉದಮ್ ಸಿಂಗ್ ನನ್ನ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಬ್ರಿಟೀಷ್ ಇಂಡಿಯಾ ಸರ್ಕಾರ ಬಂಧಿಸಿತ್ತು. ಬ್ರಿಟೀಷರ ಹಿಂಸಾತ್ಮಕ ಅಂತ್ಯಕ್ಕಾಗಿ ಹೋರಾಡುತ್ತಿದ್ದೇನೆ ಅಂತ ಕೋರ್ಟ್ ನಲ್ಲಿ ದಿಟ್ಟತನದಿಂದ ಹೇಳಿದ್ದ ಉದಮ್ ಸಿಂಗ್.
ಹಾಗೆ ಉದಮ್ ಸಿಂಗ್ ನನ್ನ ನಾಲ್ಕು ವರ್ಷಗಳ ಕಾಲ ಜೈಲುಕಂಬಿಯ ಹಿಂದೆ ತಳ್ಳಿತ್ತು ಬ್ರಿಟೀಷ್ ಸರ್ಕಾರ. ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಉದಮ್ ಸಿಂಗ್ ಗೆ ಬ್ರಿಟೀಷರ ಮೇಲಿನ ದ್ವೇಷದ ಜ್ವಾಲೆ ಇನ್ನಷ್ಟು ಹೆಚ್ಚಾಗಿತ್ತು. ಹತ್ಯಾಕಾಂಡಕ್ಕೆ ಕಾರಣವಾದವನ ರಕ್ತ ಹರಿಸಲೇಬೇಕು ಎಂದು ಉದಮ್ ಸಿಂಗ್ ನಿರ್ಧರಿಸಿದ್ದ. ಹೇಗಾದರೂ ಮಾಡಿ ಇಂಗ್ಲೆಂಡ್ ತಲುಪಿಬಿಡುವ ನಿರ್ಧಾರ ಮಾಡಿಬಿಟ್ಟಿದ್ದ. 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದ ಉದಮ್ ಸಿಂಗ್ ಆ ನಂತರ ಇಂಗ್ಲೆಂಡ್ ಮುಟ್ಟಿದ್ದ. ಲಂಡನ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮೈಕೆಲ್ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಆ ದಿನ ಬಂದೇ ಬಿಟ್ಟಿತ್ತು, ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಹತ್ಯಾಕಾಂಡಕ್ಕೆ ಪ್ರತೀಕಾರ ತೆಗೆದುಕೊಳ್ಳುವ ಅವಕಾಶ ಉದಮ್ ಸಿಂಗ್ ಗೆ ಸಿಕ್ಕಿಬಿಟ್ಟಿತ್ತು. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಲೆಫ್ಟಿನೆಂಟ್ ಗೌವರ್ನರ್ ಮೈಕಲ್ ಬಂದಿದ್ದ. ಇದೇ ಸರಿಯಾದ ಸಮಯ ಎಂದು ಉದಮ್ ಸಿಂಗ್ ಆ ಕಾರ್ಯಕ್ರಮಕ್ಕೆ ಹೋಗಿದ್ದ. ಅಷ್ಟೇ ಉದಮ್ ಸಿಂಗ್ ಕೈನಲ್ಲಿದ್ದ ಪಿಸ್ತುಲ್ನಿಂದ ಎರಡು ಗುಂಡುಗಳು ಕ್ಷಣ ಮಾತ್ರದಲ್ಲಿ ಮೈಕಲ್ ಎದೆ ಹೊಕ್ಕಿದ್ದವು. ಅಷ್ಟೇ ಕೆಳಗೆ ಬಿದ್ದವನು ಅಲ್ಲೇ ಪ್ರಾಣ ಬಿಟ್ಟ. ಹಾಗೆ ಗುಂಡಿಗೆ ಗುಂಡಿನಿಂದಲೇ ಉತ್ತರಿಸಿ ಪ್ರತೀಕಾರ ತೀರಿಸಿಕೊಂಡಿದ್ದ ಉದಮ್ ಸಿಂಗ್.
ಉದಮ್ ಸಿಂಗ್ ಮಾಡಿದ ಕೆಲಸವನ್ನ ಇಡೀ ದೇಶ ಪ್ರಶಂಸಿಸಿತ್ತು. ಆದರೇ ಆ ಇಬ್ಬರ ಹೊರತಾಗಿ. ಮಹಾತ್ಮ ಗಾಂಧಿ ಮತ್ತು ನೆಹರೂ ಈ ಪ್ರತೀಕಾರವನ್ನ ವಿವೇಚನಾ ರಹಿತ ಎಂದಿದ್ದರು. ಅವತ್ತು 1200 ಮಂದಿಯ ರಕ್ತ ನಿರ್ಧಯವಾಗಿ ಹರಿದಾಗ ವಿವೇಚನೆ ಎಲ್ಲಿತ್ತು ಎಂಬ ಬಗ್ಗೆ ಒಂದಿನಿತೂ ಯೋಚಿಸಿರಲಿಲ್ಲ ಈ ಇಬ್ಬರು ಮಹಾನ್ ನಾಯಕರು. ಸತ್ತವರ ಗೋರಿಯ ಮೇಲೆ ಇಂತದ್ದೊಂದು ಷರಾ ಬರೆದು ನಿರಮ್ಮಳವಾಗಿಬಿಟ್ಟರು. ಆದ್ರೆ ಉದಮ್ ಸಿಂಗ್ ಹೇಳಿದ್ದು ಮಾತ್ರ ಕೆಚ್ಚದೆಯ ಮಾತುಗಳನ್ನ. ” ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ದ್ವೇಷ. ಆತನ ಸಾವನ್ನ ಅವನೇ ಬರಮಾಡಿಕೊಂಡ. ನನ್ನ ಜನಗಳ ರಕ್ತಕುಡಿದವನನ್ನ ನಾನು ಅಳಿಸಿ ಹಾಕಿದೆ. ಇಪ್ಪತ್ತೊಂದು ವರ್ಷಗಳಿಂದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನನಗೀಗ ಆನಂದವಾಗಿದೆ, ನಾನು ಬ್ರಿಟೀಷರಿಂದ ಸಾಯುತ್ತಿರುವ ಭಾರತೀಯರನ್ನ ನೋಡಿದ್ದೇನೆ. ಇದು ನನ್ನ ಕರ್ತವ್ಯ ತಾಯ್ನಾಡಿಗಾಗಿ ನಾನು ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ.” ಹೀಗೆ ದಿಟ್ಟತನದ ಮಾತುಗಳನ್ನಾಡಿ ಪ್ರತೀಕಾರ ತೆಗೆದುಕೊಂಡವನನ್ನ ಮೂರು ತಿಂಗಳಲ್ಲೇ ಮೈಕಲ್ ಹತ್ಯೆ ಆರೋಪದ ಮೇಲೆ ನೇಣಿಗೇರಿಸಲಾಯಿತು.
ಸ್ವಾತಂತ್ರಾ ನಂತರ ಅಂದಿನ ನಮ್ಮ ಪ್ರಧಾನಿ ನೆಹರು ಹೇಳಿದ್ದೇನು ಗೊತ್ತಾ… “ನಾವೆಲ್ಲರೂ ಸ್ವತಂತ್ರರಾಗಲು ಪ್ರಾಣ ಪಣಕ್ಕಿಟ್ಟ ಶಾಹಿದ್-ಇ-ಅಜೀಮ್ ಉದಮ್ ಸಿಂಗ್ ನನ್ನ ಗೌರವಾದರಗಳಿಂದ ನಮಿಸುವೆ.” ಮೈಕಲ್ನನ್ನು ಹತ್ಯೆ ಮಾಡಿದಾಗ ಬ್ರಿಟೀಷರನ್ನು ಓಲೈಸಲು ವಿವೇಚನಾ ರಹಿತ ಅಂತ ಖಂಡಿಸಿದ್ದ ನೆಹರು ಸ್ವತಂತ್ರ್ಯ ಸಿಕ್ಕಮೇಲೆ ಉದಮ್ ಸಿಂಗ್ ಗೆ ನಮಿಸುವ ಮಾತುಗಳನ್ನಾಡಿದ್ದರು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಸಮಾದಿಯ ಮೇಲೆ ನೆಹರು ಪ್ರಧಾನಿಯಾಗಿ ವಿರಾಜಮಾನರಾದರು. ಇದಾದ ಮೇಲೆ ಸ್ವತಃ ನೆಹರು, ಜಲಿಯನ್ ವಾಲಾಬಾಗ್ ನಲ್ಲಿ ಮಾರಣ ಹೋಮದ ನೆನಪಿಗೆ ನಿರ್ಮಿಸಲಾದ ಸ್ಮಾರಕವನ್ನು ಉದ್ಘಾಟಿಸಿದ್ರು. ಅವತ್ತು ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದವರ ಆತ್ಮಗಳು ನೆಹರು ಅವರನ್ನ ನೋಡಿ ಅದೆಷ್ಟು ಅಸಹ್ಯ ಪಟ್ಟುಕೊಂಡವೋ….
ಏಪ್ರಿಲ್ 5, 2018 ನಿಮ್ಮ ಟಿಪ್ಪಣಿ ಬರೆಯಿರಿ
ದೊಡ್ಡ ಅಭಿಮಾನಿ ಬಳಗವನ್ನಿಟ್ಟುಕೊಂಡವನು ಕಂಠಪೂರ್ತಿ ಕುಡಿದು ಯಾರ ಮೇಲೆ ಬೇಕಾದರೂ ಕಾರು ಹತ್ತಿಸಬಹುದು. ಸಂರಕ್ಷಿತ ವನ್ಯಜೀವಿಗಳನ್ನು ಭೇಟೆಯಾಡಬಹುದು. ಅಂಥವನನ್ನು ಈ ದೇಶದ ಕಾನೂನು ಅಪರಾಧಿ ಎಂದು ಘೋಷಿಸಿ ಜೈಲಿಗೆ ತಳ್ಳಿದರೆ ಬಾಲಿವುಡ್ ಸ್ಟಾರ್ ಗಳು, ಆತನ ಅಂಧ ಅಭಿಮಾನಿಗಳು #WeLoveYouSalmanKhan , #SaveSalman ಎಂದು ಅಭಿಯಾನ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರ ಹುಚ್ವು ಅಭಿಮಾನಕ್ಕೆ, ಲಜ್ಜೆಗೇಡಿತನಕ್ಕೆ..! ಬಾಲಿವುಡ್ ನಟನಾದ ಮಾತ್ರಕ್ಕೆ, ದೊಡ್ಡ ಅಭಿಮಾನಿ ಬಳಗ ಹೊಂದಿದ ಮಾತ್ರಕ್ಕೆ ಆತನನ್ನು ಈ ದೇಶದ ಕಾನೂನು ಕ್ಷಮಿಸಬೇಕಾ..? ಈ ದೇಶದಲ್ಲಿ ಶ್ರೀಮಂತರಿಗೊಂದು ಕಾನೂನು, ಬಡವರಿಗೊಂದು ಕಾನೂನಿದೆಯಾ..? ಕಾನೂನಿನ ಪ್ರಕಾರ ಅಪರಾಧಿ ಎಂದು ಘೋಷಿಸಲ್ಪಟ್ಟವನು ಯಾರೇ ಆದರೂ, ಎಂಥವನೇ ಆದರೂ ಆತನ ಬಗ್ಗೆ ಮೊಸಳೆ ಕಣ್ಣೀರು ಸುರಿಸಬೇಕಾ..? 20 ವರ್ಷಗಳ ನಂತರ ತೀರ್ಪು ಬಂದರೆ ಆರೋಪ ಹೊತ್ತವನ ಬೆಂಬಲಕ್ಕೆ ನಿಲ್ಲಬೇಕಾ..? ‘Justice is delayed is Justice denied ‘ ಅನ್ನೋ ಮಾತು ಸಲ್ಮಾನ್ ಖಾನ್ ನ ಹಿಟ್ ಅಂಡ್ ರನ್ ಕೇಸಿಗೆ, ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕೆ ಅನ್ವಯವಾಗುವುದಿಲ್ಲವಾ..? ಮುಂಬೈ ದಾಳಿ ಸಂಚಿನ ಕೇಸ್ ನಲ್ಲಿ ಸಂಜಯ್ ದತ್ ಗೆ ಶಿಕ್ಷೆ ಘೋಷಿಸಿದಾಗಲೂ ಇದೇ ರೀತಿಯ ನಾಚಿಕೆಗೇಡಿನ ಅಭಿಯಾನ ನಡೆದಿತ್ತು. ಇವತ್ತು ಸಲ್ಮಾನ್ ಪರ ಅಭಿಯಾನ ಮಾಡುತ್ತಿರುವವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಎಂದಾದರೂ ತುಟಿಬಿಚ್ಚಿದ್ದಾರಾ..? ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗುತ್ತಿದೆ ಅನ್ನೋ ಆ್ಯಂಗಲ್ ಅನ್ನೂ ಕೂಡ ಹುಡುಕಿಬಿಟ್ಟಿದ್ದಾರೆ… ಥೂ ಇವರ ಜನ್ಮಕ್ಕಿಷ್ಟು.. ಇಲ್ಲಿಗೂ ಜಾತಿ-ಧರ್ಮ ಎಳೆತಂದುಬಿಟ್ಟರು. ರಾಜಕಾರಣಿಗಳಿಗೆ ಶಿಕ್ಷೆ ವಿಧಿಸಿದಾಗಲೂ ಷಡ್ಯಂತ್ರ, ರಾಜಕೀಯ ಅಂತಲೇ ವಾದಿಸಲಾಗುತ್ತೆ. ಹಾಗಾದ್ರೆ ಈ ದೇಶದ ಕಾನೂನು ಬಡವರು, ದುರ್ಬಲರಿಗೆ ಮಾತ್ರ ಶಿಕ್ಷೆ ವಿಧಿಸಬೇಕಾ..? ಸಲ್ಮಾನ್ ಖಾನ್ ಗೆ ಇರುವ ಬದುಕುವ ಹಕ್ಕು ಕೃಷ್ಣ ಮೃಗಕ್ಕಿರಲಿಲ್ಲವಾ..? ಅವತ್ತು ಫುಟ್ ಪಾತ್ ನಲ್ಲಿ ಪ್ರಾಣ ಬಿಟ್ಟ ಬಡವನಿಗಿರಲಿಲ್ಲವಾ..? #SalmanConvicted #JailForSalman #SalmanIsGuilty
ಮಾರ್ಚ್ 31, 2018 ನಿಮ್ಮ ಟಿಪ್ಪಣಿ ಬರೆಯಿರಿ
ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮತ್ತು ಸಂವಿಧಾನ ರಕ್ಷಿಸಲು ಈ ಪ್ರಯತ್ನ ನಡೆಸಿರುವುದಾಗಿ ಪ್ರಗತಿಪರರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎಚ್ಡಿ ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯ ಸಭೆ ನಂತರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು, ‘ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದವಿದ್ದರೆ ಅವರೇ ಸೀಟು ಹಂಚಿಕೆಯನ್ನು ಘೋಷಣೆ ಮಾಡಲಿ’ ಎಂದು ವ್ಯಂಗ್ಯವಾಡಿದ್ದರು. ಇದನ್ನೇ ಆಸೆಗಣ್ಣಿನಿಂದ ನೋಡುತ್ತಿದ್ದ ಪ್ರಗತಿಪರರು ತಾವು ಬಂದ ಕೆಲಸ ಸಾಧಿಸಿಯೇಬಿಟ್ಟೆವು, ಕಾಂಗ್ರೆಸ್ ಜೊತಿಗಿನ ಮೈತ್ರಿಗೆ ಗೌಡರು ಒಪ್ಪಿಯೇಬಿಟ್ಟರು ಎಂದು ಯುದ್ಧ ಗೆದ್ದ ಸಂತಸದಿಂದ ಅಲ್ಲಿಂದ ತೆರಳಿದರು. ಅಷ್ಟರಲ್ಲಾಗಲೇ ಕಾಂಗ್ರೆಸ್ ಜೊತೆ ಮೈತ್ರಿಗೆ ದೊಡ್ಡ ಗೌಡರು ಸಿದ್ದ ಅನ್ನೋ ಸುದ್ದಿ ಸುದ್ದಿ ವಾಹಿನಿಗಳಲ್ಲಿ ರಾರಾಜಿಸುತ್ತಿತ್ತು. ತಕ್ಷಣ ಎಚ್ಚೆತ್ತ ದೊಡ್ಡಗೌಡರು ಪತ್ರಿಕಾಗೋಷ್ಠಿ ಕರೆದು ಮತ್ತೊಂದು ದಾಳ ಉರುಳಿಸಿಬಿಟ್ಟರು. ‘ಒಳ್ಳೆಯ ಸದುದ್ದೇಶದಿಂದ ಪ್ರಗತಿಪರರು ತಮ್ಮನ್ನು ಭೇಟಿಯಾಗಿದ್ದರು. ಮೈತ್ರಿ ಮಾಡಿಕೊಳ್ಳುವ ಉದ್ದೇಶ ಕಾಂಗ್ರೆಸ್ಗೆ ಇದ್ದರೆ ಸೀಟು ಹಂಚಿಕೆಯನ್ನು ಬಹಿರಂಗವಾಗಿ ಘೋಷಿಸುವಂತೆ ಸಾಂಧರ್ಬಿಕವಾಗಿ ಹೇಳಿದ್ದೆ ಅಷ್ಟೇ. ವ್ಯಂಗ್ಯವಾಗಿ ಹೇಳಿದ್ದನ್ನೇ ಮೈತ್ರಿಗೆ ಸಿದ್ದ ಎಂದು ಬಿಂಬಿಸಲಾಗುತ್ತಿದೆ. ಈಗ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಮಯ ಎಲ್ಲಿದೆ, ಮೈತ್ರಿಗೆ ನಾಯಕತ್ವ ವಹಿಸುವವರಾರು’ ಎಂದು ಹೇಳಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ತಮಗೆ ಮನಸ್ಸಿಲ್ಲ ಎಂದುಬಿಟ್ಟರು. ಅಲ್ಲಿಗೆ ಯುದ್ಧ ಗೆದ್ದ ಸಂತಸದಲ್ಲಿದ್ದ ಪ್ರಗತಿಪರರ ಸಂಭ್ರಮವೂ ಮುಗಿದಿತ್ತು.
ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗದಂತೆ ತಡೆಯಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೋರಾಟಕ್ಕಿಳಿದಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಜೊತೆ ಮೈತ್ರಿಗೆ ಬನ್ನಿ ಎಂದು ಆಹ್ವಾನಿಸಲು ಹೋದ ಪ್ರಗತಿಪರರನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಇಂಟರ್ನಲ್ ಮಾಹಿತಿ. ಕಾಂಗ್ರೆಸ್ ರೈತರು ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಅನ್ನೋದನ್ನ ಪ್ರಗತಿಪರರಿಗೆ ಮುಖಕ್ಕೆ ಹೊಡೆದಂತೆ ದೊಡ್ಡಗೌಡರು ಹೇಳಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಬಿಜೆಪಿಯನ್ನು ಮಣಿಸಲು ತಾವು ಪ್ರಯತ್ನಿಸುವುದಾಗಿ ಹೇಳಿ ಮನೆಯವರೆಗೂ ಬಂದಿದ್ದವರನ್ನು ಸಾಗಹಾಕಿದ್ದಾರೆ..
ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯಕ್ಕೆ ಬೆಲೆ ಸಿಗಲಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಈ ಪ್ರಗತಿಪರರ ಗುಂಪು ಛಲಬಿಡದಂತೆ ತಮ್ಮ ಪ್ರಯತ್ನವನ್ನು ಮುಂದುವರಿಸಿ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮನವೊಲಿಸುವ ಮಾತನ್ನಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಾಂಗ್ರೆಸ್ನ ಬಿ ಟೀಂ ನಂತೆಯೇ ಕೆಲಸ ಮಾಡುವುದರಿಂದ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿದವರ ಜೊತೆ ಸಂತಸದಿಂದಲೇ ಮಾತನಾಡಿದ್ದಾರೆ. ಚುನಾವಣಾ ಪೂರ್ವವಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್ಗೆ ಇಲ್ಲ. ಕಾಂಗ್ರೆಸ್ ಸ್ವಂತಬಲದಿಂದಲೇ ಅಧಿಕಾರ ಹಿಡಿಯಲಿದೆ. ಒಂದು ವೇಳೆ ಅತಂತ್ರದ ಪರಿಸ್ಥಿತಿ ಬಂದರೆ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿ ತಮ್ಮನ್ನು ಭೇಟಿ ಮಾಡಿದವರ ನಿರೀಕ್ಷೆ ಹುಸಿಯಾಗದಂತೆ ಮಾಡಿ ಕಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ‘ತಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದರೆ ಸಾಕು ಕಾಂಗ್ರೆಸ್ ದೂಳಿಪಟವಾಗಿಬಿಡುತ್ತದೆ’ ಎಂದು ಎಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ಪ್ರಗತಿಪರರ ಪೌರೋಹಿತ್ಯ ಆರಂಭವಾಗಿದೆ. ಜೆಡಿಎಸ್ ಬಿಜೆಪಿಯತ್ತ ಸರಿಯುತ್ತಿರೋ ಸೂಚನೆ ಅರಿತು ಪ್ರಗತಿಪರರ ಗುಂಪು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.
ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೋದಿ ವಿರೋಧಿ ಕಾರ್ಯತಂತ್ರವನ್ನೇ ಅನುಸರಿಸುತ್ತಿರುವ ಪ್ರಗತಿಪರರ ಗುಂಪು ಒಂದೇ ಒಂದು ದಿನವೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿಯೇ ಇಲ್ಲ. ಮಾತನಾಡುವ ಸಂದರ್ಭಗಳು ಬಂದಾಗಲೂ ಈ ಗುಂಪು ಜಾಣ ಮೌನಕ್ಕೇ ಶರಣಾಗಿತ್ತು. ರಾಜ್ಯದಲ್ಲಿ ಸಾಲು ಸಾಲು ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಾಗ ಯಾವ ಬುದ್ಧಿಜೀವಿ, ಪ್ರಗತಿಪರರೂ ಸರ್ಕಾರದ ವಿರುದ್ಧ ಮಾತನಾಡಲಿಲ್ಲ, ಸರ್ಕಾರವನ್ನು ಎಚ್ಚರಿಸಲೂ ಇಲ್ಲ. ಟಿಪ್ಪು ಜಯಂತಿ ವಿಚಾರವಾಗಿ ಆಕ್ರೋಶ ವ್ಯಕ್ತವಾದಾಗಲೂ ಈ ಸಮುದಾಯ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೇ ನಿಂತಿತ್ತು. ಬೆಂಗಳೂರಿನಲ್ಲಿ ಆರೂವರೆ ಕಿಲೋಮೀಟರ್ ರಸ್ತೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಸರ್ಕಾರ 1800 ಕೋಟಿ ಸುರಿಯಲು ಮುಂದಾದಾಗ ಬೆಂಗಳೂರಿಗೆ ಬೆಂಗಳೂರೇ ಬೀದಿಗೆ ಬಂದು ಸರ್ಕಾರದ ವಿರುದ್ಧ ನಿಂತಿತ್ತು. ಇಂತಹ ಸಂದರ್ಭದಲ್ಲಿಯೂ ಈ ಪ್ರಗತಿಪರರ ಗುಂಪು ಮಾತಾಡಲಿಲ್ಲ. ರೈತರ ಸಾವಿರಾರು ಎಕರೆ ಜಮೀನು ಕೊಳ್ಳೆ ಹೊಡೆದ ಆರೋಪ ಹೊತ್ತ ಅಶೋಕ್ ಖೇಣಿಯನ್ನು ಸಿಎಂ ಸಿದ್ದರಾಮಯ್ಯನವರೇ ಅಪ್ಪಿಕೊಂಡು ಕಾಂಗ್ರೆಸ್ಗೆ ಸೇರಿಸಿಕೊಂಡಾಗಲೂ ಇವರದ್ದು ಅದೇ ದಿವ್ಯ ಮೌನ. ಬಂಡವಾಳಶಾಹಿಗಳ ಬಗ್ಗೆ ಮಾತನಾಡುವ ಪ್ರಗತಿಪರರಿಗೆ ಅಶೋಕ್ ಖೇಣಿ ಬಡವರ ಬಂಧುವಂತೆ ಕಾಣಿಸಿದರಾ..? ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಸಿಎಂ ಸಿದ್ದರಾಮಯ್ಯನವರ ಆಡಳಿತವನ್ನು ಪ್ರಶ್ನಿಸದೇ ತಮ್ಮ ಬಾಣವನ್ನು ಮೋದಿ ಕಡೆಗೆ ಹೂಡಿದ್ದು ಇದೇ ಪ್ರಗತಿಪರರು. ಗೌರಿ ಹಂತಕರನ್ನು ಆರು ತಿಂಗಳಾದರೂ ಬಂಧಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಕಾರವನ್ನೂ ಎತ್ತುತ್ತಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜಕೀಯ ಹತ್ಯೆಗಳಾದಾಗ, ಲೋಕಾಯುಕ್ತರ ಕಚೇರಿಗೇ ನುಗ್ಗಿ ಲೋಕಾಯುಕ್ತರ ಹತ್ಯೆಗೆ ಯತ್ನಿಸಿದ ಘಟನೆ ನಡೆದಾಗ, ನಲಪಾಡ್ ಎಂಬ ಕಾಂಗ್ರೆಸ್ನ ಪುಂಡ ಗೂಂಡಾಗಿರಿ ನಡೆಸಿದಾಗ, ಈ ಯಾವ ಸನ್ನಿವೇಶಗಳಲ್ಲೂ ಪ್ರಗತಿಪರ/ಬುದ್ಧಿಜೀವಿಗಳ ವಲಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದೇ ಒಂದು ಮಾತನ್ನೂ ಆಡಲಿಲ್ಲ. ಬಿಜೆಪಿ ಮತ್ತು ಮೋದಿ ವಿರುದ್ಧ ಕೆಂಡಕಾರುವವರು ಇಂತಹ ಯಾವುದಾದರೂ ಒಂದು ಸನ್ನಿವೇಶದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಬಹುದಿತ್ತು ಅಲ್ಲವಾ..? ಇಂತವರು ಈಗ ಕಾಂಗ್ರೆಸ್ ಪರ ಬ್ಯಾಟಿಂಗ್ಗೆ ಇಳಿದಿದ್ದಾರೆ. ಈ ಗುಂಪು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದನ್ನು ಬಿಟ್ಟು ಕಾಂಗ್ರೆಸ್ ವಕ್ತಾರರು, ಕಾರ್ಯಕರ್ತರು, ಅವಕಾಶವಾದಿಗಳು ಎಂದು ಕರೆದುಕೊಂಡರೆ ಅರ್ಥಪೂರ್ಣವಾಗಿರುತ್ತದೆ. ಆ ಮೂಲಕವಾದರೂ ತಮ್ಮ ಮುಖವಾಡವನ್ನು ಕಳಚಿಕೊಂಡು ಅಸಲೀ ಮುಖವನ್ನು ಪ್ರದರ್ಶಿಸಿದಂತಾಗುತ್ತದೆ. ಇವರಿಗೂ ಮೋದಿ ಭಕ್ತರಿಗೂ ಯಾವ ವ್ಯತ್ಯಾಸವಿದೆ ಹೇಳಿ..
ಬಿಜೆಪಿ ಅಧಿಕಾರದಲ್ಲಿದ್ದರೆ ಸಂವಿಧಾನಕ್ಕೆ ದಕ್ಕೆಯಾಗುತ್ತದೆ ಅನ್ನೋದು ಈ ಅವಕಾಶವಾದಿಗಳ ವಾದ. ಕೇಂದ್ರದಲ್ಲಿ ಮತ್ತು 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಸಂವಿಧಾನಕ್ಕೆ ಯಾವ ಅಪಾಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತಾ..? ಇದೇ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಅಲ್ಲವಾ ಮೋದಿ ಪ್ರಧಾನಿಯಾಗಿರೋದು, ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದು. ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸುವುದನ್ನು ಬಿಟ್ಟು ಕಾಂಗ್ರೆಸ್ ಈ ಪ್ರಗತಿಪರರನ್ನು ಅಸ್ತ್ರದಂತೆ ಬಚ್ಚಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಹೊರಬಿಡುತ್ತದೆಯಾ..? ಸಂವಿಧಾನ ರಕ್ಷಣೆ ಮಾಡೋದಕ್ಕೆ ಪ್ರಗತಿಪರರೇನು ಗುತ್ತಿಗೆ ಪಡೆದುಕೊಂಡಿದ್ದಾರಾ…? ಈ ಹಿಂದೆ ಇದೇ ರೀತಿ ಅವಾರ್ಡ್ ವಾಪ್ಸಿ ಅಭಿಯಾನ ಮಾಡಿ ನಗೆಪಾಟಲಿಗೀಡಾಗಿದ್ದ ಈ ಬುದ್ಧಿಜೀವಿಗಳ ವಲಯ ಈಗ ಸಂವಿಧಾನದ ರಕ್ಷಣೆಯ ಸೋಗಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕವನ್ನು ಜಯಿಸಿದರೆ ಮೋದಿ 2019ರಲ್ಲಿ ಮತ್ತೆ ಪ್ರಧಾನಿಯಾಗೋದಕ್ಕೆ ಹಾದಿ ಸುಗಮವಾಗುತ್ತದೆ. ಇದೇ ಕಾರಣದಿಂದಲೇ ಮತ್ತೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಜಾತ್ಯಾತೀತ ಶಕ್ತಿಯ ಹೆಸರಿನಲ್ಲಿ ಎಲ್ಲ ಪ್ರಗತಿಪರರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊರಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧವಾಗಿ ಪರ್ಯಾಯ ಶಕ್ತಿ ರೂಪಿಸಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ಅದು ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವ ಸೃಷ್ಟಿಸಿಕೊಳ್ಳಲು ಮಾಡಲೇಬೇಕಾದ ಅನಿವಾರ್ಯ ಹೋರಾಟ. ಆದ್ರೆ ಈ ರಾಜ್ಯದ ಪ್ರಗತಿಪರರೇಕೆ ರಾಜಕೀಯ ಪಕ್ಷಗಳಂತೆ ವರ್ತಿಸುತ್ತಿವೆ. ಮೈತ್ರಿ ವಿಚಾರ ನಿರ್ಧರಿಸಬೇಕಾದವರು ರಾಜಕೀಯ ಪಕ್ಷಗಳು. ಅವರೇ ಸುಮ್ಮನಿರುವಾಗ ಇಲ್ಲದ ಉಸಾಬರಿ ಇವರಿಗೇಕೆ. ಈ ಪ್ರಗತಿಪರ, ಬುದ್ಧಿಜೀವಿಗಳ ಸಮುದಾಯ ಕಾಂಗ್ರೆಸ್ ಪರ ಬ್ಯಾಟಿಂಗ್ಗೆ ಇಳಿದಿರುವುದು ಯಾಕೆ..? ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ವಿರೋಧಿಸಲು ಪ್ರಗತಿಪರರಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದ್ರೆ ಕಾಂಗ್ರೆಸ್ ಅನ್ನು ಮೋಹಿಸಲು ಇರುವ ಕಾರಣಗಳೇನು. ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್ ಅನ್ನು ಅಪ್ಪಿಕೊಳ್ಳುವುದು ಎಷ್ಟು ಸಮಂಜಸ.? ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಇದೇ ಬುದ್ಧಿಜೀವಿಗಳ ವಲಯ ಆಸ್ಥಾನ ಕಲಾವಿದರಂತೆ ಕಾಣಿಸಿಕೊಂಡು ಅನುಕೂಲಗಳನ್ನು ಆಸ್ವಾದಿಸಿಕೊಳ್ಳೋದು ಬಹಿರಂಗ ರಹಸ್ವವೇನಲ್ಲ. ಇಂತವರುಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ತಾನು ಜಾತ್ಯಾತೀತವಾದಿ ಅನ್ನೋ ಪೋಸ್ ಕೊಡುತ್ತಿದೆ. ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ನಡೆಸಿದರೆ, ಜಾತಿಯ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ನಡೆಸುತ್ತದೆ. ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಜಾತ್ಯಾತೀತ ಎಂದು ಕರೆದುಕೊಳ್ಳುವ ಕಾಂಗ್ರೆಸ್ಗೆ ಜಾತಿ ಬಿಟ್ಟರೆ ಬೇರೆ ರಾಜಕೀಯ ಪಟ್ಟುಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಅಂತರ ಕಾಪಾಡಿಕೊಂಡು ಜನರ ಪರವಾಗಿ ಕೆಲಸ ಮಾಡಬೇಕಾದ ಈ ಸ್ವಯಂಘೋಷಿತ ಪ್ರಗತಿಪರರು, ಬುದ್ಧಿಜೀವಿಗಳು ಕಾಂಗ್ರೆಸ್ನ ಬಾಲಬುಡುಕರಂತೆ ವರ್ತಿಸುತ್ತಿರುವುದು ಮಾತ್ರ ನಾಚಿಕೆಗೇಡು. ಅಧಿಕೃತವಾಗಿ ಈ ಗುಂಪು ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದು ಒಪ್ಪಿಕೊಂಡು ಕಾಂಗ್ರೆಸ್ನ ಪ್ರಗತಿಪರ/ಬುದ್ಧಿಜೀವಿಗಳ ಘಟಕ ಎಂದು ಘೋಷಿಸಿಕೊಳ್ಳುವುದು ಒಳಿತು..
ಜನವರಿ 15, 2018 ನಿಮ್ಮ ಟಿಪ್ಪಣಿ ಬರೆಯಿರಿ
ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ನೀಡಿದಾಗ ಇಡೀ ವಿಶ್ವ ಆ ಬೆಳವಣಿಗೆಯನ್ನು ಬೆರಗುಗಣ್ಣಿನಿಂದ ನೋಡಿತ್ತು. ಇದಾದ ಆರು ತಿಂಗಳ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ್ದಾರೆ.. ಜಗತ್ತು ಮತ್ತೆ ಈ ಬೆಳವಣಿಗೆಯನ್ನು ಅತ್ಯಾಶ್ಚರ್ಯದಿಂದ ನೋಡುತ್ತಿದೆ. ಜಗತ್ತಿನ ಪುಟ್ಟ ರಾಷ್ಟ್ರವಾದ ಇಸ್ರೇಲ್ ಪ್ರಧಾನಿ ಭಾರತಕ್ಕೆ ಭೇಟಿ ನೀಡೋದು.. ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಭಾರತದ ಪ್ರಧಾನಿ ಇಸ್ರೇಲ್ನಂತಹ ಪುಟ್ಟ ರಾಷ್ಟ್ರಕ್ಕೆ ಭೇಟಿ ನೀಡೋದು ಐತಿಹಾಸಿಕ ಬೆಳವಣಿಗೆಗಳು ಎಂದು ಇತಿಹಾಸ ದಾಖಲಿಸಿಕೊಳ್ಳುತ್ತೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಆರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿಳಿದಿದ್ದಾರೆ. 15 ವರ್ಷಗಳ ನಂತರ ಇಸ್ರೇಲ್ನ ಪ್ರಧಾನಿಯೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಪ್ರಧಾನಿ ಮೋದಿ ತಮ್ಮ ಐತಿಹಾಸಿಕ ಇಸ್ರೇಲ್ ಪ್ರವಾಸಕ್ಕೆ ಹೋಗಿಬಂದ ಆರು ತಿಂಗಳಲ್ಲೇ ಇಸ್ರೇಲ್ ಪ್ರಧಾನಿ ನೇತನ್ಯಾಹು ಭಾರತಕ್ಕೆ ಬಂದಿಳಿದಿದ್ಧಾರೆ. ಕಳೆದ ವರ್ಷ ಪ್ರಧಾನಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದಾಗ ವಿಶ್ವದ ಹಲವು ದೇಶಗಳು ಅಚ್ಚರಿಗೊಳಗಾಗಿದ್ದವು. ಸ್ವಾತಂತ್ರ್ಯಾ ನಂತರ ಯಾವೊಬ್ಬ ಪ್ರಧಾನಿಯೂ ಇಸ್ರೇಲ್ಗೆ ಬೇಟಿ ನೀಡಿರಲಿಲ್ಲ. ಯಾಕೆಂದ್ರೆ ಇಸ್ರೇಲ್ ಎಂಬ ಯಹೂದಿಗಳ ದೇಶಕ್ಕೆ ಭೇಟಿ ನೀಡಿದರೆ ದೇಶದ ಮುಸ್ಲಿಮರು, ಮುಸ್ಲಿಂ ರಾಷ್ಟ್ರಗಳು, ಅರಬ್ ರಾಷ್ಟ್ರಗಳ ಮುಂದೆ ತಮ್ಮ ಸೆಕ್ಯುಲರಿಸಂನ ಮುಖವಾಡ ಕಳಚಿಬೀಳಲಿದೆ ಅನ್ನೋ ಅವ್ಯಕ್ತ ಭಯ ದೇಶವನ್ನಾಳಿದ ಹಲವು ಪ್ರಧಾನಿಗಳಿಗಿತ್ತು.. ಅದೇ ಕಾರಣಕ್ಕೆ ಯಾರೂ ಇಸ್ರೇಲ್ಗೆ ಹೋಗುವ ರಿಸ್ಕ್ ತೆಗೆದುಕೊಂಡಿರಲಿಲ್ಲ. ಮೋದಿ ಇಸ್ರೇಲ್ಗೆ ಭೇಟಿ ನೀಡಿದಾಗ ನಮ್ಮದೇ ದೇಶದ ಸೋ ಕಾಲಡ್ ಸೆಕ್ಯುಲರಿಸ್ಟ್ಗಳು ಮೋದಿಯ ನಡೆಯನ್ನು ಅನುಮಾನದಿಂದ ನೋಡಿದ್ದರು..
2008ರಲ್ಲಿ ಅಂದಿನ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿ, 2008ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, 2014ರಲ್ಲಿ ಗೃಹ ಸಚಿವ ರಾಜ್ ನಾಥ್ ಸಿಂಗ್, 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕಳೆದ ವರ್ಷ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಭೇಟಿ ನೀಡಿದ್ದರು. ಈ ಸಾಲು ಸಾಲು ಭೇಟಿಗಳು ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಮುನ್ನುಡಿ ಬರೆದಿದ್ದವು. ಕಳೆದ ವರ್ಷ ಮೋದಿ ಭೇಟಿ ನೀಡಿದ್ದು ಎರಡೂ ರಾಷ್ಟ್ರಗಳ ಸಂಬಂಧ ವೃದ್ಧಿಯಲ್ಲಿ ಮೈಲಿಗಲ್ಲಿನಂತಹ ಬೆಳವಣಿಗೆಯಾಗಿತ್ತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಭೇಟಿ ನೀಡುವ ವೇಳೆ ತಮ್ಮ ವಿಮಾನಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಬಂದಿದ್ದರು. ಭಾರತದ ಮೇಲಿನ ಇಸ್ರೇಲ್ ಪ್ರೀತಿಗೆ ಇದೊಂದು ಉದಾಹರಣೆ ಸಾಕಿತ್ತು. ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಲು ಪ್ರಧಾನಿ ಮೋದಿ ಶಿಷ್ಟಾಚಾರವನ್ನು ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ಹೋಗಿ ಬೆಂಜಮಿನ್ ಅವರನ್ನು ಪ್ರೀತಿಯಿಂದ ಆಲಂಗಿಸಿಕೊಂಡು ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಜುಲೈನಲ್ಲಿ ಇಸ್ರೇಲ್ ಗೆ ಭೇಟಿ ನೀಡಿದ್ದಾಗ ಇಸ್ರೇಲ್ ಪ್ರಧಾನಿ ನೇತನ್ಯಾಹು ಸಹ ಶಿಷ್ಟಾಚಾರ ಬದಿಗಿರಿಸಿ ನಮ್ಮ ಪ್ರಧಾನಿಯನ್ನು ಸ್ವಾಗತಿಸಿದ್ದರು.
ಭಾರತ ದೇಶ ಹೊಂದಿರುವ ಭೂ ಭಾಗದ ಅಗಾಧತೆ, 130 ಕೋಟಿ ಜನಸಂಖ್ಯೆಗೂ ಇಸ್ರೇಲ್ ಎಂಬ ರಾಷ್ಟ್ರ ಯಾವ ಕಾರಣಕ್ಕೂ ಈ ದೇಶದೊಂದಿಗೆ ಹೊಂದಾಣಿಕೆಯಾಗುವುದಿಲ್ಲ.. ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ಜನಸಂಖ್ಯೆ 88 ಲಕ್ಷ. ವಿಸ್ತೀರ್ಣದಲ್ಲಿ ನಮ್ಮ ಕರ್ನಾಟಕದ ಒಂಭತ್ತನೇ ಒಂದು ಭಾಗ ಮಾತ್ರ ಇಸ್ರೇಲ್ನದ್ದು. ಆದ್ರೆ ಆ ಪುಟ್ಟ ರಾಷ್ಟ್ರ ಇವತ್ತು ಜಗತ್ತಿನ ಬಲಾಡ್ಯ ರಾಷ್ಟ್ರಗಳಲ್ಲೊಂದು. ಮಿಲಿಟರಿ ಸಾಮರ್ಥ್ಯದಲ್ಲಿ ಯಾವುದೇ ರಾಷ್ಟ್ರ ಎದುರಿಗೆ ಬಿದ್ದರೂ ತನ್ನ ಮಿಲಿಟರಿ ಶಕ್ತಿಯಿಂದ ಸುಲಭವಾಗಿ ಬಡಿದುಬಿಡುವಂತಹ ದೇಶ ಇಸ್ರೇಲ್..
1947 ರಲ್ಲಿ ಭಾರತ ಸ್ವಾತಂತ್ರ್ಯಗೊಂಡರೆ, ತನ್ನದೊಂದು ದೇಶವಿಲ್ಲದೇ ವಿಶ್ವಾದ್ಯಂತ ಮಾರಣಹೋಮಗಳಿಗೆ ತುತ್ತಾಗಿದ್ದರು ಯಹೂದಿಗಳು. ಬದುಕುಳಿದು ಹಲವು ದೇಶಗಳಲ್ಲಿ ಹಂಚಿಹೋಗಿದ್ದ ಯಹೂದಿಗಳೆಲ್ಲರೂ ಸೇರಿ 1948 ರಲ್ಲಿ ಸ್ವತಂತ್ರ ದೇಶ ಇಸ್ರೇಲ್ ಅನ್ನು ರೂಪಿಸಿಕೊಂಡರು. ಭಾರತದ ಸುತ್ತ ಪಾಕಿಸ್ತಾನ, ಚೀನಾ ದೇಶಗಳು ಬದ್ದವೈರಿಗಳಂತೆ ಕಾಲು ಕೆರೆದು ಜಗಳಕ್ಕೆ ನಿಂತಿದ್ದರೆ, ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ಸುತ್ತ ಸಿರಿಯಾ, ಇರಾಕ್, ಇರಾನ್, ಪ್ಯಾಲಿಸ್ತೇನ್, ಸೌದಿ ಅರೇಬಿಯಾ, ಈಜಿಫ್ಟ್ ಎಂಬ ಶತೃ ದೇಶಗಳನ್ನಿಟ್ಟುಕೊಂಡಿದೆ. ಈ ಎಲ್ಲ ದೇಶಗಳೂ ಇಸ್ರೇಲ್ ಎಂದರೆ ಬೆಂಕಿಯುಗುಳುತ್ತವೆ. ಇದುವರೆಗೂ 17 ಯುದ್ಧಗಳನ್ನು ಮಾಡಿರುವ ಇಸ್ರೇಲ್ ಒಂದರಲ್ಲೂ ಸೋಲು ಕಂಡೇ ಇಲ್ಲ.. ಇಂತದ್ದೊಂದು ರಾಷ್ಟ್ರದ ಸ್ನೇಹ ಭಾರತಕ್ಕೆ ಮಿಲಿಟರಿ ದೃಷ್ಟಿಯಿಂದ ಅಷ್ಟೊಂದು ಪ್ರಾಮುಖ್ಯತೆ ಇದೆ.
ಕೇವಲ ಮಿಲಿಟರಿ ಶಕ್ತಿಯಿಂದಷ್ಟೇ ಅಲ್ಲ.. ಕೃಷಿಯಲ್ಲಿ ಅತ್ಯಾಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ನೀರೇ ಇಲ್ಲದ ಬರಡು ನೆಲದಲ್ಲಿ ಬಂಗಾರ ಬೆಳೆಯುತ್ತಿದೆ ಇಸ್ರೇಲ್. ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಸಾಧಿಸಿರುವ ಪ್ರಗತಿಯನ್ನು ಇಡೀ ವಿಶ್ವ ಅಚ್ಚರಿಯಿಂದ ನೋಡುತ್ತಿದೆ. ಅಷ್ಟೇ ಅಲ್ಲ.. ನೀರೇ ಇಲ್ಲದ ನಾಡಾದ ಇಸ್ರೇಲ್ ಇವತ್ತು ಸಮುದ್ರದಿಂದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ತಂತ್ರಜ್ಞಾನ ಕಂಡುಕೊಂಡಿದೆ. ಕಳೆದ ವರ್ಷ ಮೋದಿ ಇಸ್ರೇಲ್ ಪ್ರವಾಸದಲ್ಲಿ ಬೆಂಜಮಿನ್ ನೆತನ್ಯಾಹು, ಮೋದಿ ಅವರನ್ನು ಸಮುದ್ರದ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ತೋರಿಸಿಕೊಟ್ಟಿದ್ದರು.
ಕೃಷಿ ಪ್ರಧಾನವಾದ ರಾಷ್ಟ್ರ ಭಾರತ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದಿಂದ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದ ತಂತ್ರಜ್ಞಾನ ಬಹಳಷ್ಟಿದೆ. ನಮ್ಮ ದೇಶದ ನಗರಗಳು ಕುಡಿಯುವ ನೀರಿಗಾಗಿ ಆಹಾಕಾರವೆದ್ದಿರುವ ಈ ಸ್ಥಿತಿಯಲ್ಲಿ ಇಸ್ರೇಲ್ನ ಸಮುದ್ರದ ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಅಕ್ಷಯ ಪಾತ್ರೆಯಂತೆಯೇ ಸರಿ. ಭಾರತದ ಮೂರೂ ಕಡೆ ಸಮುದ್ರವೇ ಆವರಿಸಿರುವುದರಿಂದ ಈ ತಂತ್ರಜ್ಞಾನ ಭಾರತಕ್ಕೆ ಬಂದರೆ ಇದು ಒಂದು ನವಯುಗದ ಕ್ರಾಂತಿಗೆ ಮುನ್ನುಡಿಯಾಗಲಿದೆ..
ಭಾರತದೊಂದಿಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಲು ಇಸ್ರೇಲ್ಗೆ ಐತಿಹಾಸಿಕ ಕಾರಣ ಇದೆ. ಇಡೀ ಜಗತ್ತೇ ಯಹೂದಿಗಳನ್ನು ಮಾರಣಹೋಮ ನಡೆಸುತ್ತಿದ್ದಾಗ ಅವರಿಗೆ ಜಾಗ ಕೊಟ್ಟಿದ್ದು ಭಾರತ. ಭಾರತದಲ್ಲಿ ಮಾತ್ರ ಯಹೂದಿಗಳ ಮೇಲೆ ಯಾವುದೇ ಹಿಂಸಾಚಾರ ನಡೆದ ಉದಾಹರಣೆಗಳಿಲ್ಲ. 1500 ವರ್ಷಗಳ ಹಿಂದೆಯೇ ಯಹೂದಿಗಳು ಭಾರತಕ್ಕೆ ಬಂದ ಮತ್ತು ಅಲ್ಲಿಂದ ಇಸ್ರೇಲ್ ಎಂಬ ರಾಷ್ಟ್ರ ಸೃಷ್ಟಿಯಾಗುವವರೆಗೂ ಇಲ್ಲೇ ಇದ್ದ ಉದಾಹರಣೆಗಳಿವೆ. ಇಸ್ರೇಲ್ ರಾಷ್ಟ್ರವಾದ ಮೇಲೆ ಎಲ್ಲ ದೇಶಗಳಿಂದ ಇಸ್ರೇಲ್ಗೆ ಯಹೂದಿಗಳು ಹೋದಂತೆ ಇಲ್ಲಿಂದಲೂ ಅಲ್ಲಿಗೆ ಹೋಗಿದ್ದಾರೆ. ಆದರೂ ಭಾರತವನ್ನು ಮಾತೃಭೂಮಿಯಂತೆ ಫೂಜಿಸುವ ಯಹೂದಿಗಳಿದ್ದಾರೆ. ಇದೇ ಕಾರಣಕ್ಕೆ ಭಾರತವೆಂದರೆ ಇಸ್ರೇಲ್ ಪಾಲಿಗೆ ಅತ್ಯಂತ ನಂಬುಗೆಯ ರಾಷ್ಟ್ರ…
ಇಸ್ರೇಲ್ ಮತ್ತು ಭಾರತದ ಬಾಂಧವ್ಯದಿಂದ ಎರಡೂ ರಾಷ್ಟ್ರಗಳಿಗೂ ಭದ್ರತೆ ಮತ್ತು ವ್ಯಾವಹಾರಿಕ ದೃಷ್ಟಿಯಲ್ಲಿ ಭಾರೀ ಅನುಕೂಲಗಳಿವೆ. ಭಾರತಕ್ಕಂತೂ ಇಸ್ರೇಲ್ನ ಸ್ನೇಹ ಮಿಲಿಟರಿ ದೃಷ್ಟಿಯಿಂದ ಅತ್ಯಂತ ಪ್ರಮುಖ ವಿಚಾರ. ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ಮಿಲಿಟರಿ ಶಕ್ತಿ, ಆ ದೇಶದ ಶಕ್ತಿಶಾಲಿ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್ ಇಡೀ ವಿಶ್ವಕ್ಕೇ ಮಾದರಿ. ಒಬ್ಬ ಇಸ್ರೇಲಿಗನನ್ನು ಕೊಂದರೆ ಅದಕ್ಕೆ ಪ್ರತಿಯಾಗಿ ಐವತ್ತು ಜನ ಶತೃಗಳನ್ನು ಕೊಲ್ಲುತ್ತೇವೆ ಅನ್ನೋದು ಇಸ್ರೇಲ್ನ ಶಕ್ತಿಶಾಲಿ ಇಂಟೆಲಿಜೆನ್ಸ್ ಏಜೆನ್ಸಿ ಮೊಸಾದ್ನ ಧ್ಯೇಯ ವಾಕ್ಯ. ತನ್ನ ಪ್ರಜೆಯನ್ನು ಯಾವುದಾದರೂ ಒಂದು ದೇಶ ಕೊಲೆ ಮಾಡಿದರೆ ಅದೇ ದೇಶದೊಳಕ್ಕೆ ನುಗ್ಗಿ ಅಲ್ಲಿನ ಐವತ್ತು ಮಂದಿಯ ಹೆಣವುರುಳಿಸುವ ಕಲೆ ಇಸ್ರೇಲಿಗಳ ರಕ್ತದಲ್ಲೇ ಇದೆ. ಇಂತಹ ದೇಶದಿಂದ ನಮ್ಮ ದೇಶದ ಭದ್ರತಾ ಸಂಸ್ಥೆಗಳು ಕಲಿಯಬೇಕಿರುವುದು ಸಾಕಷ್ಟಿದೆ. ಇದೇ ಕಾರಣಕ್ಕೆ ಮೋದಿ ಇಸ್ರೇಲ್ ಜೊತೆಗೆ ಸಂಬಂಧ ಸುಧಾರಣೆ ಬಯಸುತ್ತಿರುವುದು. ವಿಶ್ವದ ಬಲಾಡ್ಯ ಮಿಲಿಟರಿ ರಾಷ್ಟ್ರಗಳಿಗೆ ಯುದ್ಧ ಸಾಮಗ್ರಿಗಳು ಮತ್ತು ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಮೂಲಕ ಅತಿ ದೊಡ್ಡ ಯಶಸ್ಸು ಗಳಿಸಿರುವುದು ಇಸ್ರೇಲ್ನ ಶಕ್ತಿ.
ಇಸ್ರೇಲ್ ತಯಾರಿಸುವ ಯುದ್ಧ ಸಾಮಗ್ರಿಗಳಿಗೆ ಅತಿ ದೊಡ್ಡ ಗ್ರಾಹಕ, ಭಾರತ. 2012ರಿಂದ 2016ರವರೆಗೆ ಭಾರತೀಯ ಸಮಗ್ರ ಸೇನಾ ಬಲಕ್ಕೆ ಬೇಕಾದ ಒಟ್ಟು ಯುದ್ಧ ಸಾಮಗ್ರಿಗಳಲ್ಲಿ ಶೇ. 40ರಷ್ಟನ್ನು ಭಾರತ, ಇಸ್ರೇಲ್ ನಿಂದಲೇ ಪಡೆದಿದೆ. ರಷ್ಯಾ ಮತ್ತು ಅಮೆರಿಕದ ನಂತರ ಭಾರತ ಇಸ್ರೇಲ್ನಿಂದ ಅತಿ ಹೆಚ್ಚು ಮಿಲಿಟರಿ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಪಾಕಿಸ್ತಾನ ಮತ್ತು ಚೀನಾದಂತಹ ಮಗ್ಗುಲು ಮುಳ್ಳುಗಳನ್ನು ಮಟ್ಟ ಹಾಕಲು ಭಾರತಕ್ಕೆ ಇಸ್ರೇಲ್ನಂತಹ ದೇಶದ ಜೊತೆಗಿನ ಬಾಂಧವ್ಯ ಅಗತ್ಯವಾಗಿ ಬೇಕೇ ಬೇಕು. ಭಾರತಕ್ಕೆ ಭೇಟಿ ನೀಡಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುಗೆ ಭಾರತ ಅತ್ಯುನ್ನತ ಗೌರವಾದರಗಳಿಂದ ಸ್ವಾಗತಿಸಿದೆ. ಭಾರತ ಮತ್ತು ಇಸ್ರೇಲ್ ದೇಶಗಳ ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಬಣ್ಣಿಸಿದ್ದಾರೆ. ಭಾರತ ಮತ್ತು ಇಸ್ರೇಲ್ನ ಸಂಬಂಧ ಸ್ವರ್ಗದಲ್ಲೇ ನಿಶ್ಚಯವಾಗಿದೆ ಎನ್ನೋದು ಬೆಂಜಮಿನ್ ಅವರ ಭಾರತದೆಡೆಗಿನ ಪ್ರೀತಿಯನ್ನು ತೋರಿಸುತ್ತದೆ. ರಾಜಧಾನಿ ಜೆರುಸಲೇಂ ವಿವಾದ ಕುರಿತ ವಿಶ್ವಸಂಸ್ಥೆಯಲ್ಲಿ ಭಾರತ ಇಸ್ರೇಲ್ ವಿರುದ್ಧ ಮತದಾನ ಮಾಡಿದ ವಿಚಾರ ಉಭಯ ದೇಶಗಳ ನಡುವಿನ ಸಂಬಂಧದ ಪರಿಣಾಮ ಬೀರದು ಅನ್ನೋ ಮಾತನ್ನೂ ಬೆಂಜಮಿನ್ ಹೇಳಿದ್ದಾರೆ.
ಬೆಂಜಮಿನ್ ನೇತನ್ಯಾಹು ಭಾರತ ಭೇಟಿಯ ವೇಳೆ ಪ್ರಧಾನಿ ಮೋದಿಯ ಬಗ್ಗೆ ಅಪಹಾಸ್ಯ ಮಾಡುವಂತಹ ವಿಡಿಯೋವನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಎಲ್ಲ ಸಂದರ್ಭಗಳಲ್ಲಿಯೂ ತಾನು ರಾಜಕೀಯವನ್ನೇ ಮಾಡುವುದಾಗಿ ತನ್ನತನವನ್ನು ಮತ್ತೊಮ್ಮೆ ತೋರಿಸಿಕೊಂಡಿದೆ. ವಿಶ್ವದ ಬಲಾಡ್ಯ ದೇಶವೊಂದರ ನಾಯಕ ಭಾರತದ ಸ್ನೇಹವನ್ನರಸಿ ದೇಶಕ್ಕೆ ಬಂದಾಗ ತನ್ನ ದೇಶದ ಪ್ರಧಾನಿಯನ್ನು ಹೀಗೆಳೆದು ಅಪಹಾಸ್ಯ ಮಾಡುವುದು ದೇಶದ ವಿರೋಧ ಪಕ್ಷದ ರಚನಾತ್ಮಕ ಕೆಲಸವಾ..?
ಎರಡೂ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಯಿಂದ ಭಾರತ ಕೃಷಿ, ಕುಡಿಯುವ ನೀರು, ತಂತ್ರಜ್ಞಾನ ಮತ್ತು ಮಿಲಿಟರಿ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಮೋದಿ-ಬೆಂಜಮಿನ್ ಮಧ್ಯೆ ಇರುವ ಭಾಯಿ ಭಾಯಿ ಬಾಂಧವ್ಯ ಇದೇ ರೀತಿಯೇ ಮುಂದುವರಿದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಇನ್ನಷ್ಟು ಬಲಗೊಳ್ಳಲಿದೆ. ಅಷ್ಟೇ ಅಲ್ಲ ಆಂತರಿಕವಾಗಿಯೂ ಅಭಿವೃದ್ಧಿಯ ವೇಗ ಇಮ್ಮಡಿಯಾಗಲಿದೆ…
ನವೆಂಬರ್ 16, 2017 ನಿಮ್ಮ ಟಿಪ್ಪಣಿ ಬರೆಯಿರಿ
ಕಾಶ್ಮೀರದಲ್ಲಿ ನಡೆಯುತ್ತಿದ್ದ ದಿನನಿತ್ಯದ ಕಲ್ಲು ತೂರಾಟಗಳು ಈಗ ನಿಂತೇ ಹೋಗಿವೆ ಎಂಬಷ್ಟರ ಮಟ್ಟಿಗೆ ಕಡಿಮೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಲ್ಲು ತೂರಾಟದ ಪ್ರಕರಣಗಳು ಶೇ.90 ರಷ್ಟು ಕಡಿಮೆಯಾಗಿದೆ. ಮೋದಿ ಸರ್ಕಾರ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕಾಶ್ಮೀರ ಶಾಂತಿಯತ್ತ ಹೊರಳುತ್ತಿದೆ..ಪಾಕಿಸ್ತಾನದ ಕೂಲಿಗಾಗಿ ಕಲ್ಲು ಹೊಡೆಯುತ್ತಿದ್ದುದನ್ನೇ ಆಜಾದಿ ಹೋರಾಟ ಎಂದು ಕರೆಯುತ್ತಿದ್ದ ನಮ್ಮ ದೇಶದ ಬುದ್ದಿ ಜೀವಿ ವಲಯ ಈಗ ಸುಮ್ಮನೆ ಕುಳಿತುಬಿಟ್ಟಿದೆ. ಇದು ಮೋದಿ ಸರ್ಕಾರ ಕಾಶ್ಮೀರದಲ್ಲಿ ನಡೆಸಿದ ’ಆಪರೇಷನ್ ಆಲ್ ಔಟ್’
ಕಾಶ್ಮೀರದಲ್ಲಿ ಆಜಾದಿ ಹೆಸರಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಹೋರಾಟದ ಹೆಸರಿನ ಕಲ್ಲು ತೂರಾಟಕ್ಕೆ ಈಗ ಬ್ರೇಕ್ ಬಿದ್ದಿದೆ. 2016 ರಲ್ಲಿ ದಿನಕ್ಕೆ 40-50 ಕಲ್ಲು ತೂರಾಟದ ಪ್ರಕರಣಗಳು ನಡೆಯುತ್ತಿದ್ದವು. ಆಪರೇಷನ್ ಆಲ್ ಔಟ್ ನ ಭಾಗವಾಗಿ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರವಾದಿಗಳ ವಿರುದ್ಧ ಮೋದಿ ಸರ್ಕಾರ ಕೈಗೊಂಡ ಕಟ್ಟನಿಟ್ಟಿನ ಕ್ರಮದಿಂದಾಗಿ ಹಿಂಸಾಚಾರ ಕಡಿಮೆಯಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಹಿಂಸಾಚಾರದಂತಹ ಘಟನೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಲ್ಲು ತೂರಾಟದ ಪ್ರಕರಣಗಳು ಶೇ.90 ರಷ್ಟು ಕಡಿಮೆಯಾಗಿದೆ. ಇದನ್ನೆಲ್ಲ ಹೇಳಿದ್ದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್ಪಿ. ವೈದ್.
ಪಾಕಿಸ್ತಾನದ ಮೂಲಕ ಪ್ರ್ಯೇಕತಾವಾದಿಗಳ ಕೈ ಸೇರುತ್ತಿದ್ದ ಹಣದ ಜಾಲವನ್ನೇ ಎನ್ಐಎ ಕತ್ತರಿಸಿಹಾಕಿದ ಪರಿಣಾಮ ಕಲ್ಲು ತೂರಾಟದ ಹೆಸರಿನ ಹೋರಾಟ ಮತ್ತು ಬುದ್ದಿ ಜೀವಿಗಳ ಹಾರಾಟ ಎರಡೂ ನಿಂತಿವೆ…ಕಾಶ್ಮೀರದಲ್ಲಿನ ಉಗ್ರರ ಮಟ್ಟ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ಈ ವರ್ಷ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದೆ. ಈ ಒಂದೇ ವರ್ಷದಲ್ಲಿ 170 ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಸೇನಾ ದಾಳಿಯಿಂದ ಸತ್ತ ಬಹುತೇಕರು ಉಗ್ರಗಾಮಿ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು, ಕಮಾಂಡರ್ಗಳು ಅನ್ನೋದು ವಿಶೇಷ. ಕಾಶ್ಮೀರದಲ್ಲಿ ಸೇನೆಯ ಕಾರ್ಯಾಚರಣೆ ಎಷ್ಟರಮಟ್ಟಿಗೆ ಇದೆ ಎಂದರೆ ಅಲ್ಲಿನ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಎ ತೋಯಿಬಾ ಸಂಘಟನೆಗಳಿಗೆ ಈಗ ಕಮಾಂಡರ್ಗಳೇ ಇಲ್ಲ. ಅಳಿದುಳಿದ ಮೂರ್ನಾಲ್ಕು ಉಗ್ರ ಕಮಾಂಡರ್ಗಳಿಗಾಗಿ ಸೇನೆ ಕಾರ್ಯಾಚರಣೆ ನಡೆಸುತ್ತಲೇ ಇದೆ. ಸೇನೆ ಹೊಡೆದುರುಳಿಸುತ್ತಿರುವ ಉಗ್ರರ ಹೆಣಗಳನ್ನು ಹೂಳುವವರೂ ಇಲ್ಲದಂತಹ ಸ್ಥಿತಿಗೆ ಅಲ್ಲಿನ ಭಯೋತ್ಪಾದಕ ಸಂಘಟನೆಗಳು ತಲುಪಿವೆ..
ಪಾಕಿಸ್ತಾನದಿಂದ ಎಂಜಲು ಕಾಸು ಪಡೆದು ಕಾಶ್ಮೀರದಲ್ಲಿರುವ ನಿರುದ್ಯೋಗಿ ಯುವಕರುಗಳಿಂದ ಕಲ್ಲು ತೂರಾಟ ನಡೆಸುವುದು ಪ್ರತ್ಯೇಕತಾವಾದಿಗಳ ಒನ್ ಲೈನ್ ಅಜೆಂಡಾ. ಆದ್ರೆ ನೋಟ್ ಬ್ಯಾನ್ ನಂತರ ಪಾಕಿಸ್ತಾನದಿಂದ ಹರಿದು ಬರುತ್ತಿರುವ ಹಣಕ್ಕೆ ಕತ್ತರಿ ಬಿದ್ದಿದೆ. ದೆಹಲಿಯ ಒಂದೇ ದಿನ ಎನ್ಐಎ ನಡೆಸಿದ ಕಾರ್ಯಾಚರಣೆಯಲ್ಲಿ 36 ಕೋಟಿ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹವಾಲಾ ಮೂಲಕ ಪಾಕ್ನಿಂದ ಹಣ ಪಡೆಯುತ್ತಿದ್ದ ಪ್ರತ್ಯೇಕತಾವಾದಿಗಳ ಮನೆಗಳಲ್ಲಿ ಐದು ಕೋಟಿಯಷ್ಟು ಹಣ ಸಿಕ್ಕಿದೆ. ಇನ್ನು ಕಲ್ಲು ತೂರಾಟ ನಡೆಸಲು ಪ್ರೇರೇಪಿಸುವ ಪ್ರ್ಯೇಕತಾವಾದಿಗಳ ಮನೆಗಳ ಮೇಲೆ ರೇಡ್ ಮಾಡಿ ಕೊಟ್ಯಂತರ ರೂ ಹಣ ವಶಪಡಿಸಿಕೊಂಡಿದೆ. ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದವರ ಮೇಲೆ ಕೇಸುಗಳು ಬಿದ್ದಿವೆ.
ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದ ನೀತಿ ಸರಿಯಿಲ್ಲ ಎಂದು ಟೀಕಿಸುತ್ತಿದ್ದವರಿಗೆ ಮೋದಿ ಸರ್ಕಾರ ದಿಟ್ಟ ಉತ್ತರವನ್ನೇ ನೀಡಿದೆ. ನಿರಂತರ ಹಿಂಸಾಚಾರ ನಡೆಸಿ ಕಾಶ್ಮೀರದಲ್ಲಿ ಭಾರತ ದೌರ್ಜನ್ಯ ನಡೆಸುತ್ತಿದೆ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುತ್ತಿದ್ದ ಪಾಕಿಸ್ತಾನದ ಕಪಟ ಕೈವಾಡಕ್ಕೂ ಈಗ ಮೋದಿ ಸರ್ಕಾರ ದೊಡ್ಡ ಪೆಟ್ಟು ನೀಡಿದೆ. ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದ ರಾಜ್ಯ ಸರ್ಕಾರ, ಪೊಲೀಸರು, ಸೇನಾಪಡೆ ಮತ್ತು ಎನ್ಐಎ ನಡೆಸಿರುವ ಈ ಆಪರೇಷನ್ ಆಲ್ ಔಟ್ ಕಾರ್ಯಾಚರಣೆ ಸಂಪೂರ್ಣ ಯಶಸ್ಸಿನತ್ತ ಸಾಗುತ್ತಿದೆ. ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪೂರ್ಣ ವಿರಾಮ ಹಾಕುವ ಪ್ಲಾನ್ ಮೋದಿಗಿದೆ. ಕಾಶ್ಮೀರ ವಿಚಾರದಲ್ಲಿ ಜಗತ್ತಿನೆದರು ಚಿಂತಕರಂತೆ ಪೋಸು ಕೊಡುತ್ತಿದ್ದ ಬುದ್ದಿ ಜೀವಿಗಳು ಈಗ ಮೌನವಾಗಿದ್ದಾರೆ. ಮೋದಿ ಸರ್ಕಾರದ ಕಾಶ್ಮೀರ ನೀತಿಯನ್ನು ಪ್ರಶ್ನಿಸುತ್ತಲೇ ಇದ್ದ ಕಾಂಗ್ರೆಸ್ ಕೂಡ ಬುದ್ದಿ ಜೀವಿಗಳಂತೆ ಮೌನಕ್ಕೆ ಶರಣಾಗಿದೆ. ಈಗ ಉತ್ತರ ಕೊಡುವ ಜಾಗದಲ್ಲಿ ಬುದ್ದಿಜೀವಿಗಳು ಮತ್ತು ಪ್ರತಿಪಕ್ಷಗಳು ನಿಂತಿವೆ.. ಉತ್ತರಿಸುತ್ತಾರಾ….
ಅಕ್ಟೋಬರ್ 8, 2017 ನಿಮ್ಮ ಟಿಪ್ಪಣಿ ಬರೆಯಿರಿ
ಗಾಂಧಿ ಹತ್ಯೆಯ ಮರು ತನಿಖೆಯಾಗಬೇಕು ಎಂಬ ಒತ್ತಾಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ. ಹತ್ಯೆಯಾಗಿ ಹಲವು ದಶಕಗಳೇ ಕಳೆದಿದ್ದರೂ ಮರು ತನಿಖೆ ಯಾಕಾಗಬೇಕು. ಹತ್ಯೆ ಹಿಂದಿನ ರಹಸ್ಯ ಏನು..? ಹತ್ಯೆ ನಂತರ ನಡೆದ ತನಿಖೆಯಲ್ಲಿ ಯಾರನ್ನು ರಕ್ಷಿಸಲಾಗಿತ್ತು..? ಹತ್ಯೆಯ ಮರು ತನಿಖೆಯಾದ್ರೆ ಸತ್ಯ ಹೊರ ಬರುತ್ತಾ…? ನಾಥೂರಾಮ್ ಘೋಡ್ಸೆ ಎಂಬ ಹಿಂದುತ್ವವಾದಿ ಗಾಂಧಿಯನ್ನು ಹತ್ಯೆ ಮಾಡಿದ ಎಂದು ಇತಿಹಾಸ ಹೇಳುತ್ತೆ. ಆದ್ರೆ ಈಗ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾಗಿರುವ ಅರ್ಜಿ ಇತಿಹಾಸದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿದೆ. ಮಹಾತ್ಮಾ ಗಾಂಧೀಜಿ ಹತ್ಯೆಯಾಗಿ 70 ವರ್ಷಗಳಾಗುತ್ತಿವೆ. ಆದರೂ ಹತ್ಯೆಯ ಹಿಂದಿನ ಪೂರ್ಣ ಸತ್ಯ ಇದುವರೆಗೂ ದೇಶದ ಜನರಿಗೆ ಇದುವರೆಗೂ ಗೊತ್ತೇ ಇಲ್ಲ. ಈಗ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಅರ್ಜಿಯನ್ನು ಸ್ವೀಕರಿಸಿರುವ ದೇಶದ ಸರ್ವೋಚ್ಚ ನ್ಯಾಯಾಲಯ ಅಮಿಕಸ್ ಕ್ಯೂರಿಯನ್ನು ನೇಮಕ ಮಾಡಿದೆ..
ಗಾಂಧಿ ಹತ್ಯೆಯ ಮರು ತನಿಖೆ ನಡೆಯಬೇಕು ಎಂದು ಮುಂಬೈ ಮೂಲದ ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವೀರ ಸಾವರ್ಕರ್ ಅವರ ಅಭಿಮಾನಿ ಎಂದು ಘೋಷಿಸಿಕೊಂಡಿರುವ ಈ ವ್ಯಕ್ತಿ ಕಳೆದ 20 ವರ್ಷಗಳಿಂದ ಗಾಂಧಿ ಹತ್ಯೆಯ ಹಿಂದಿನ ಷಡ್ಯಂತ್ರದ ಬಗ್ಗೆಯೇ ಸಂಶೋಧನೆ ನಡೆಸುತ್ತಿದ್ದಾರೆ. ಗಾಂಧಿ ಹತ್ಯೆಯ ಮರು ತನಿಖೆ ನಡೆದರೆ ಅದು ಭಾರತದ ಇತಿಹಾಸದಲ್ಲೇ ಒಂದು ದೊಡ್ಡ ತುರುವಾಗುತ್ತದೆ ಎಂದು ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯ ಜೊತೆ ಪಂಕಜ್ ಫಡ್ನಿಸ್ ಹಲವು ದಾಖಲೆಗಳನ್ನೂ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ನೀಡುವ ವರದಿಯನ್ನಾಧರಿಸಿ ಹತ್ಯೆಯ ಮರು ತನಿಖೆ ನಡೆಸುವ ಬಗ್ಗೆ ನ್ಯಾಯಮೂರ್ತಿಗಳು ನಿರ್ಧರಿಸಲಿದ್ದಾರೆ.
1948ರ ಜನವರಿ 30 ರಂದು ಬರ್ಲಾ ಹೌಸ್ ಆವರಣದಲ್ಲಿ ಗಾಂಧೀಜಿ ಎದೆಗೆ ನಾಥೂರಾಮ ಘೋಡ್ಸೆ ಗುಂಡಿಕ್ಕಿದ. ಘೋಡ್ಸೆ ಬಲಸಿದ್ದ ಬೆರೆಟ್ಟಾ ಪಿಸ್ತೂಲ್ನಿಂದ ಹಾರಿದ್ದು ಮೂರು ಗುಂಡು. ಘೋಡ್ಸೆ ಪಿಸ್ತೂಲ್ನಲ್ಲಿದ್ದ ಏಳು ಗುಂಡುಗಳಲ್ಲಿ ಮೂರು ಗಾಂಧಿ ದೇಹ ಹೊಕ್ಕಿದ್ದವು. ಉಳಿದ ನಾಲ್ಕು ಗುಂಡುಗಳು ಪಿಸ್ತೂಲ್ನಲ್ಲೇ ಉಳಿದಿತ್ತು. ಆದ್ರೆ ಗಾಂಧೀಜಿ ದೇಹದಲ್ಲಿ ಪತ್ತೆಯಾಗಿದ್ದು ಮಾತ್ರ ನಾಲ್ಕು ಗುಂಡುಗಳು. ಹಾಗಾದ್ರೆ ನಾಲ್ಕನೇ ಗುಂಡು ಹಾರಿಸಿದ್ದು ಯಾರು..? ಈ ಅನುಮಾನ ಗಾಂಧಿ ಹತ್ಯೆಯಾದಾಗಿನಿಂದಲೂ ಇದೆ. ಆದ್ರೆ ಇದಕ್ಕೆ ದೊಡ್ಡ ಮಟ್ಟದ ರಾಜಕೀಯ ಬೆಂಬಲ, ಕಾನೂನಿನ ಬೆಂಬಲ ಸಿಗದೇ ಹೋದ ಕಾರಣದಿಂದ ಈ ವಾದಕ್ಕೆ ಮಹತ್ವ ಬರಲೇ ಇಲ್ಲ.
ಗಾಂಧಿ ಹತ್ಯೆ ನಡೆದ ನಂತರ ಕೋರ್ಟ್ ಹಾಲ್ನಲ್ಲಿ ನಿಂತು ನಾಥೂರಾಮ ಘೋಡ್ಸೆ ಗಾಂಧಿಯನ್ನು ಕೊಲೆಗೆ ಸಮರ್ಥನೆ ಮಾಡಿಕೊಂಡಿದ್ದ. ಗಾಂಧೀಜಿ ಹತ್ಯೆಯ ಹಿಂದೆ ಯಾವ ಷಡ್ಯಂತ್ರ, ಯಾರ ಪಾತ್ರವೂ ಇಲ್ಲ. ಗಾಂಧೀಜಿಯನ್ನು ಹತ್ಯೆ ಮಾಡುವುದು ನನ್ನ ನಿರ್ಧಾರ. ಉಳಿದೆಲ್ಲ ಆರೋಪಿಗಳು ನಿರಪರಾಧಿಗಳು ಎಂದಿದ್ದ. ತನಗೆ ನೀಡಿದ್ದ ಗಲ್ಲು ಶಿಕ್ಷೆಗೆ ಆತ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ. ಹಾಗೆ ಘೋಡ್ಸೆ ಕೋರ್ಟ್ನಲ್ಲಿ ನಿಂತು ನಾನೇ ಗಾಂಧಿಯನ್ನು ಕೊಂದೆ ಎಂದು ಹೇಳಿದ ನಂತರವೂ ಹತ್ಯೆಯ ಹಿಂದೆ ಯಾರದ್ದೋ ಕೈವಾಡ ಇದೆ ಎಂಬ ಅನುಮಾನ ಇತ್ತು. ಯಾರದ್ದೋ ಕೈಗೊಂಬೆಗಳಾಗಿ ಘೋಡ್ಸೆ ಮತ್ತು ನಾರಾಯಣ್ ಆಪ್ಟೆ ಗಾಂಧಿಯನ್ನು ಕೊಂದು ನೇಣಿಗೇರಿದರಾ ಅನ್ನೋದು ಆ ಅನುಮಾನ.
ಹಾಗಾದ್ರೆ ಗಾಂಧೀಜಿ ಹತ್ಯೆಯ ಹಿಂದೆ ಯಾರಿದ್ದಾರೆ. ಗಾಂಧಿ ಹತ್ಯೆ ನಡೆದ ನಂತರ ಮುಂಬೈನಲ್ಲಿ ನಡೆದ ಗಲಭೆಯ ಹಿಂದೆ ಯಾರಿದ್ದಾರೆ. ಗಾಂಧಿ ಹತ್ಯೆ ಮತ್ತು ಆ ನಂತರದ 15 ಬ್ರಾಹ್ಮಣರ ಕೊಲೆ ಎಲ್ಲವೂ ಷಡ್ಯಂತ್ರದ ಭಾಗ ಎನ್ನುವ ಮಾತು ನಿಜಾನಾ..?. ಹಿಂದುದತ್ವವಾದಿ ಅಜೆಂಡಾದಿಂದ ಈ ಕೊಲೆ ನಡೆದಿಲ್ಲ. ವೀರ ಸಾವರ್ಕರ್ ಅವರು ಗಾಂಧಿಯನ್ನು ಹತ್ಯೆ ಮಾಡಿ ಎಂದು ಘೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಉಪದೇಶ ಮಾಡಿರಲಿಲ್ಲ. ಘೋಡ್ಸೆ ಮತ್ತು ಆಪ್ಟೆಯನ್ನು ಬಳಸಿಕೊಂಡು ಬಾಹ್ಯ ಶಕ್ತಿಯೊಂದು ಗಾಂಧಿಯನ್ನು ಹತ್ಯೆ ಮಾಡಿದೆ ಎನ್ನೋದು ಪಂಕಜ್ ಫಡ್ನಿಸ್ ಅವರ ವಾದ. ಈ ವಾದಕ್ಕೆ ಪೂರಕವಾಗಿ ಫಡ್ನಿಸ್ ಸುಪ್ರೀಂ ಕೋರ್ಟ್ಗೆ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.
ಗಾಂಧಿ ಹತ್ಯೆಯ ಬಗ್ಗೆ ಇತಿಹಾಸದಲ್ಲೇ ಅತಿ ದೊಡ್ಡ ರಹಸ್ಯವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಪಂಕಜ್ ಫಡ್ನಿಸ್ ಕೇವಲ ಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿಲ್ಲ. ಗಾಂಧಿ ಹತ್ಯೆಯ ನಂತರ ನಡೆದ ತನಿಖೆ ಮತ್ತು ಕೋರ್ಟ್ ವಿಚಾರಣೆಯಲ್ಲಾದ ಲೋಫಗಳನ್ನು ಮುಂದಿಟ್ಟುಕೊಂಡು ಅಗತ್ಯ ದಾಖಲೆಗಳೊಂದಿಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆಯನ್ನು ಮಾಡಿದವನು ನಾಥೂರಾಮ್ ಘೋಡ್ಸೆ. ಇದು ದೇಶ ಕಲಿಸಿರುವ ಇತಿಹಾಸ. ಗಾಂಧಿ ಹತ್ಯೆಯನ್ನು ಕೇವಲ ನಾಥೂರಾಮ್ ಗೋಡ್ಸೆ ಒಬ್ಬ ಮಾತ್ರ ಮಾಡಲಿಲ್ಲ. ಹತ್ಯೆ ಮಾಡಿದ್ದು ಇಬ್ಬರು ವ್ಯಕ್ತಿಗಳು ಅನ್ನೋ ವಾದ ಫಡ್ನಿಸ್ ಅವರದ್ದು. ಹಾಗಾದ್ರೆ ಆ ಎರಡನೇ ವ್ಯಕ್ತಿ ಯಾರು ಅನ್ನೋದು ಈಗಿನ ಪ್ರಶ್ನೆ. ಆ ಎರಡನೆಯ ವ್ಯಕ್ತಿ ಘೋಡ್ಸೆ ಜೊತೆ ಗಲ್ಲು ಶಿಕ್ಷೆಗೊಳಪಟ್ಟ ನಾರಾಯಣ ಆಪ್ಟೆ ಅಲ್ಲ ಅನ್ನೋದು ಫಡ್ನಿಸ್ ವಾದ.
ಗಾಂಧಿ ಹತ್ಯೆ ಹಿಂದೆ ಬ್ರಿಟೀಷ್ ಸೇನೆ ಕೈವಾಡ..?
ಗಾಂಧಿ ಹತ್ಯೆಯನ್ನು ನಾನೇ ಮಾಡಿದ್ದು ಅಂತ ನಾಥೂರಾಮ್ ಘೋಡ್ಸೆ ಕೋರ್ಟ್ನಲ್ಲಿಯೇ ಒಪ್ಪಿಕೊಂಡಿದ್ದಾನೆ. ಆದ್ರೆ ಆತನ ಪಿಸ್ತೂಲ್ನಿಂದ ಸಿಡಿದಿದ್ದು ಮೂರು ಬುಲೆಟ್ ಮಾತ್ರ. ಆದ್ರೆ ಗಾಂಧಿ ದೇಹ ಹೊಕ್ಕಿದ್ದು ನಾಲ್ಕು ಬುಲೆಟ್ಗಳು ಅನ್ನುತ್ತವೆ ಸಂಶೋಧನೆಗಳು. ಆ ನಾಲ್ಕನೇ ಬುಲೆಟ್ ಅನ್ನು ಫೈರ್ ಮಾಡಿದ್ದು ಯಾರು? ಕೊನೆಯದಾಗಿ ಫೈರ್ ಆದ ಬುಲೆಟ್ನಿಂದಾಗಿಯೇ ಗಾಂಧಿ ಪ್ರಾಣ ಬಿಟ್ಟರು ಅನ್ನೋ ವಾದ ಹಿಂದಿನಿಂದಲೂ ಇದೆ. ಗಾಂಧಿ ಹತ್ಯೆಯ ಹಿಂದೆ ಎರಡನೇ ಮಹಾಯುದ್ದದ ಅವಧಿಯಲ್ಲಿ ಬ್ರಿಟೀಷ್ ಸೇನೆಯ ವಿದ್ವಂಸಕಾರಿ ಘಟಕವಾಗಿದ್ದ ಫೋರ್ಸ್ 136 ನ ಕೈವಾಡ ಇದೆ ಅನ್ನೋದು ಫಡ್ನಿಸ್ ವಾದ. ಯಾಕಂದ್ರೆ ಗಾಂಧಿ ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ 1934 ಪಿಸ್ತೂಲ್ ಅನ್ನು ಎರಡನೇ ಮಹಾಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಜನ ಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗದ ಈ ಪಿಸ್ತೂಲ್ ಗೋಡ್ಸೆಗೆ ಸಿಕ್ಕಿದ್ದು ಹೇಗೆ..? ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ ಪಿಸ್ತೂಲನ್ನು ಗೋಡ್ಸೆಗೆ ಕೊಟ್ಟಿದ್ದು ಗ್ವಾಲಿಯರ್ನ ದತ್ತಾತ್ರೆಯ ಪರ್ಚುರೆ. ಈ ವಿಷಯ ಗೊತ್ತಾಗಿದ್ದು ಗಾಂಧಿ ಹತ್ಯೆ ನಡೆದು ದಶಕಗಳಾದಮೇಲೆ. ಅಷ್ಟರಲ್ಲಾಗಲೇ ಘೋಡ್ಸೆಯನ್ನು ಗಲ್ಲಿಗೇರಿಸಲಾಗಿತ್ತು. ಅದೇ ದತ್ತಾತ್ರೆಯ ಪರ್ಚುರೆ ಬಳಿ ಮತ್ತೊಂದು ಬೆರೆಟ್ಟಾ ಪಿಸ್ತೂಲ್ ಪತ್ತೆಯಾಗಿತಯ್ತು. ಆದ್ರೆ ಆಗಿನ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲೇ ಇಲ್ಲ.
ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯಾಗಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿತ್ತು. ದೇಶ ವಿಭಜನೆ ಅಖಂಡ ಭಾರತದ ಕನಸು ಹೊತ್ತಿದ್ದ ಅನೇಕರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಆಕ್ರೋಶವನ್ನು ಬ್ರಿಟೀಷ್ ಸೇನೆ ಬಳಸಿಕೊಂಡು ಗಾಂಧಿಯನ್ನು ಹತ್ಯೆ ಮಾಡಿಸಿರಬಹುದು ಅನ್ನೊದು ಅನುಮಾನ. ದೇಶ ವಿಭಜನೆಯ ನಂತರ ಗಾಂಧಿ ವಿರುದ್ಧ ಕೆಂಡ ಕಾರುತ್ತಿದ್ದ ಹಿಂದುತ್ವವಾದಿ ನಾಥೂರಾಮ್ ಘೋಡ್ಸೆಯನ್ನು ಬಳಸಿಕೊಂಡು ಬ್ರಿಟಿಷ್ ಸೇನೆ ಗಾಂಧಿಯನ್ನು ಹತ್ಯೆ ಮಾಡಿರಬಹುದು. ಪಾಕಿಸ್ತಾನಕ್ಕೆ ಗಾಂಧೀಜಿ ಭೇಟಿ ನೀಡುವುದಕ್ಕೆ ಮೊಹಮ್ಮದ್ ಆಲಿ ಜಿನ್ನಾ ಒಪ್ಪಿಕೊಂಡ ನಂತರದ ಮೂರೇ ದಿನಕ್ಕೆ ಗಾಂಧಿ ಹತ್ಯೆಯಾಯಿತು. ಪಾಕಿಸ್ತಾನಕ್ಕೆ ಗಾಂಧಿ ಭೇಟಿ ನೀಡುವ ನಿರ್ಧಾರ ಹತ್ಯೆಗೆ ಕಾರಣವಾಯ್ತಾ ಅನ್ನೋದು ಫಡ್ನಿಸ್ ಅನುಮಾನ.
ಗಾಂಧಿ ಹತ್ಯೆ ರಹಸ್ಯ ಅಮೆರಿಕದಲ್ಲಿದೆ..!
ಗಾಂಧಿ ಹತ್ಯೆ ತನಿಖೆಯೂ ಸಮರ್ಪಕವಾಗಿ ಆಗಿಲ್ಲ ಅನ್ನೋ ವಾದ ಕಳೆದ 70 ವರ್ಷಗಳಿಂದಲೂ ಇದೆ. ಗಾಂಧಿ ಹತ್ಯೆಯನ್ನು ಕೇವಲ 5 ಅಡಿಗಳ ಅಂತರದಿಂದ ನಾನು ನೋಡಿದೆ ಎಂದು ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿ ಹರ್ಬರ್ಟ್ ಟಾಮ್ ರೀನರ್ ಅಮೆರಿಕಕ್ಕೆ ಟೆಲಿಗ್ರಾಮ್ ಮಾಡಿದ್ದರು. ಹತ್ಯೆ ನಡೆದ ನಂತರ ನಾಥೂರಾಮ್ ಘೋಡ್ಸೆಯನ್ನು ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಹರ್ಬರ್ಟ್ ಟಾಮ್ ರೀನರ್ ಹಿಡಿದಿದ್ದರು. ಅಂದು ಸಂಜೆ ಹರ್ಬರ್ಟ್ ಮಾಡಿದ್ದ ಟೆಲಿಗ್ರಾಂ ಅನ್ನು ಅಮೆರಿಕ 70 ವರ್ಷಗಳಿಂದಲೂ ಬಹಿರಂಗಗೊಳಿಸಿಲ್ಲ. ಆ ಟೆಲಿಗ್ರಾಂನಲ್ಲಿ ಹತ್ಯೆ ನಡೆಸಿದ ಎರಡನೇ ವ್ಯಕ್ತಿ ಬಗ್ಗೆ ಉಲ್ಲೇಖ ಇದೆ. ಗಾಂಧಿ ಹತ್ಯೆ ವಿಚಾರ ಅಮೆರಿಕಕ್ಕೆ ಯಾವ ಕಾರಣದಿಂದಲೂ ಸಂಬಂಧವಿಲ್ಲದ ವಿಚಾರ. ಇಂತಹ ವಿಚಾರದಲ್ಲಿರುವ ರಹಸ್ಯವನ್ನು ಅಮೆರಿಕ ರಾಷ್ಟ್ರೀಯ ರಹಸ್ಯ ಎಂದು 70 ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿರುವುದು ಏಕೆ..? ಈ ಎಲ್ಲ ಕಾರಣಗಳಿಗಾಗಿಯೇ ಹತ್ಯೆ ತನಿಖೆ ಮತ್ತೆ ನಡೆಯಬೇಕು ಎಂದು ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಮರು ತನಿಖೆ ನಡೆದರೆ ಗಾಂಧಿ ಹತ್ಯೆಗೆ ನಿಜವಾದ ಕಾರಣ ಏನು, ಗಾಂಧಿ ಹತ್ಯೆ ಹಿಂದೆ ಯಾರಿದ್ದರು ಅನ್ನೋದು ಸ್ಪಷ್ಟವಾಗುತ್ತದೆ.
ಗಾಂಧಿ ಹತ್ಯೆ ನಂತರ ನಡೆದ ತನಿಖೆ, ಕೋರ್ಟ್ ವಿಚಾರಣೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆ ಯಾವ ಪ್ರಶ್ನೆಗಳಿಗೂ ನೆಹರೂ ಸರ್ಕಾರ ಉತ್ತರ ನೀಡಲೇ ಇಲ್ಲ. ಹತ್ಯೆ ಮಾಡಿದ ನಾಥುರಾಮ ಘೋಡ್ಸೆ ಕೋರ್ಟ್ ಕಟಕಟೆಯಲ್ಲಿ ನಿಂತು ನಾನೇಕೆ ಗಾಂಧಿಯನ್ನು ಕೊಂದೆ ಎಂದು ಹೇಳಿದ್ದ. ಆತನ ತಪ್ಪೊಪ್ಪಿಗೆ ಹೇಳಿಕೆಯನ್ನು ಬಹಿರಂಗಪಡಿಸದದೇ ಸೆನ್ಸಾರ್ ಮಾಡಿತ್ತು ನೆಹರೂ ಸರ್ಕಾರ. ಗಾಂಧಿ ಹತ್ಯೆಯ ತನಿಖೆ ಸಮರ್ಪಕವಾಗಿ ನಡೆದಿಲ್ಲ, ಸರಿಯಾದ ತನಿಖೆ ನಡೆದಿದ್ದರೆ ಹಲವರ ಬಂಡವಾಳ ಬಯಲಾಗುತ್ತಿತ್ತು. ಆಗಿನ್ನೂ ದೇಶ ಪೂರ್ಣ ಸಾರ್ವಭೌಮತ್ವ ಹೊಂದಿರದ ಕಾರಣ ಬ್ರಿಟೀಷ್ ಕಾನೂನಿನಡಿಯಲ್ಲೇ ತನಿಖೆ ಮತ್ತು ವಿಚಾರಣೆ ನಡೆದಿತ್ತು. ಈ ಕಾರಣಕ್ಕಾಗಿಯೇ ಕರಾರುವಕ್ಕಾದ ತನಿಖೆ ನಡೆಸದೇ ಅತಿ ದೊಡ್ಡ ಸತ್ಯವೊಂದನ್ನು ಬ್ರಿಟೀಷರು ತಮ್ಮ ಪ್ರಭಾವ ಬೀರಿ ಮುಚ್ಚಿ ಹಾಕಿದ್ದರು.
ಅವರಿಬ್ಬರ ವಿಚಾರಣೆ ಏಕೆ ನಡೆಸಲಿಲ್ಲ..?
ಗಾಂಧಿ ಹತ್ಯೆ ನಡೆದಾಗ ಅವರ ಜೊತೆಯಲ್ಲಿ ಇದ್ದಿದ್ದು ಇಬ್ಬರು ಯುವತಿಯರು. ಅದರಲ್ಲಿ ಒಬ್ಬಾಕೆ ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಸರ್ದಾರ್ ಪಟೇಲರ ಮಗಳು ಅಬಾ. ಮನುಬೆನ್ಳನ್ನು ತನ್ನ ಕೈಯಿಂದ ತಳ್ಳಿದ ನಂತರ ಗಾಂಧಿ ಎದೆಗೆ ಗುಂಡಿಕ್ಕಿದ್ದ ನಾಥೂರಾಮ್ ಘೋಡ್ಸೆ. ಬ್ರಿಟೀಷ್ ಕಾನೂನಿನಡಿಯಲ್ಲಿಯೇ ತನಿಖೆ ನಡೆದರೂ ಪ್ರತ್ಯಕ್ಷದರ್ಶಿಗಳಾಗಿದ್ದ ಈ ಇಬ್ಬರು ಹೆಣ್ಣು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿತ್ತು. ಆದ್ರೆ ಅದು ಆಗಲೇ ಇಲ್ಲ. ನಾಥೂರಾಮನಿಗೆ ಗಲ್ಲು ಶಿಕ್ಷೆ ವಿಧಿಸುವಾಗಲೂ ಈ ಪ್ರತ್ಯಕ್ಷದರ್ಶಿಗಳಿಬ್ಬರ ಹೇಳಿಕೆ ಪಡೆಯಲೇ ಇಲ್ಲ. ಗಾಂಧಿ ಮೃತದೇಹವನ್ನು ಶುಚಿಗೊಳಿಸುವಾಗ ಸಿಕ್ಕ ಬುಲೆಟ್ ಬಗ್ಗೆಯೂ ತನಿಖೆಯಾಗಲಿಲ್ಲ. ಇನ್ನು ಇಡೀ ಕೋರ್ಟ್ ಕಲಾಪವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಲಾಗಿತ್ತು. ಆದ್ರೆ ಯಾವಾಗ ನಾಥೂರಾಮ್ ಘೋಡ್ಸೆ ತನ್ನ ಹೇಳಿಕೆಯನ್ನು ನೀಡಲು ಕೋರ್ಟ್ನಲ್ಲಿ ಎದ್ದು ನಿಂತನೋ ಕೋರ್ಟ್ ವಿಚಾರಣೆಗೆ ಸೆನ್ಸಾರ್ ಹೇರಿತ್ತು ಅಂದಿನ ನೆಹರೂ ಸರ್ಕಾರ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಘೋಡ್ಸೆ ಹೇಳಿಕೆ ಏನು ಅನ್ನೋದು ಈ ದೇಶಕ್ಕೆ ಗೊತ್ತೇ ಆಗಲಿಲ್ಲ. ಅಷ್ಟರಮಟ್ಟಿಗೆ ಪ್ರಕರಣದ ತನಿಖೆ ಮತ್ತು ವಿಚಾರಣೆ ಪಾರದರ್ಶಕವಾಗಿ ನಡೆದೇ ಇಲ್ಲ.
ಪಂಕಜ್ ಫಡ್ನಿಸ್ ವಾದ ಏನು..?
1. ಗಾಂಧಿ ಹತ್ಯೆ ಮಾಡಿದ್ದು ನಾಥೂರಾಮ್ ಘೋಡ್ಸೆ, ನಾರಾಯಣ ಆಪ್ಟೆ ಮಾತ್ರ ಅಲ್ಲ. ಹತ್ಯೆ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ.
2. ಗಾಂಧಿ ಹತ್ಯೆಗಾಗಿ ನಾಥೂರಾಮ್ ಘೋಡ್ಸೆ ಹಾರಿಸಿದ್ದು ಮೂರು ಗುಂಡುಗಳು. ಆದ್ರೆ ಗಾಂಧಿ ದೇಹ ಹೊಕ್ಕಿದ್ದು ನಾಲ್ಕು ಗುಂಡುಗಳು. ನಾಲ್ಕನೇ ಗುಂಡು ಗುಂಡು ಹಾರಿಸಿದ ಎರಡನೇ ವ್ಯಕ್ತಿ ಯಾರು..?
3. ಗಾಂಧಿ ಹತ್ಯೆಯ ಹಿಂದೆ ಎರಡನೇ ಮಹಾಯುದ್ಧ ಕಾಲದ ಬ್ರಿಟೀಷ್ ಸೇನಾ ಘಟಕ “ಫೋರ್ಸ್ 136” ನ ಕೈವಾಡ ಇದೆ.
4. ಗಾಂಧಿ ಹತ್ಯೆಯನ್ನು ಕೇವಲ ಐದು ಅಡಿಗಳಷ್ಟು ದೂರದಿಂದ ನೋಡಿದ್ದ ಅಮೆರಿಕನ್ ರಾಯಬಾರಿ ಮಾಡಿದ್ದ ಟೆಲಿಗ್ರಾಂ ಬಹಿರಂಗಪಡಿಸಿಲ್ಲ ಯಾಕೆ..?
5. ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಟೆಲಿಗ್ರಾಂ ಅನ್ನು 70 ವರ್ಷಗಳಿಂದ ರಹಸ್ಯವಾಗಿಟ್ಟಿರುವ ಉದ್ದೇಶ ಏನು..?
6. ಗಾಂಧಿ ಮೃತದೇಹದ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ..?
7. ಗಾಂಧಿ ಹತ್ಯೆಯಾದಾಗ ಜೊತೆಯಲ್ಲಿದ್ದ ದತ್ತು ಪುತ್ರಿ ಮನು ಬೆನ್ ಮತ್ತು ಸರ್ದಾರ್ ಪಟೇಲ್ ಮಗಳು ಅಬಾ ವಿಚಾರಣೆಯೇ ನಡೆಸಿಲ್ಲ..!
8. ಗಾಂಧೀಜಿ ಪಾಕಿಸ್ತಾನಕ್ಕೆ ಭೇಟಿ ಘೋಷಣೆ ಮಾಡಿದ ಮೂರನೇ ದಿನಕ್ಕೇ ಹತ್ಯೆಯಾಗಿದ್ದು ಯಾಕೆ..?
9. ಗಾಂಧಿ ಹತ್ಯೆ ತನಿಖೆ ವೈಜ್ಞಾನಿಕವಾಗಿ ನಡೆದಿಲ್ಲ, ಕೇವಲ ಹೇಳಿಕೆಗಳ ಆಧಾರದ ಮೇಲೆ ತೀರ್ಪು ನೀಡಲಾಗಿದೆ..!
10. ಗಾಂಧಿ ಹತ್ಯೆಯಾಗಿದ್ದು ಸಂಜೆ 5.17ಕ್ಕೆ. ಆದ್ರೆ ಮಧ್ಯಾಹ್ನ 3 ಗಂಟೆಗೆ ವಿದೇಶಿ ವ್ಯಕ್ತಿಯೊಬ್ಬ ಗಾಂಧಿ ಹತ್ಯೆಯಾಗಿದ್ದಾರೆ ಎಂದು ದೆಹಲಿಯಲ್ಲಿ ಕರಪತ್ರ ಹಂಚುತ್ತಿದ್ದ, ಇದು ಹೇಗೆ ಸಾಧ್ಯ..?
11. ಗಾಂಧಿ ಹತ್ಯೆಗೆ ಮೂರು ದಿನ ಇರುವ ಮೊದಲೇ ಪುಣೆಯ ಕಲೆಕ್ಟರ್ ಪತ್ನಿ ಸರಳಾ ಭಾವೆ ಅವರಿಗೆ “ಗಾಂಧಿ ಹತ್ಯೆ ಮಾಡಲು ಕೆಲವು ವ್ಯಕ್ತಿಗಳು ದೆಹಲಿಗೆ ಹೋಗಿದ್ದಾರೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದರು. ಈ ಬಗ್ಗೆ ಪುಣೆಯ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಆದರೂ ಗಾಂಧಿ ಹತ್ಯೆಯನ್ನೇಕೆ ತಪ್ಪಿಸಲಿಲ್ಲ?
12. ಹತ್ಯೆಯಲ್ಲಿ ಬ್ರಿಟೀಷ್ ಕೈವಾಡ ಇದೆ ಎಂಬ ಬಗ್ಗೆ ಅಂದಿನ USSR ನ ಭಾರತೀಯ ರಾಯಭಾರಿ ವಿಜಯ ಲಕ್ಷ್ಮೀ ಪಂಡಿತ್ಗೆ ವರದಿ ನೀಡಲಾಗಿತ್ತು. ಆದ್ರೆ ಈ ಬಗ್ಗೆ ತನಿಖೆ ನಡೆಯಲೇ ಇಲ್ಲ.
ಇದಿಷ್ಟೂ ಪಂಕಜ್ ಫಡ್ನಿಸ್ ಅವರು ಗಾಂಧಿ ಹತ್ಯೆಯ ಮರು ತನಿಖೆ ಯಾಕಾಗಿ ಆಗಬೇಕು ಎಂದು ಎತ್ತಿರುವ ಪ್ರಶ್ನೆಗಳು. ಇನ್ನು ಹತ್ಯೆ ನಂತರ ನಾಥೂರಾಮ್ ಘೋಡ್ಸೆ ಕೆಂಪು ಕೋಟೆಯ ಕೋರ್ಟ್ ಹಾಲ್ನಲ್ಲಿ ನಿಂತು ಮಾಡಿಕೊಂಡ ಸಮರ್ಥನೆ ಏನು ಗೊತ್ತಾ..?
ಹತ್ಯೆಗೆ ಘೋಡ್ಸೆ ಸಮರ್ಥನೆ ಏನು..?
1. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು..!
2. ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ..!
3. ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು..!
4. ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು..!
5. ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿ ಮೌನ ವಹಿಸಿದ್ದರು..!
6. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿ ಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು..!
7. ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು..!
8. ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೊರಲಿಲ್ಲ..!
9. ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ..!
10. ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ..!
ಇದಿಷ್ಟೂ ಕೋರ್ಟ್ನ ಕಟಕಟೆಯಲ್ಲಿ ನಿಂತು ನಾಥೂರಾಮ ಘೋಡ್ಸೆ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡ ರೀತಿ. ಈ ಕೇಸಿನ ವಿಚಾರಣೆ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದ್ರೆ ಘೋಡ್ಸೆ ತಪ್ಪೊಪ್ಪಿಗೆ ಹೇಳಿಕೆಯನ್ನ ಸರ್ಕಾರ ಸೆನ್ಸಾರ್ ಮಾಡಿತ್ತು. ಆತನ ಮಾತಿನಿಂದ ದೇಶದ ಜನ ಪ್ರಭಾವಿತರಾಗಬಾರದು ಅನ್ನೋದು ನೆಹರೂ ಸರ್ಕಾರದ ಉದ್ದೇಶವಾಗಿತ್ತು. ನಾಥೂರಾಮ್ ಘೋಡ್ಸೆಯ ತಪ್ಪೊಪ್ಪಿಗೆ ಹೇಳಿಕೆ ಮತ್ತು ಪಂಕಜ್ ಫಡ್ನಿಸ್ ಅವರ ಪ್ರಶ್ನೆಗಳೆರಡನ್ನೂ ನೋಡಿದಾಗ ಗಾಂಧಿ ಹತ್ಯೆ ತನಿಖೆಯಲ್ಲಿ ಹಲವು ಮಿಸ್ಸಿಂಗ್ ಲಿಂಕ್ಗಳಿ ಇವೆ ಅನ್ನೋದು ಸ್ಪಷ್ಟವಾಗುತ್ತದೆ. ಒಂದು ವೇಳೆ ಮರು ತನಿಖೆ ನಡೆದರೆ ಸತ್ಯ ಹೊರಗೆ ಬರಬಹುದು. ಈ ಬಗ್ಗೆ ಸುಪ್ರೀಂ ಕೋರ್ಟ್ ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರಕ್ಕೆ ಬರಲಿದೆ. ದೇಶದ ಜನರಿಗೆ ಪೂರ್ಣ ಸತ್ಯ ಗೊತ್ತಾಗಬೇಕಿದೆ…
ಸೆಪ್ಟೆಂಬರ್ 28, 2017 ನಿಮ್ಮ ಟಿಪ್ಪಣಿ ಬರೆಯಿರಿ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನೋ ಸಂಘಟನೆಯನ್ನ ನಿಷೇಧಿಸಬೇಕು ಎಂಬ ಒತ್ತಾಯ ಹಲವು ದಿನಗಳಿಂದಲೂ ಕೇಳಿ ಬರುತ್ತಲೇ ಇದೆ. ಹಿಂದೂ ಪರ ಸಂಘಟನೆಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒಂದು ಭಯೋತ್ಪಾದಕ ಸಂಘಟನೆ. ಅದನ್ನು ನಿಷೇಧಿಸಲೇಬೇಕು ಎಂದು ಹಲವು ವರ್ಷಗಳಿಂದಲೂ ಪ್ರತಿಭಟನೆ ನಡೆಸುತ್ತಲೇ ಇದ್ದರು. ಆದ್ರೆ ಈಗ ಎನ್ಐಎ ಸಲ್ಲಿಸಿರುವ ವರದಿಯ ಆಧಾರದ ಮೇಲೆ ಪಿಎಫ್ಐ ಸಂಘಟನೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ…
ಕರ್ನಾಟಕ ಮತ್ತು ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿರುವ ನಾಲ್ಕು ಪ್ರಕರಣಗಳನ್ನು ತನಿಖೆ ಪೂರ್ಣಗೊಳಿಸಿದ ನಂತರ ಎನ್ಐಎ ಕೇಂದ್ರ ಸರ್ಕಾರಕ್ಕೆ ಪಿಎಫ್ಐ ನಿಷೇಧಿಸುವಂತೆ ಶಿಫಾರಸು ಮಾಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ, ಕೇರಳದ ಇಡುಕ್ಕಿಯಲ್ಲಿ ನಡೆದಿದ್ದ ಪ್ರೊಫೆಸರ್ ಅಂಗೈ ಕತ್ತರಿಸಿದ ಪ್ರಕರಣ, ಕಣ್ಣೂರಿನಲ್ಲಿ ಟೆರರ್ ಕ್ಯಾಂಪ್ ನಡೆಸಿದ ಪ್ರಕರಣ ಮತ್ತು ಧಕ್ಷಿಣ ಭಾರತದಲ್ಲಿ ದುಷ್ಕೃತ್ಯ ನಡೆಸಲು ಐಸಿಸ್ ಜೊತೆ ಕೈಜೋಡಿಸಿದ ಪ್ರಕರಣ. ಈ ಎಲ್ಲ ಪ್ರಕರಣಗಳ ತನಿಖೆ ನಡೆಸಿದ ನಂತರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಎನ್ಐಎ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಕೇರಳ ಮತ್ತು ಕರ್ನಾಟಕದಲ್ಲಿ ನಾಲ್ಕು ಪ್ರಕರಣಗಳ ತನಿಖೆ ಪೂರ್ಣಗೊಳಿಸಿದ ನಂತರ ಎನ್ಐಎ ದಾಖಲೆಗಳ ಸಮೇತ 19 ಪುಟಗಳ ರಿಪೋರ್ಟ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಎನ್ಐಎ ರಿಪೋರ್ಟ್ ಹೇಳೋದೇನು…?
1. ಪಿಎಫ್ಐ ಸಂಘಟನೆ ಕೇರಳದ ಕಣ್ಣೂರಿನಲ್ಲಿ ಬಾಂಬ್ ತಯಾರಿ, ಟೆರರ್ ಕ್ಯಾಂಪ್ ನಿರ್ವಹಣೆ ಮಾಡುತ್ತಿದೆ
2. ಕೋಮು ಗಲಭೆಗಳನ್ನು ಸೃಷ್ಟಿಸುವ ಮೂಲಕ ರಾಜಕೀಯ ವೈಷಮ್ಯದ ಲಾಭ ಪಡೆಯಲು ಯತ್ನಿಸುತ್ತಿದೆ
3. ತಾಲಿಬಾನ್ ಮಾದರಿ ಇಸ್ಲಾಂ ಅನ್ನು ದೇಶದಲ್ಲಿ ಜಾರಿಗೆ ತರಲು ಕೆಲಸ ಮಾಡುತ್ತಿದೆ
4. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ದೇಶದ ಭದ್ರತೆಗೆ ಅಪಾಯ
5. ಲವ್ ಜಿಹಾದ್, ಬಲವಂತದ ಮತಾಂತರದ ಮೂಲಕ ಇಸ್ಲಾಂ ವಿಸ್ತರಣೆಯ ಅಜೆಂಡಾ ಹೊಂದಿದೆ
6. ನಿಷೇಧಿತ ಸಿಮಿ ಸಂಘಟನೆಯ ಸಿದ್ಧಾಂತಗಳನ್ನೇ ಪಿಎಫ್ಐ ಅಳವಡಿಸಿಕೊಂಡಿದೆ
7. ಸಿಮಿ ಸಂಘಟನೆ ನಿಷೇಧವಾದ ನಂತರ ಅಲ್ಲಿದ್ದ ಸದಸ್ಯರೇ ಪಿಎಫ್ಐ ಸಂಘಟನೆ ಆರಂಭಿಸಿದ್ದಾರೆ
8. ದೇಶದಲ್ಲಿ ಭಯೋತ್ಪಾದ ಕೃತ್ಯಗಳನ್ನು ನಡೆಸಲು ರಹಸ್ಯವಾಗಿ ಟ್ರೈನಿಂಗ್ ಕ್ಯಾಂಪ್ಗಳನ್ನು ನಡೆಸುತ್ತಿದೆ
9. ಎಸ್ಡಿಪಿಐ ಮೂಲಕ ರಾಜಕೀಯ ಅಸ್ಥಿತ್ವ ಕಂಡುಕೊಳ್ಳಲು ಸಮಾಜದಲ್ಲಿ ಕೋಮು ವೈಷಮ್ಯ ಸೃಷ್ಟಿಸುವ ಅಜೆಂಡಾ
10. ಮುಸ್ಲಿಮರು ಶರಿಯಾ ಮೂಲಕವೇ ಸಿವಿಲ್ ಮತ್ತು ಕ್ರೈಂ ಕೇಸ್ಗಳನ್ನು ಬಗೆಹರಿಸಿಕೊಳ್ಳಬೇಕು ಎಂಬ ನಿಲುವು ಹೊಂದಿದೆ
11. ವಿದೇಶಿ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಮತ್ತು ಉಗ್ರ ಕೃತ್ಯಕ್ಕೆ ವಿದೇಶಿ ಹಣ ಸ್ವೀಕಾರ
12. ದೇಶದ 23 ರಾಜ್ಯಗಳಲ್ಲಿ ಇಸ್ಲಾಂ ಮೂಲಭೂತವಾದ ಬಿತ್ತುವ ಕೆಲಸವನ್ನು ಪಿಎಫ್ಐ ಮಾಡುತ್ತಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪಕ್ಕೆ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗಿದೆ. ಮುಸ್ಲಿಮರ ಜೀವನ, ಆರೋಗ್ಯ, ಆರ್ಥಿಕ ಸಬಲೀಕರಣದ ಪರ ಪಿಎಫ್ಐ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದೆ. ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಸುಳ್ಳು ಕೇಸ್ಗಳನ್ನು ದಾಖಲಿಸಿ ಸಂಘಟನೆಯನ್ನು ನಿಷೇಧಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ..
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಇದರ ರಾಜಕೀಯ ಸಂಘಟನೆ ಎಸ್ಡಿಪಿಐ ವಿರುದ್ಧ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ರುದ್ರೇಶ್ ಹತ್ಯೆ ಪ್ರಕರಣ ಪಿಎಫ್ಐ-ಎಸ್ಡಿಪಿಐ ಸಂಘಟನೆ ನಡೆಸಿದ ಭಯೋತ್ಪಾದಕ ಕೃತ್ಯ ಎಂದೇ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಹಲವು ಪ್ರಕರಣಗಳಲ್ಲಿ ಪಿಎಫ್ಐ ಭಾಗಿಯಾಗಿರುವ ಹಿನ್ನೆಲೆಯಲ್ಲಿ ನಿಷೇಧಿಸಬೇಕೆಂಬ ಒತ್ತಾಯಕ್ಕೆ ಎನ್ಐಎ ನೀಡಿರುವ ವರದಿಯಿಂದಾಗಿ ಮನ್ನಣೆ ಬಂದಂತಾಗಿದೆ. ಆದರೂ ಈ ಸಂಘಟನೆಯನ್ನು ನಿಷೇಧಿಸುವ ವಿಚಾರವಾಗಿ ಪರ, ವಿರೋಧ ಅಭಿಪ್ರಾಯಗಳು ಇದ್ದೇ ಇವೆ. ಇದೇ ಪಿಎಫ್ ಸಂಘಟನೆಯ ಮೇಲಿದ್ದ 175 ಕೇಸ್ಗಳನ್ನು ರಾಜ್ಯ ಸರ್ಕಾರ 2015ರಲ್ಲಿ ವಾಪಸ್ ಪಡೆದಿತ್ತು. ಈ ಮೂಲಕ ಪಿಎಫ್ಐ ಸಂಘಟನೆ ಮೇಲಿದ್ದ ಪ್ರಮುಖ ಕೇಸ್ಗಳನ್ನ ಸಾರಾಸಗಟಾಗಿ ತೆಗೆದುಹಾಕಿತ್ತು. ಆ ಮೂಲಕ ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣ ಮಾಡಿತ್ತು ಕಾಂಗ್ರೆಸ್ ಸರ್ಕಾರ.
ಆರ್ಎಸ್ಎಸ್ ಮುಖಂಡ ರುದ್ರೇಶ್ ಕೊಲೆ ತನಿಖೆ ನಡೆಸಿದ ರಾಜ್ಯ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳ ತಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ರಾಜಕೀಯ ಪಕ್ಷ ಎಸ್ಡಿಪಿಐ ನಡೆಸಿದ ಹತ್ಯಾ ಸರಣಿಗಳ ಪಟ್ಟಿ ಮಾಡಿತ್ತು. ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರು ಹಿಂದೂ ಮುಖಂಡರ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಈ ಎಲ್ಲ ಪ್ರಕರಣಗಳೂ ಕೂಡ ಭಯೋತ್ಪಾದನೆ ಸೃಷ್ಟಿಸುವ ಮೂಲ ಉದ್ದೇಶದಿಂದಲೇ ನಡೆಸಲಾಗಿತ್ತು ಅನ್ನೋದನ್ನ ಸಾಕ್ಷಿ ಸಮೇತ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನೋ ಸಂಘಟನೆ ಆರಂಭವಾಗಿದ್ದೇ ನಿಷೇಧಿತ ಸಿಮಿ ಸಂಘಟನೆಯ ಮುಖಂಡರಿದ್ದ. ಕೇಂದ್ರ ಸರ್ಕಾರ ಉಗ್ರ ಸಂಘಟನೆ ಸಿಮಿ ನಿಷೇಧಿಸಿದ ನಂತರ ಅಲ್ಲಿದ್ದ ಕೆಲವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನೋ ಸಂಘಟನೆ ಕಟ್ಟಿಕೊಂಡರು. ಸಿಮಿ ನಡೆಸುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಈಗ ಪಿಎಫ್ಐ ಹೆಸರನ್ನಷ್ಟೇ ಬದಲಿಸಿಕೊಂಡು ಕೆಲಸ ಮಾಡುತ್ತಿದೆ. ಸಿಮಿ ಉಗ್ರ ಸಂಘಟನೆ ನಿಷೇಧದ ನಂತರ ಅದರಲ್ಲಿದ್ದ ಯಾಸಿನ್ ಭಟ್ಕಲ್, ರಿಯಾಜ್ ಭಟ್ಕಲ್, ಇಕ್ಬಾಲ್ ಭಟ್ಕಳ್ ಸೇರಿ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ಕಟ್ಟಿದರು. ಅದೇ ಸಂಘಟನೆ ಭಾರತದಲ್ಲಿ ಸುಮಾರು 20ಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳನ್ನು ನಡೆಸಿತು. ನಮ್ಮ ರಾಜಕೀಯ ಪಕ್ಷಗಳ ನರಿ ಬುದ್ದಿ ಅಂದರೆ ಇದೇ ಸಿಮಿ ಸಂಘಟನೆಯಲ್ಲಿದ್ದ ಅಹ್ಮದ್ ಹಸನ್ ಎಂಬಾತನನ್ನ ರಾಜ್ಯಸಭಾ ಸದಸ್ಯನನ್ನಾಗಿ ಆಯ್ಕೆ ಮಾಡಿ ಸಂಸತ್ತಿಗೆ ಕಳಿಸಿದವು. ಇಂತಹ ಮಹಾನ್ ಕಾರ್ಯ ಮಾಡಿದ್ದು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್. ದೇಶ ರಕ್ಷಣೆಯೇ ಅಂತಿಮ ಅನ್ನೋದನ್ನ ಪರಿಗಣಿಸಿ ಇಂತಹ ಸಂಘಟನೆಯ ಹೆಡೆಮುರಿಕಟ್ಟಬೇಕಿದೆ. ಅಷ್ಟೇ ಅಲ್ಲ.. ಇದೇ ಸಂಘಟನೆ ಮತ್ತೊಂದು ಹೆಸರಿನಲ್ಲಿ ಹುಟ್ಟಿಕೊಳ್ಳದಂತೆ ತಡೆಯುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ
ಸೆಪ್ಟೆಂಬರ್ 23, 2017 ನಿಮ್ಮ ಟಿಪ್ಪಣಿ ಬರೆಯಿರಿ
ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಗೆಲುವು ಸಿಕ್ಕಿದೆ. ಯುದ್ಧ ಮಾಡದೆಯೂ ಗೆಲುವು ಸಾಧಿಸಬಹುದು ಅನ್ನೋದನ್ನ ಭಾರತ ಇಂದು ಮತ್ತೆ ರುಜುವಾತು ಮಾಡಿದೆ. ದೋಖ್ಲಾಂ ಗಡಿ ತಂಟೆ ವಿವಾದವನ್ನು ಯುದ್ಧವಿಲ್ಲದೇ ಗೆದ್ದ ಭಾರತ ಈಗ ಪಾಕಿಸ್ತಾನವನ್ನು ಜಗತ್ತಿನ ಎದುರು ಒಬ್ಬಂಟಿಯನ್ನಾಗಿ ಮಾಡಿದೆ. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿ ಬಿಸಿ ಮುಟ್ಟಿಸಿದೆ..
ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನೇ ತನ್ನ ಅಸ್ತ್ರವಾಗಿ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಟೆರರಿಸ್ತಾನ ಎಂದು ಜರಿದಿದೆ. ಈ ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಮುಖವಾಡವನ್ನು ಭಾರತ ಬಯಲಿಗೆಳೆದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಭಾರತದ ವಿರುದ್ಧ ಹಲವು ಹಸಿ ಸುಳ್ಳುಗಳನ್ನು ಪ್ರಯೋಗಿಸಿದ್ದರು. ಪಾಕಿಸ್ತಾನ ಮಾಡಿದ ಎಲ್ಲ ಸುಳ್ಳು ಆರೋಪಗಳಿಗೆ ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ದಿಟ್ಟ ಉತ್ತರ ನೀಡಿದೆ. ಪಾಕ್ನ ಪೊಳ್ಳು ವಾದ ಮತ್ತು ಭಾರತದ ದಿಟ್ಟ ಉತ್ತರದ ಸ್ಯಾಂಪಲ್ ಇಲ್ಲಿದೆ ನೋಡಿ…
ಪಾಕಿಸ್ತಾನದ ಮಾನವನ್ನು ಜಗತ್ತಿನ ಮುಂದೆ ಇಷ್ಟು ಪರಿಣಾಮಕಾರಿಯಾಗಿ ಹಿಂದೆಂದೂ ಭಾರತ ಹರಾಜು ಹಾಕಿರಲಿಲ್ಲ. ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಯ ಮೂಲ ಕಾರ್ಖಾನೆ ಮತ್ತು ರಫ್ತು ದೇಶ ಎಂದು ಭಾರತ ಕಟು ಶಬ್ಧಗಳಲ್ಲಿ ಟೀಕಿಸಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಪಾಕ್ ನೆನಪಿನಲ್ಲಿಡಲಿ, ಉಗ್ರರನ್ನು ಗಡಿಯಾಚೆಯಿಂದ ಭಾರತಕ್ಕೆ ನುಸುಳಿ ಬಿಡುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಹಾಳು ಮಾಡಲು ಪಾಕಿಸ್ತಾನಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಕಾಶ್ಮೀರದ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಈ ಮೂಲಕ ಮುಖಭಂಗವಾಗಿದೆ..
ಪಾಕಿಸ್ತಾನಕ್ಕೆ ಇವತ್ತು ವಿಶ್ವ ಸಮುದಾಯದ ಮುಂದೆ ಭಾರತ ನೀಡಿದ ದಿಟ್ಟ ಉತ್ತರ ಶ್ಲಾಘನೆಗೆ ಕಾರಣವಾಗಿದೆ. ಇದು ಕಾಶ್ಮೀರ ವಿಚಾರವಾಗಿ ಪದೇ ಪದೇ ಖ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಗಳು ಉಲ್ಲಂಘನೆಯಾಗುತ್ತಿದೆ. ಅಮಾಯಕರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ ಎಂದು ಪಾಕಿಸ್ತಾನ ಸುಳ್ಳೇ ಸುಳ್ಳು ಆರೋಪ ಮಾಡಿತ್ತು..
ಪಾಕಿಸ್ತಾನದ ಈ ಮಾತುಗಳಿಗೆ ತೀಕ್ಣ ಉತ್ತರ ನೀಡಿರುವ ಭಾರತ, ಪಾಕಿಸ್ತಾನದ ಬೀದಿಗಳಲ್ಲಿ ಉಗ್ರರನ್ನು ರಾಜಾರೋಷವಾಗಿ ಅಲೆಯಲು ಬಿಡಲಾಗಿದೆ. ಉಗ್ರಕೃತ್ಯಗಳಲ್ಲೇ ನಿರತರಾಗಿರುವ ದೇಶ ಭಾರತಕ್ಕೆ ಅಥವಾ ಜಗತ್ತಿಗೆ ಮಾನವ ಹಕ್ಕುಗಳ ರಕ್ಷಣೆಯ ಪಾಠ ಬೇಕಿಲ್ಲ. ತನ್ನ ನೆಲದ ಮಾನವ ಹಕ್ಕು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹರಸಾಹಸ ಪಡುತ್ತಿರುವ ದೇಶದಿಂದ ಜಗತ್ತಿನ ಯಾವ ರಾಷ್ಟ್ರಗಳೂ ಕಲಿಯಬೇಕಿರುವುದು ಏನೂ ಇಲ್ಲ ಎಂದು ಉತ್ತರ ನೀಡಿದೆ..
ಒಂದು ಕಡೆಯಿಂದ ಶಾಂತಿಯ ಮಾತುಗಳನ್ನಾಡುವ ಪಾಕಿಸ್ತಾನ ಮತ್ತೊಂದು ಕಡೆ ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ನೀಡುತ್ತಲೇ ಇದೆ. ಲಷ್ಕರ್ ಎ ತೋಯ್ಬಾ ಮತ್ತು ಆಲ್ಖೈದಾ ಉಗ್ರ ಮುಖಂಡರಿಗೆ ಪಾಕಿಸ್ತಾನದಲ್ಲೇ ಆಶ್ರಯ ನೀಡಿ ಉಗ್ರವಾದವನ್ನು ಪೋಷಿಸುತ್ತಿರುವ ಮತ್ತು ಉಗ್ರ ತರಭೇತಿ ನೀಡುತ್ತಿರುವ ರಾಷ್ಟ್ರ ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಟ ಮಾಡಲು ಸಾಧ್ಯ. ಒಸಾಮಾ ಬಿನ್ ಲಾಡೆನ್ನಿಂದ ಹಿಡಿದು ಮುಲ್ಲಾ ಓಮರ್ ಇಬ್ಬರನ್ನೂ ಪೋಷಿಸಿ, ಆಶ್ರಯು ನೀಡಿದ್ದು ಪಾಕಿಸ್ತಾನ. ಈಗ ಲಷ್ಕರ್ ಎ ತೋಯ್ಬಾ ಮುಖಂಡನಿಗೆ ರಾಜಕೀಯ ಸ್ಥಾನಮಾನ ನೀಡಲು ಮುಂದಾಗಿರೋದನ್ನ ಭಾರತ ಜಗತ್ತಿನ ಎಲ್ಲ ದೇಶಗಳಿಗೆ ಮನವರಿಕೆ ಮಾಡಿಕೊಟ್ಟಿದೆ..
ಪಾಕಿಸ್ತಾನದ ಡಬಲ್ ಸ್ಟಾಂಡರ್ಡ್ ಅನ್ನು ಜಗತ್ತಿನ ಮುಂದೆ ಬಯಲು ಮಾಡಿದ್ದು ಭಾರತದ ವಿದೇಶಾಂಗ ನೀತಿಯ ಎಫೆಕ್ಟ್. ಮೋದಿ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದೆ. ಜಮ್ಮು ಕಾಶ್ಮೀರದ ಯುವಕರನ್ನು ಭಯೋತ್ಪಾದನೆಯು ವಿಷ ವರ್ತುಲಕ್ಕೆ ದೂಡುತ್ತಿದ್ದ ಪಾಕಿಸ್ತಾನದ ಎಲ್ಲ ದಾರಿಗಳನ್ನೂ ಮೋದಿ ಈಗ ಮುಚ್ಚಿದ್ದಾರೆ. ಪ್ರತ್ಯೇಕತಾವಾದಿ ಮುಖಂಡರಿಗೆ ಪಾಕಿಸ್ತಾನ ನೀಡುತ್ತಿದ್ದ ಎಂಜಲು ಕಾಸೂ ಕೂಡ ಈಗ ಅವರನ್ನು ತಲುಪುತ್ತಿಲ್ಲ. ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಉಗ್ರರಿಗೆ ಮತ್ತು ಐಎಸ್ಐಗೆ ಈಗ ಮೊದಲಿನಷ್ಟು ಸುಲಭವಿಲ್ಲ. ಹಾಗಾಗಿಯೇ ಪದೇ ಪದೇ ಕಾಶ್ಮೀರದ ವಿಷಯ ಪ್ರಸ್ತಾಪಿಸಿ ಚೀಮಾರಿ ಹಾಕಿಸಿಕೊಳ್ಳುತ್ತಲೇ ಇದೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಅಮೆರಿಕ ಕಡಿತಗೊಳಿಸಿದೆ. ಸಂಪೂರ್ಣವಾಗಿ ನಿಲ್ಲಿಸುವತ್ತಲೂ ಅಮೆರಿಕ ಗಮನ ಹರಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಬಗ್ಗೆ ಅಮೆರಿಕ ಪರಿಗಣಿಸುತ್ತಿದೆ. ಇದೆಲ್ಲವೂ ಮೋದಿ ಸರ್ಕಾರದ ವಿದೇಶಾಂಗ ನೀತಿಯ ಫಲ, ರಾಜತಾಂತ್ರಿಕ ನಿಲುವು ಕಾರಣ ಅನ್ನೋದು ಸ್ಪಷ್ಟ. ಭಾರತದ ವಿರುದ್ಧ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಭಾರತದ ದಿಟ್ಟ ನಿಲುವಿನಿಂದ ಜಗತ್ತಿನ ಮುಂದೆ ಅಕ್ಷರಶಃ ಒಬ್ಬಂಟಿಯಾಗಿದೆ.
ಸೆಪ್ಟೆಂಬರ್ 21, 2017 ನಿಮ್ಮ ಟಿಪ್ಪಣಿ ಬರೆಯಿರಿ
ದೇಶದ ಭದ್ರತೆಗೆ ರೋಹಿಂಗ್ಯಾ ಮುಸ್ಲಿಮರು ಕಂಟಕವಾಗಬಹುದು ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವರಿಗೆ ಭಾರತದಲ್ಲಿ ಆಶ್ರಯ ನೀಡಬೇಕಾ..? ರೋಹಿಂಗ್ಯಾಗಳಿಗೆ ನೆಲೆ ನೀಡಲು ಮುಸ್ಲಿಂ ರಾಷ್ಟ್ರಗಳೇ ಹಿಂಜರಿಯುತ್ತಿರುವಾಗ ಭಾರತ ನೆಲೆ ನೀಡಬೇಕಾ..? ಬಾಂಗ್ಲಾದಿಂದ ಮಯನ್ಮಾರ್ಗೆ ನೂರಾರು ವರ್ಷಗಳ ಹಿಂದೆಯೇ ವಲಸೆ ಹೋಗಿರುವ ರೋಹಿಂಗ್ಯಾ ಮುಸ್ಲಿಮರನ್ನು ಬಾಂಗ್ಲಾದೇಶವೇ ಬೇಡ ಎನ್ನುತ್ತಿರುವಾಗ ಭಾರತ ದೇಶವೇಕೆ ಅವರನ್ನು ದೇಶದ ಒಡಲಲ್ಲಿಟ್ಟುಕೊಂಡು ಸಲುಹಬೇಕು..? ಇದ್ದಕ್ಕಿದ್ದಂತೆ ರೋಹಿಂಗ್ಯಾ ಮುಸ್ಲಿಮರ ಪರವಾಗಿ ದೇಶದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಮಯನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಮಟ್ಟಕ್ಕೆ ಈ ಪ್ರತಿಭಟನೆಗಳು ಸೀಮಿತವಾಗಿದ್ದರೆ ತಮ್ಮ ಧರ್ಮದವರ ವಿರುದ್ಧ ಮರುಕ ತೋರುತ್ತಿದ್ದಾರೆ ಅಂದುಕೊಳ್ಳಬಹುದಾಗಿತ್ತು. ಆದ್ರೆ ವಿಚಾರ ಅದಲ್ಲ. ಮಯನ್ಮಾರ್ನಿಂದ ಅಕ್ರಮವಾಗಿ ದೇಶಕ್ಕೆ ವಲಸೆ ಬಂದಿರುವ 40 ಸಾವಿರ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಬೇಕು ಅನ್ನೋ ಆಗ್ರಹ ಕೇಳಿಬಂದಿದೆ. ದೇಶದಲ್ಲಿ ನೆಲೆಸಿರುವ ಅಕ್ರಮ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ 40 ಸಾವಿರ ಅಂತ ಸರ್ಕಾರ ಹೇಳುತ್ತದೆ. ಆದ್ರೆ ಈ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ ಅನ್ನೋ ಮಾಹಿತಿಗಳೂ ಇವೆ. ಇದಕ್ಕೆಲ್ಲಾ ಸೊಪ್ಪು ಹಾಕದ ಕೇಂದ್ರ ಸರ್ಕಾರ ದೇಶದಲ್ಲಿರುವ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲು ನಿರ್ಧರಿಸಿದೆ.
ಮಯನ್ಮಾರ್ನಲ್ಲಿನ ಹಿಂಸಾಚಾರದಿಂದಾಗಿ ಭಾರತಕ್ಕೆ ವಲಸೆ ಬಂದಿರುವ ಬೃಹತ್ ಸಂಖ್ಯೆಯ ರೋಹಿಂಗ್ಯಾ ಮುಸ್ಲಿಮರು ದೇಶದ ಭದ್ರತೆಗೆ ಕುತ್ತಾಗುವ ಸಾಧ್ಯತೆ ಇದೆ. ರೋಹಿಂಗ್ಯಾ ಮುಸ್ಲಿಮರಿಗೆ ಐಸಿಸ್ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಇದೆ. ಹೀಗಾಗಿ ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅಫಿಡೆವಿಟ್ ಸಲ್ಲಿಸಿದೆ. ರೋಹಿಂಗ್ಯಾಗಳನ್ನು ಗಡೀಪಾರು ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಬಾರದು. ಇದು ಸರ್ಕಾರದ ಆಡಳಿತಾತ್ಮಕ ವಿಚಾರ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸರ್ಕಾರದ ಈ ತೀರ್ಮಾನ ಕೆಲವು ಮುಸ್ಲಿಂ ಮುಖಂಡರ ಮತ್ತು ಸ್ವಯಂ ಘೋಷಿತ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಬುದ್ದಿಜೀವಿಗಳಿಗೆ ಪಥ್ಯವಾಗಿಲ್ಲ. ಅವರ ಪ್ರಕಾರ ರೋಹಿಂಗ್ಯಾ ಮುಸ್ಲಿಮರನ್ನು ದೇಶದೊಳಗಿಟ್ಟುಕೊಂಡೇ ಸಲುಹಬೇಕು. ಈಗಾಗಲೇ ದೇಶದ ಹಲವೆಡೆ ತಳವೂರಿರುವ ರೋಹಿಂಗ್ಯಾಗಳು ಅಕ್ರಮವಾಗಿ ಆಧಾರ್ ಕಾರ್ಡ್, ವೋಟರ್ ಐಡಿಗಳನ್ನು ಮಾಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿರುವ ಹತ್ತು ಸಾವಿರ ರೋಹಿಂಗ್ಯಾಗಳಲ್ಲಿ ಕೆಲವರು ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ಗಳನ್ನೂ ಮಾಡಿಸಿಕೊಂಡಿದ್ದಾರೆ. ಹೀಗೆ ಯಾವುದೋ ದೇಶದ ಜನ ಅಕ್ರಮವಾಗಿ ಗಡಿ ನುಸುಳಿ ಒಳಬಂದವರನ್ನು ಭಾರತೀಯರು ಎಂದು ನಾವು ಒಪ್ಪಿಕೊಳ್ಳಬೇಕಾ..?
ಮಯನ್ಮಾರ್ ದೇಶದ ರಖಿನೆ ಎಂಬ ರಾಜ್ಯದಲ್ಲಿ ವಾಸ ಮಾಡುವವರೇ ರೋಹಿಂಗ್ಯಾ ಮುಸ್ಲಿಮರು. ಆದ್ರೆ ಈ ಜನರನ್ನು ಮಯನ್ಮಾರ್ ತನ್ನ ಪ್ರಜೆಗಳು ಎಂದು ಒಪ್ಪಿಕೊಳ್ಳೋದಕ್ಕೆ ಸಿದ್ದವಿಲ್ಲ. ಬಾಂಗ್ಲಾದಿಂದ ಅಕ್ರಮವಾಗಿ ದೇಶಕ್ಕೆ ಬಂದು ವಾಸಿಸುತ್ತಿದ್ದಾರೆ, ರೋಹಿಂಗ್ಯಾಗಳು ತನ್ನ ಪ್ರಜೆಗಳಲ್ಲ ಅನ್ನೋದು ಮಯಾನ್ಮಾರ್ನ ವಾದ. ಇದಕ್ಕೆ ತದ್ವಿರುದ್ಧವಾಗಿ ರೋಹಿಂಗ್ಯಾಗಳನ್ನು ತನ್ನ ದೇಶಕ್ಕೆ ಬಿಟ್ಟುಕೊಳ್ಳಲು ಬಾಂಗ್ಲಾದೇಶ ತಯಾರಿಲ್ಲ. ಬೌದ್ಧ ಧರ್ಮೀಯರೇ ಬಹುಸಂಖ್ಯಾತವಾಗಿರುವ ಮಯನ್ಮಾರ್ ದೇಶ ರೋಹಿಂಗ್ಯಾಗಳನ್ನು ದೇಶದಿಂದ ಓಡಿಸಲು ನಿರಂತರವಾಗಿ ಯತ್ನಿಸುತ್ತಲೇ ಇದೆ. ಉದ್ಯೋಗ, ಶಿಕ್ಷಣ, ಧಾರ್ಮಿಕ ಸ್ವಾತಂತ್ರ್ಯ, ಆರೋಗ್ಯ ಸೇವೆ, ಮದುವೆ ಪ್ರತಿಯೊಂದಕ್ಕೂ ರೋಹಿಂಗ್ಯಾಗಳ ಮೇಲೆ ನಿರ್ಬಂಧ ಹೇರಲಾಗಿದೆ. ಪರಿಣಾಮ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನಡೆಯುತ್ತಲೇ ಇದೆ. ಜೀವ ಉಳಿಸಿಕೊಳ್ಳಲು ಈ ರೋಹಿಂಗ್ಯಾ ಮುಸ್ಲಿಮರು ಅಕ್ಕ ಪಕ್ಕದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಮಯನ್ಮಾರ್ನಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಜಗತ್ತು ಏನು ಬೇಕಾದರೂ ತಿಳಿದುಕೊಳ್ಳಲಿ, ನಮಗೆ ನಮ್ಮ ದೇಶದ ರಕ್ಷಣೆಯಷ್ಟೇ ಮುಖ್ಯ ಎಂದು ಹೇಳಿದ್ದಾರೆ. ಮಯನ್ಮಾರ್ ದೇಶವೇ ರೋಹಿಂಗ್ಯಾಗಳಿಂದ ದೇಶದ ಭದ್ರತೆಗೆ ಅಪಾಯವಿದೆ ಎನ್ನುವಂತಹ ಮಾತುಗಳನ್ನಾಡುವಾಗ ಅಂತವರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕಾ.. ಮಾನವ ಹಕ್ಕುಗಳ ಹೋರಾಟಗಾರ್ತಿ ಸೂಕಿಯ ಬಾಯಲ್ಲಿ ದೇಶ ರಕ್ಷಣೆಯ ಮಾತು ಬಂತೋ ಅಂತರಾಷ್ಟ್ರೀಯ ಮಾಧ್ಯಮಗಳು ಸೂಕಿ ವಿರುದ್ಧ ಆಕ್ರೋಶ ಹೊರಹಾಕಿದ್ದವು. ಇದರಿಂದ ಎಚ್ಚೆತ್ತ ಸೂಕಿ ಈಗ ಧರ್ಮ ಮತ್ತು ಜನಾಂಗದ ನೆಲೆಯಲ್ಲಿ ಛಿದ್ರವಾಗಿರುವ ಮ್ಯಾನ್ಮಾರ್ ಒಗ್ಗಟ್ಟಾಗಿ ಮುಂದುವರಿಯಲು ನೆರವಾಗುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ. ಸೇನಾ ಕಾರ್ಯಾಚರಣೆಯಿಂದ ಬೆದರಿ ದೇಶ ತೊರೆದು ಹೋಗಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಮರು ಮ್ಯಾನ್ಮಾರ್ಗೆ ಮರಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಭಾರತದಲ್ಲಿ ನಿರಾಶ್ರಿತರಂತಿರುವ ರೋಹಿಂಗ್ಯಾಗಳು ಈಗ ತಮ್ಮ ತವರಿಗೆ ಹೋಗಬಹುದಲ್ಲವಾ..?
ರೋಹಿಂಗ್ಯಾ ಮುಸ್ಲಿಮರ ಮೇಲೆ ಮಯನ್ಮಾರ್ ಮತ್ತು ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಇಡೀ ಒಂದು ಸಮುದಾಯವೇ ಯಾವ ದೇಶಕ್ಕೂ ಅಪಾಯಕಾರಿಯಾಗಿ ನಿಲ್ಲಲು ಸಾಧ್ಯವಿಲ್ಲ. ಒಂದು ವೇಳೆ ರೋಹಿಂಗ್ಯಾ ಮುಸ್ಲಿಮರಲ್ಲಿ ಉಗ್ರ ಚಟುವಟಿಕೆಗಳಲ್ಲಿ ನಿರತರಾಗಿದ್ದವರಿದ್ದರೆ ಅಂತವರನ್ನು ಗುರುತಿಸಿ ಅವರ ವಿರುದ್ಧ ಮಯನ್ಮಾರ್ ಕ್ರಮ ತೆಗೆದುಕೊಳ್ಳಲಿ. ಅನ್ನ, ನೀರು ಸಿಗದೇ ಅಮಾಯಕ ಮಕ್ಕಳು, ಮಹಿಳೆಯರು ಜೀವ ಕೈಲ್ಲಿ ಹಿಡಿದುಕೊಂಡು ಪರ ದೇಶಗಳಿಗೆ ಓಡಿಹೋಗಬೇಕಾ.. ಅಂತವರ ರಕ್ಷಣೆಗೆ ಅಂತರಾಷ್ಟ್ರೀಯ ಸಮುದಾಯ, ನೆರೆಯ ದೇಶ ಭಾರತ ನೆರವಾಗಬೇಕು ನಿಜ. ನೆರವಾಗುವುದು ಅಂದರೆ ಅಷ್ಟೂ ಜನರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕು ಅಂತೇನು ಅಲ್ಲವಲ್ಲ. ರಾಜತಾಂತ್ರಿಕ ಮಾರ್ಗದ ಮೂಲಕ ರೋಹಿಂಗ್ಯಾಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ನಿಲ್ಲುವಂತೆ ಮಾಡಿ ಅವರು ಮಯನ್ಮಾರ್ನಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲವಾ. ಅದನ್ನು ಬಿಟ್ಗಟು ರೋಹಿಂಗ್ಯಾಗಳಿಗೆ ಭಾರತದಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದರೆ ಹೇಗೆ..? ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿಂದ ಆಗಿರುವ ಸಮಸ್ಯೆಗಳನ್ನು ರೋಹಿಂಗ್ಯಾಗಳ ವಿಷಯದಲ್ಲೂ ಈ ದೇಶ ಸಮಸ್ಯೆ ಸೃಷ್ಟಿಸಿಕೊಳ್ಳಬೇಕಾ…? ಈಗಾಗಲೇ ಹಲವು ದಿನಗಳಿಂದ ರೋಹಿಂಗ್ಯಾಗಳಿಗೆ ಆಶ್ರಯ ನೀಡಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಬೇಕೇ ವಿನಃ ಅವರನ್ನೆಲ್ಲಾ ಶಾಶ್ವತವಾಗಿ ಭಾರತದ ಪ್ರಜೆಗಳಂತೆ ದೇಶದೊಳಗಿರಲು ಅವಕಾಶ ನೀಡಬೇಕು ಎಂದು ವಾದಿಸಿದರೆ ಹೇಗೆ. ಒಂದು ದೇಶವಾಗಿ ಎಲ್ಲ ದೇಶಗಳ ನಿರಾಶ್ರಿತರಿಗೆ ಜಾಗ ಕೊಡಲಾಗುವುದಿಲ್ಲವಲ್ಲ, ಮಾನವೀಯತೆಯ ಆಧಾರದ ಮೇಲೆ ಒಂದಷ್ಟು ದಿನವಷ್ಟೇ ಅವಕಾಶ ನೀಡಬಹುದು. ಆ ಕೆಲಸ ಈಗಾಗಲೇ ಆಗಿದೆ.
ಒಂದು ಜವಾಬ್ದಾರಿಯುತ ದೇಶವಾಗಿ ಮಯನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಭಾರತ ಖಂಡಿಸಿದೆ. ಅಷ್ಟೇ ಅಲ್ಲದೇ ರೋಹಿಂಗ್ಯಾಗಳಿಗೆ ಅಗತ್ಯವಿರುವ ನೆರವನ್ನೂ ಭಾರತ ನೀಡುತ್ತಿದೆ. ಆದ್ರೆ ಇದ್ದಕ್ಕಿಂದ್ದಂತೆ ದೇಶದ ಕೆಲ ಮುಸ್ಲಿಂ ಸಂಘಟನೆಗಳು ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ಕೊಡಬೇಕು ಎಂದು ಆಗ್ರಹಿಸುತ್ತಿವೆ. ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಬೇಕು ಅನ್ನೋ ಹಕ್ಕೊತ್ತಾಯವನ್ನು ಅಸಾದುದ್ದೀನ್ ಓವೈಸಿ ಮಾಡಿದ್ದಾರೆ. ಯಾವುದೋ ದೇಶದ ನಿರಾಶ್ರಿತರನ್ನು ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ಅವಕಾಶ ನೀಡಬೇಕಾ ಅನ್ನೋದು ಈಗಿನ ಪ್ರಶ್ನೆ. ರೋಹಿಂಗ್ಯಾಗಳನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಲು ಮುಸ್ಲಿಂ ದೇಶಗಳೇ ನಿರಾಕರಿಸುತ್ತಿರುವಾಗ ದೇಶದ ಭದ್ರತೆಯನ್ನು ಪಣಕ್ಕಿಟ್ಟು ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕಾ ಅನ್ನೋದು ಹಿಂದೂ ಪರ ಸಂಘಟನೆಗಳ ಪ್ರಶ್ನೆ.. ಸಿರಿಯಾದಲ್ಲಿ ಐಸಿಸ್ ಉಗ್ರರ ಉಪಟಳ ಅತಿಯಾದಾಗ ಅಲ್ಲಿನ ನಾಗರೀಕರು ಸಾಮೂಹಿಕವಾಗಿ ವಲಸೆ ಹೊರಟರು. ಅವರನ್ನು ಅಕ್ಕಪಕ್ಕದ ಯಾವ ಮುಸ್ಲಿಂ ದೇಶಗಳೂ ಒಳಬಿಟ್ಟುಕೊಳ್ಳಲಿಲ್ಲ. ಟರ್ಕಿಯ ಸಮುದ್ರ ತೀರಕ್ಕೆ ಅಪ್ಪಳಿಸುವ ಅಲೆಯ ನಡುವೆ ಪುಟ್ಟ ಕಂದಮ್ಮನ ಶವದ ಪೋಟೋ ಇಡೀ ಜಗತ್ತಿನ ಮಾನವೀಯತೆಯನ್ನೇ ಪ್ರಶ್ನೆ ಮಾಡಿತ್ತು. ಆಗಲೂ ಯಾವ ಮುಸ್ಲಿಂ ರಾಷ್ಟ್ರಗಳೂ ತಮ್ಮ ’ಸೋದರ’ರನ್ನು ಒಳಬಿಟ್ಟುಕೊಳ್ಳಲಿಲ್ಲ. ಆಗ ಸುಮಾರು 38 ಲಕ್ಷ ವಲಸಿಗರಿಗೆ ಜಾಗ ಕೊಟ್ಟಿದ್ದು ಯೂರೋಪ್ ರಾಷ್ಟ್ರಗಳು. ಜೀವ ಉಳಿಸಿಕೊಳ್ಳಲು ಹೋದ ಸಿರಿಯನ್ನರ ಜೊತೆ ಕೆಲವು ಐಸಿಸ್ ಉಗ್ರರೂ ಯೂರೋಪ್ ಸೇರಿಕೊಂಡಿದ್ದೂ, ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದೂ ಎಲ್ಲವೂ ಈಗ ಇತಿಹಾಸ. ಈ ಸತ್ಯ ಜಗತ್ತಿನ ಕಣ್ಣ ಮುಂದೆ ಇರುವಾಗ ಭಾರತ ಅಕ್ರಮ ವಲಸಿಗರಿಗೆ ತನ್ನ ನೆಲದಲ್ಲಿ ಜಾಗ ಕೊಡಬೇಕಾ.. ಜಾಗ ಕೊಟ್ಟರೆ ಅದು ಮಾನವೀಯತೆಯ ಮಹಾ ಕಾರ್ಯವಾಗುತ್ತಾ..?
– ಶಶಿವರ್ಣಂ!
#IndiaForIndians #SendBackRohingyas #TerrorThreat #India #RohingyaMuslims
ಸೆಪ್ಟೆಂಬರ್ 9, 2017 ನಿಮ್ಮ ಟಿಪ್ಪಣಿ ಬರೆಯಿರಿ
ಕಾಶ್ಮೀರದಲ್ಲಿ ನಡೆಯುತ್ತಿರುವ ದಿನ ನಿತ್ಯದ ದಳ್ಳುರಿಗೆ ಪಾಕಿಸ್ತಾನದ ಎಂಜಲು ಕಾಸು ಬಳಕೆಯಾಗುತ್ತಿದೆ ಎಂಬ ಹಲವು ವರ್ಷಗಳ ಅನುಮಾನಕ್ಕೆ ಈಗ ಅಧಿಕೃತ ಮುದ್ರೆ ಸಿಕ್ಕಿದೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಎಂಬ ಸೋಗು ಹಾಕಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಪೋಸು ಕೊಡುತ್ತಿರುವ ಹುರಿಯತ್ ಕಾಂಗ್ರೆಸ್ ಮುಖಂಡರು ತಿನ್ನುತ್ತಿರುವುದು ಪಾಕಿಸ್ತಾನದ ಎಂಜಲು. ಪಾಕ್ನಿಂದ ಪಡೆದ ಚಿಲ್ಲರೆ ಕಾಸು ಪಡೆದು ಕಾಶ್ಮೀರಿ ಯುವಕರನ್ನು ದೇಶ ವಿರೋಧಿ ಕೃತ್ಯಕ್ಕೆ ಎತ್ತಿ ಕಟ್ಟುತ್ತಿದ್ದಾರೆ. ಪಾಕಿಸ್ತಾನಿ ಪ್ರಾಯೋಜಿತ ಕಾಶ್ಮೀರಿ ಹಿಂಸಾಚಾರಕ್ಕೆ ಹುರಿಯತ್ ಕಾನ್ಫರೆನ್ಸ್ನ ಸಹಕಾರ ಇದೆ ಅನ್ನೋದು ಹೊಸ ಸುದ್ದಿಯೇನಲ್ಲ. ದೇಶದ ಬೇಹುಪಡೆ, ಭದ್ರತಾ ಸಂಸ್ಥೆಗಳು ಎಷ್ಟೋ ವರ್ಷಗಳಿಂದ ಈ ಮಾತುಗಳನ್ನು ಹೇಳಿ ಎಚ್ಚರಿಸುತ್ತಲೇ ಇವೆ. ಅಲ್ಪ ಸಂಖ್ಯಾತರ ವೋಟಿಗಾಗಿ ಕಾಯುವ ಕಾಂಗ್ರೆಸ್, ತಾನು ಆಡಳಿತದಲ್ಲಿದ್ಧಾಗ ಪ್ರತ್ಯೇಕತಾವಾದಿಗಳಿಗೆ ರಾಜ ಮರ್ಯಾದೆ ಕೊಟ್ಟು ಕಾಶ್ಮೀರಿ ಪ್ರತ್ಯೇಕತಾ ಹೋರಾಟ ಜೀವಂತವಾಗಿರುವಂತೆ ನೋಡಿಕೊಂಡಿತ್ತು. ಯಾವಾಗ ಮೋದಿ ಅಧಿಕಾರದ ದಂಡ ಹಿಡಿದರೋ ಹುರಿಯತ್ ಮುಖಂಡರು ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ. ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪಾಕ್ ಕುಮ್ಮಕ್ಕಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಎನ್ಐಎ ಅಧಿಕಾರಿಗಳ ತಂಡ ಇದುವರೆಗೂ 8 ಹುರಿಯತ್ ಕಾನ್ಫರೆನ್ಸ್ ಮುಖಂಡರನ್ನ ಬಂಧಿಸಿದೆ. ಬಂಧಿತ ಹುರಿಯತ್ ಮುಖಂಡನೊಬ್ಬ ಮ್ಯಾಜಿಸ್ಟ್ರೇಟ್ ಎದುರು ಕಾಶ್ಮೀರಿ ಹಿಂಸಾಚಾರಕ್ಕೆ ಪಾಕಿಸ್ತಾನ ನಿರಂತರವಾಗಿ ಹಣ ನೀಡುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮ್ಯಾಜಿಸ್ಟ್ರೇಟ್ ಮುಂದೆ ನೀಡುವ ಹೇಳಿಕೆ ಅತ್ಯಂತ ಪ್ರಮುಖ ಸಾಕ್ಷಿಯಾಗುತ್ತದೆ.
ಹುರಿಯತ್ ಮುಖಂಡನ ತಪ್ಪೊಪ್ಪಿಗೆ ಏನು..?
ಪಾಕ್ ಸೂಚನೆಯಂತೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟ
ಹಿಂಸಾಚಾರ ನಡೆಸಲು ಹುರಿಯತ್ ಮುಖಂಡರಿಗೆ ಪಾಕಿಸ್ತಾನದಿಂದ ಹಣ
ಪಾಕಿಸ್ತಾನದಿಂದ ಬಂದ ಹಣ ಕಾಶ್ಮೀರಿ ಹಿಂಸಾಚಾರಕ್ಕೆ ಬಳಕೆ
ಗಲ್ಫ್ನಲ್ಲಿರುವ ಕಾಶ್ಮೀರಿ ಉದ್ಯಮಿಗಳ ಮೂಲಕ ಹುರಿಯತ್ ಮುಖಂಡರ ಖಾತೆಗೆ ಹಣ
ಉದ್ಯಮಿಗಳ ಮೂಲಕ ಹುರಿಯತ್ ಮುಖಂಡರ ಜೇಬು ಸೇರುತ್ತಿದೆ ಪಾಕ್ ಹಣ
ಹವಾಲಾ/ ಬ್ಯಾಂಕ್ ವ್ಯವಸ್ಥೆ ಮೂಲಕ ಹುರಿಯತ್ ಮುಖಂಡರಿಗೆ ಹಣ
ಟೆರರ್ ಕಮಾಂಡರ್ಗಳಿಗೆ ಹಣ ಕೊಡುವ ಹುರಿಯತ್ ಮುಖಂಡರು
ಪಾಕ್ ಕೈವಾಡದ ಸಾಕ್ಷ್ಯ ನಾಶಕ್ಕೆ ಹುರಿಯತ್ ಮುಖಂಡರ ನಿರಂತರ ಯತ್ನ
ಹುರಿಯತ್ ಕಾನ್ಫರೆನ್ಸ್ ಮುಖಂಡ ಕೋರ್ಟ್ ಮುಂದೆ ಅಧಿಕೃತವಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಂತೆ ಕಾರ್ಯಾಚರಣೆಗಿಳಿದ ಎನ್ಐಎ ಅಧಿಕಾರಿಗಳ ತಂಡ ಹುರಿಯತ್ ಮುಖಂಡರ ಮನೆಗಳ ಮೇಲೆ ಮುರುಕೊಂಡು ಬಿದ್ದಿದೆ. 27ಕ್ಕೂ ಹೆಚ್ಚು ಹುರಿಯತ್ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು 2.2 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಎನ್ಐಎ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ಹುರಿಯತ್ ಮುಖಂಡರು ಜೈಲ್ ಬರೋ ಚಳುವಳಿ ಮೂಲಕ ದೆಹಲಿಗೆ ಮುತ್ತಿಗೆ ಹಾಕ್ತೀವಿ ಅಂತ ಅರಚಾಡುತ್ತಿದ್ದಾರೆ.
ಕಾಶ್ಮೀರಕ್ಕೆ ಸ್ವಾತಂತ್ರ್ಯ ಕಲ್ಪಿಸಿ ಇಡೀ ಕಾಶ್ಮೀರವನ್ನು ಪಾಕಿಸ್ತಾನದೊಳಕ್ಕೆ ಬಸಿದುಬಿಡುತ್ತೇವೆ ಎಂದು ಹೊರಟಿದ್ದ ಹುರಿಯತ್ ಕಾನ್ಫರೆನ್ಸ್ ಮುಖಂಡರಾದ ಸೈಯದ್ ಆಲಿ ಶಾ ಗಿಲಾನಿ, ಯಾಸಿರ್ ಮಲಿಕ್, ಉಮರ್ ಫಾರೂಕ್ ಸೇರಿದಂತೆ ಹಲವರನ್ನು ಎನ್ಐಎ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದೆ. ಸುಮಾರು 24 ವರ್ಷಗಳಿಂದ ಪಾಕಿಸ್ತಾನದ ಎಂಜಲು ತಿನ್ನುತ್ತಿದ್ದ ಹುರಿಯತ್ ಮುಖಂಡರು ಮೋದಿ ಸರ್ಕಾರ ಬಂದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಶ್ಮೀರದಲ್ಲಿ ಶಾಂರಿ ನೆಲೆಸಲು ಈ ಪ್ರತ್ಯೇಕವಾದಿಗಳನ್ನು ಮಟ್ಟ ಹಾಕಲೇಬೇಕು ಅನ್ನೋ ಅಭಿಪ್ರಾಯಕ್ಕೆ ಮನ್ನಣೆ ಬಂದಿದೆ. ಇಷ್ಟು ವರ್ಷ ಇಂತವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಯಾಕೆ ಮುಂದಾಗಲಿಲ್ಲ ಅನ್ನೋದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಪ್ರತ್ಯೇಕವಾದಿಗಳ ಕಲ್ಲು ತೂರಾಟ ಮತ್ತು ಭಯೋತ್ಪಾದನೆಯನ್ನ ಕಾಶ್ಮೀರದ ಸ್ವಾತಂತ್ರ್ಯ ಹೋರಾಟ ಎಂದು ಬಿಂಬಿಸುವ, ಭಾಷಣ ಬಿಗಿಯುವ ಬುದ್ದಿಜೀವಿಗಳು ನಮ್ಮ ದೇಶದ ತುಂಬಾ ಇದ್ದಾರೆ. ಅಲ್ಲಿ ನಡೆಯುತ್ತಿರುವುದು ಕೂಲಿಗಾಗಿ ಕಲ್ಲು ಯೋಜನೆ ಎಂಬ ಸತ್ಯ ಬಹಿರಂಗವಾದ ನಂತರವಾದರೂ ಈ ಆರಾಮ ಕುರ್ಚಿಯ ಚಿಂತಕರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರಾ..?
– – ಶಶಿವರ್ಣಂ!
ಆಗಷ್ಟ್ 11, 2016 ನಿಮ್ಮ ಟಿಪ್ಪಣಿ ಬರೆಯಿರಿ
ರಾಜ್ಯದಲ್ಲಿ ನಡೆದಿದ್ದ ಮೊದಲ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನೊಬ್ಬ ಹದಿನಾರು ವರ್ಷಗಳ ನಂತರ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಾನೆ.
ಹದಿನಾರು ವರ್ಷಗಳ ಹಿಂದೆ ರಾಜ್ಯದ ಮೂರು ಕಡೆ ನಡೆದಿದ್ದ ಸರಣಿ ಚರ್ಚ್ ಸ್ಫೋಟ ಪ್ರಕರಣಕ್ಕೆೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಶೇಖ್ ಅಮೀರ್ ಆಲಿಯನ್ನು ಸಿಐಡಿ ಅಧಿಕಾರಿಗಳು ಹೈದರಾಬಾದ್ನಲ್ಲಿ ಸೋಮವಾರ ಬಂಧಿಸಿದ್ದಾರೆ. ಆಂಧ್ರದ ನೆಲಗೊಂಡ ಮೂಲದವನಾದ ಈತ ನಗರದ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್ನಲ್ಲಿ ನಡೆದಿದ್ದ ಸ್ಫೋಟದಲ್ಲಿ ಭಾಗಿಯಾಗಿದ್ದ. ಈತನ ಬಂಧನಕ್ಕೆೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಏ.8 ರಂದು ವಾರಂಟ್ ಜಾರಿಗೊಳಿಸಿತ್ತು.
2000ನೆಯ ಇಸವಿಯ ಜೂನ್-ಜುಲೈ ಅವಧಿಯಲ್ಲಿ ಬೆಂಗಳೂರಿನ ಜೆಜೆ ನಗರದ ಸೇಂಟ್ ಪೀಟರ್ಸ್ ಹಾಗೂ ಸೇಂಟ್ ಪಾಲ್ ಚರ್ಚ್, ಕಲಬುರ್ಗಿ ಜಿಲ್ಲೆಯ ವಾಡಿ ಮತ್ತು ಹುಬ್ಬಳ್ಳಿಯ ಕೇಶವಾಪುರದ ಚರ್ಚ್ಗಳಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಹೈದರಾಬಾದ್ನ ದೀನ್ದಾರ್ ಅಂಜುಮನ್ ಸಂಘಟನೆ ಈ ಕೃತ್ಯ ನಡೆಸಿತ್ತು. ಈ ಬಗ್ಗೆೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು, ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ 29 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಈಗಾಗಲೇ 11 ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಮತ್ತು 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈಗ ಬಂಧಿಸಲಾಗಿರುವ ಆರೋಪಿ ಜೆ ಜೆ ನಗರದ ಸೈಂಟ್ ಪೀಟರ್ ಮತ್ತು ಸೈಂಟ್ ಪಾಲ್ಸ್ ಚರ್ಚ್ನಲ್ಲಿ ಬಾಂಬ್ ಇಟ್ಟಿದ್ದ.
ಸ್ಫೋಟದಿಂದ ಸತ್ತಿದ್ದರು!
ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ ಸೈಯದ್ ಜೆಹಬ್ ಎಂಬಾತ ದ್ವಿಚಕ್ರ ವಾಹನದಲ್ಲಿ ನಗರದ ಹಲವೆಡೆ ಸುತ್ತಾಡಿ ಬಾಂಬ್ ಇಡಲು ಸೂಕ್ತವಾದ ಚರ್ಚ್ಗಳನ್ನು ಗುರುತಿಸಿದ್ದ. ಆತ ಗುರುತಿಸಿದ ಚರ್ಚ್ಗಳಿಗೆ ಬಾಂಬ್ ಅಳವಡಿಸಲು ಕಾರಿನಲ್ಲಿ ಹೊಗುತ್ತಿದ್ದಾಗ ಮಾಗಡಿ ರಸ್ತೆೆಯ ಮಿನರ್ವ ಮಿಲ್ ಬಳಿ ಕಾರಿನಲ್ಲಿದ್ದ ಬಾಂಬ್ ಏಕಾಏಕಿ ಸ್ಫೋಟಗೊಂಡಿತ್ತು. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಉಗ್ರರಾದ ಜಾಕೀರ್ ಮತ್ತು ಸಿದ್ಧಿಕಿ ಎಂಬುವರು ಮೃತಪಟ್ಟು ಮತ್ತೊೊಬ್ಬ ಆರೊಪಿ ಇಬ್ರಾಹಿಂ ಗಾಯಗೊಂಡಿದ್ದ.
ಉಗ್ರರ ಪಾಪಕೂಪ ಆಶ್ರಮ!
ಹೈದರಾಬಾದ್ನಲ್ಲಿ ವಾಸವಿದ್ದ ಹಜರತ್ ಮೌಲಾನ ಸಿದ್ದಕಿ ಎಂಬ ವಿದ್ವಾಾಂಸ ಸರ್ವಧರ್ಮಗಳನ್ನೂ ಒಂದು ಮಾಡುವ ಉದ್ದೇಶ ಇಟ್ಟುಕೊಂಡು ಎಲ್ಲ ಧರ್ಮಗ್ರಂಥಗಳ ಅಭ್ಯಾಸ ನಡೆಸಿದ್ದ. ಕೊನೆಗೆ ಇಸ್ಲಾಾಂ ಧರ್ಮವೇ ಶ್ರೇಷ್ಠ ಎಂದು ತನ್ನದೇ ವಾದ ಮುಂದಿಟ್ಟಿದ್ದ. ತನ್ನನ್ನು ತಾನು ಹಿಂದೂ ದೇವರು ಚೆನ್ನಬಸವೇಶ್ವರನ ಅವತಾರ ಪುರುಷ ಎಂದು ಕರೆದುಕೊಳ್ಳುತ್ತಿದ್ದ. ಈತ 1924ರಲ್ಲಿ ಹೈದರಾಬಾದ್ನಲ್ಲಿ ‘ದೀನ್ದಾರ್ ಚನ್ನಬಸವೇಶ್ವರ ಅಂಜುಮನ್’ ಎಂಬ ಆಶ್ರಮ ಸ್ಥಾಪಿಸಿದ. ಇಲ್ಲಿ ಹಿಂದೂ-ಮುಸ್ಲಿಿಂ ಎರಡೂ ಧರ್ಮ ಬೋಧನೆ ಮಾಡಲಾಗುತ್ತಿತ್ತು. 1952ರಲ್ಲಿ ಹಜರತ್ ಮೌಲಾನ ಸಿದ್ದಕಿ ಮೃತಪಟ್ಟ ನಂತರ ಆತನ ಮಗ ಜಿಯಾ ಉಲ್ ಹಸನ್ ಪಾಕಿಸ್ತಾನದ ಮಾರ್ದಾನ್ಗೆ ವಲಸೆ ಹೋಗಿದ್ದ. ಈತ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಲ್ಲಿ ಜಮಾತ್ ಹಿಜ್ಬುಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯ ಸಂಪರ್ಕಕ್ಕೆೆ ಬಂದರು. ಆ ನಂತರ ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿದ್ದರು. ತನ್ನ ತಂದೆಯ ಜನ್ಮಶತಮಾನೋತ್ಸವದ ಕಾರ್ಯಕ್ರಮಕ್ಕೆೆ ಹೈದರಾಬಾದ್ಗೆ ಬಂದಿದ್ದ ಜಿಯಾ ಉಲ್ ಅಸನ್ ಸರಣೀ ಬಾಂಬ್ ಸ್ಫೋೋಟಕ್ಕೆೆ ಸಂಚು ರೂಪಿಸಿದ್ದ. ಚರ್ಚ್ಗಳಲ್ಲಿ ಬಾಂಬ್ ಸ್ಫೋಟಿಸಿ ಆ ಕೆಲಸವನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಸ್ಫೋಟದ ಸಂಚು ರೂಪಿಸಲಾಗಿತ್ತು. ಭಾರತದಲ್ಲಿ ಇಸ್ಲಾಮೀಕರಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಸ್ಫೋಟ ನಡೆಸಲಾಗಿತ್ತು. ಜಿಯಾ ಉಲ್ ಅಸನ್ ಮತ್ತು ಆತನ ನಾಲ್ವರು ಮಕ್ಕಳು ಈಗ ಪಾಕ್ನಲ್ಲಿ ತಲೆಮರೆಸಿಕೊಂಡಿದ್ದಾರೆ.
ಎಲ್ಲೆೆಲ್ಲಿ ಸ್ಫೋಟ?
* ಜೂ.8, 2000 ಕಲಬುರ್ಗಿ ಜಿಲ್ಲೆೆಯ ವಾಡಿಯ ಸೈಂಟ್ ಆನ್ಸ್ ಚರ್ಚ್
* ಜು.8, 2000 ಹುಬ್ಬಳ್ಳಿಯ ಸೈಂಟ್ ಜಾನ್ ಲೂಥರ್ನ್ ಚರ್ಚ್
* ಜು.9, 2000 ಬೆಂಗಳೂರಿನ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್
* ಜು.9, 2000 ಮಾಗಡಿ ರಸ್ತೆೆಯ ಚರ್ಚ್ಗೆ ಬಾಂಬ್ ಇಡಲು ಹೋಗುತ್ತಿದ್ದ ಕಾರು ಸ್ಫೋಟ, ಇಬ್ಬರು ಉಗ್ರರ ಸಾವು
ಜೂನ್ 5, 2016 1 ಟಿಪ್ಪಣಿ
ಜೂನ್ 5, 2016 ನಿಮ್ಮ ಟಿಪ್ಪಣಿ ಬರೆಯಿರಿ
ಪೊಲೀಸರ ಪ್ರತಿಭಟನೆಯನ್ನು ಎಸ್ಮಾ ಮತ್ತು ಶಿಸ್ತು ಕ್ರಮದ ಅಸ್ತ್ರ ಉಪಯೋಗಿಸಿ ಹತ್ತಿಕ್ಕುವಲ್ಲಿ ಸರಕಾರವೇನೋ ಯಶಸ್ವಿಯಾಗಿದೆ. ಆದರೆ ಒ೦ದು ಹ೦ತಕ್ಕೆ ಗೆದ್ದಿದ್ದು ಪೊಲೀಸರೇ..
ಜೂನ್ 2, 2016 ನಿಮ್ಮ ಟಿಪ್ಪಣಿ ಬರೆಯಿರಿ
ಜೂನ್ 4ರಂದು ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ್ದ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ರನ್ನ ಬಂಧಿಸಲಾಗಿದೆ. ಬುಧವಾರ ರಾತ್ರಿ 12.30ರ ಸಮಯದಲ್ಲಿ ಯಲಹಂಕ ಉಪನಗರದ ಶಶಿಧರ್ರ ಮನೆಯಿಂದ ಪೊಲೀಸರು ಇವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸ್ ಪ್ರತಿಭಟನೆ ಹತ್ತಿಕ್ಕಲು ಹಲವು ಸಾಹಸ ಮಾಡಿದ್ದ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ಈ ನಡುರಾತ್ರಿ ಕಾರ್ಯಾಚರಣೆ ನಡೆಸಿದೆ.
ಮುವತ್ತಕ್ಕೂ ಹೆಚ್ಚು ಮಂದಿ ಪೊಲೀಸರು ಶಶಿಧರ್ ಮನೆಗೆ ಏಕಾಏಕಿ ನುಗ್ಗಿ ಶಶಿಧರ್ ಅವರನ್ನು ಬಂಧಿಸಿ ಕರೆದೊಯ್ಯಲಾಯಿದೆ. ಈ ವೇಳೆ ಶಶಿಧರ್ ಮಗ ಜಾಗೃತ್ ಫೋಟೊ ತೆಗೆಯಲು ಮುಂದಾದಾಗ ಬಲವಂತವಾಗಿ ಮೊಬೈಲ್ ಕಿತ್ತು ಒಡೆದುಹಾಕಲಾಗಿದೆ. ಸರ್ಕಾರದ ವಿರುದ್ಧ ಸಮರ, ಒಳಸಂಚು ಮತ್ತು ಪೊಲೀಸರಿಗೆ ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಶಿಧರ್ ಅವರನ್ನ ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವರನ್ನು ಜೂನ್ 16 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಜೂನ್ 1, 2016 ನಿಮ್ಮ ಟಿಪ್ಪಣಿ ಬರೆಯಿರಿ
ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಪೊಲೀಸರು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅವಧಿಗೂ ಮೀರಿ ಪೊಲೀಸರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬುದು ಪ್ರತಿಭಟನೆಗಿಳಿದಿರುವವರ ಅಳಲು. ಹೌದು ರಾಜ್ಯದಲ್ಲಿ ಪೊಲೀಸರು ಪ್ರತಿದಿನ ಸರಾಸರಿ 12 ರಿಂದ 15 ಗಂಟೆಗಳ ಕಾಲ ದುಡಿಯುತ್ತಾರೆ. ಎಂಟು ಗಂಟೆಗಳ ಕಾಲ ಕೆಲಸ ಎಂಬುದು ಪೊಲೀಸರ ವಿಚಾರದಲ್ಲಿ ಕನಸಿನ ಮಾತೇ ಸರಿ. ಹೀಗೆ ಪೊಲೀಸರನ್ನು ಹೆಚ್ಚು ಅವಧಿಗೆ ದುಡಿಸಿಕೊಳ್ಳಲು ಕಾರಣ ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಕೊರತೆ.
ರಾಜ್ಯ ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಪೊಲೀಸ್ ಬಲ 1,01053. ಆದರೆ ಸದ್ಯ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಕೇವಲ 73,746 ಅಷ್ಟೇ. ಅಂದರೆ ಸದ್ಯ ರಾಜ್ಯದಲ್ಲಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆ 33307. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇರುವುದರಿಂದ ಈಗ ಇರುವ ಪೊಲೀಸರು ಅನಿವಾರ್ಯವಾಗಿ ಹೆಚ್ಚಿನ ಅವಧಿಗೆ ದುಡಿಯುವಂತಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ನೇಮಕವಾಗುತ್ತಿಲ್ಲ.
ಖಾಸಗಿ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದ ಜನಸಂಖ್ಯೆ 6 ಕೋಟಿ 60 ಲಕ್ಷ. ಇಷ್ಟು ಜನಸಂಖ್ಯೆಗೆ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಮಾತ್ರ 73,746. ಅಂದರೆ ರಾಜ್ಯದ ಪ್ರತಿ 894 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿ ಈಗ ಇರುವ ಪೊಲೀಸರ ಸಂಖ್ಯೆಯನ್ನು 1.5 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಪೊಲೀಸ್ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ ನೇಮಕ ಪ್ರಕ್ರಿಯೆ ಮಾತ್ರ ಅಂದುಕೊಂಡ ಸಂಖ್ಯೆಯಲ್ಲಿ ಆಗುತ್ತಿಲ್ಲ.
ವಿಪರ್ಯಾಸ ಅಂದರೆ ಪೊಲೀಸರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಅನ್ನುವ ಬಿಜೆಪಿ ಮುಖಂಡರು ತಮ್ಮ ಸರಕಾರ ಅಸ್ಥಿತ್ವದಲ್ಲಿದ್ದಾಗ ಪೊಲೀಸ್ ನೇಮಕ ಕಾರ್ಯವನ್ನೇ ನಡೆಸಿಲ್ಲ. ಇನ್ನು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಕಳೆದಿದೆ. ಎಂಟು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಮಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅದು ಕಾರ್ಯಗತವಾಗಿಲ್ಲ. ‘ಜನಸಂಖ್ಯೆಗೆ ಅನುಗುಣವಾಗಿ, ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಪೊಲೀಸರ ನೇಮಕ ನಡೆಯದಿರುವ ಕಾರಣಕ್ಕೆ ಮಿತಿ ಮೀರಿದ ಕೆಲಸವನ್ನು ನಾವು ಮೈಮೇಲೆ ಎಳೆದುಕೊಳ್ಳುವಂತಾಗಿದೆ. ವಾರಕ್ಕೆ ಒಂದು ದಿನ ರಜೆ ಪಡೆಯುವುದಿರಲಿ, ತಿಂಗಳಿಗೆ ಒಂದು ದಿನ ರಜೆ ಸಿಕ್ಕರೆ ಅದೇ ಅದೃಷ್ಟ ಎನ್ನುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ, ಇದು ಅನಿವಾರ್ಯ ಎನ್ನುತ್ತಾರೆ’ ಎಂದು ನೋವು ತೋಡಿಕೊಳ್ಳುತ್ತಾರೆ ನಗರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಪೇದೆಯೊಬ್ಬರು.
ಸಿಬ್ವಂದಿ ಕೊರತೆಯಿಂದ ಸಮಸ್ಯೆಗಳು
894 ಜನರಿಗೆ ಒಬ್ಬ ಪೊಲೀಸ್!
ಬೆಂಗಳೂರಿನಲ್ಲಿ 766 ಜನರಿಗೆ ಒಬ್ಬ ಪೊಲೀಸ್!
–ಶಶಿವರ್ಣಂ!
ಮೇ 31, 2016 1 ಟಿಪ್ಪಣಿ
ಜೂ.4 ರಂದು ಪೊಲೀಸರು ಕರೆನೀಡಿರುವ ಪ್ರತಿಭಟನೆ ಹತ್ತಕ್ಕಲು ಸರಕಾರ ಎಸ್ಮಾ ಅಸ್ತ್ರ ಬಳಸಿದೆ. ಮಂಗಳವಾರ ಸಂಜೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಸಭೆಯ ನಿರ್ಧಾರದಂತೆ ಅಂದು ರಜೆ ಸಲ್ಲಿಸುವ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸರಕಾರ ಆದೇಶ ಹೊರಡಿಸಿದೆ. ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಪದ್ಮಿನಿ ದೇವಿ ಈ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಅಪರಾಧ ಪತ್ತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಯೊಂದಿಗೆ ನಾಗರಿಕರ ಆಸ್ತಿ ಮತ್ತು ಜೀವವನ್ನು ರಕ್ಷಿಸುವುದು ರಾಜ್ಯ ಪೊಲೀಸ್ ಸಿಬ್ಬಂದಿಯ ಮೂಲ ಕರ್ತವ್ಯವಾಗಿರುತ್ತದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯು ಕಾರ್ಯನಿರ್ವಹಿಸಲು ನಿರಾಕರಿಸಿದಲ್ಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ಧಕ್ಕೆ ಉಂಟಾಗಿ ಸಮಾಜದ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಸಾರ್ವಜನಿಕ ಜೀವನ ಅಸ್ಥವ್ಯಸ್ಥವಾಗುತ್ತದೆ ಎಂಬುದು ಸರಕಾರದ ಅಭಿಪ್ರಾಯವಾಗಿದೆ. ಆದ್ದರಿಂದ ರಾಜ್ಯದ ಸುರಕ್ಷತೆ ಚದೃಷ್ಠಿಯಿಂದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013(ಎಸ್ಮಾ) ಜಾರಿ ಮಾಡಿ ಈ ಕ್ಷಣದಿಂದಲೇ ಘೋಷಿಸಲಾಗಿದೆ. ರಾಜ್ಯ ಪೊಲೀಸ್ ಸೇವೆಗೆ ಸೇರಿದ ಎಲ್ಲಾ ಸೇವೆಗಳು “ಅತ್ಯಾವಶ್ಯಕ ಸೇವೆ” ಎಂದು ಪರಿಗಣಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಈ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿ ಮಾಡಿ ಆದೇಶ ಹೊರಡಿಸಿದೆ.
“ಇದು ಸರಕಾರತದ ದೌರ್ಬಲ್ಯವನ್ನು ತೋರಿಸುತ್ತದೆ. ಪೊಲೀಸರ ಒಗ್ಗಟ್ಟಿನಿಂದ ಸರಕಾರ ಹೆದರಿದೆ. ಮುಂದಿನ ಸಾಧ್ಯಾ ಸಾಧ್ಯತೆಗಳ ಬಗ್ಗೆ ವಕೀಲರಿಂದ ಸಲಹೆ ಪಡೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಇದು ಸರಕಾರದ ಹೇಡಿತನದ ನಿರ್ಧಾರ. ಪೊಲೀಸರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾಕೆಂದರೆ ಇದು ಪೊಲೀಸರ ಜೀವನದ ಪ್ರಶ್ನೆ. ಸರಕಾರ ಪೊಲೀಸರ ಜೀವನದೊಂದಿಗೆ ಆಟವಾಡುತ್ತಿದೆ’ ಎಂದು ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ತಿಳಿಸಿದ್ದಾರೆ.
ಎಸ್ಮಾ ಕಾಯ್ದೆ ಹೇಳುವುದೇನು?
ಅಗತ್ಯ ಸೇವೆಗಳಾದ ಆರೋಗ್ಯ ಸೇವೆಗಳು, ಸಾರ್ವಜನಿಕ ಸಾರಿಗೆ, ವಿದ್ಯುತ್ ಪೂರೈಕೆ, ಅಗತ್ಯ ವಸ್ತುಗಳ ಮಾರಾಟದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ವರ್ಗದವರು ಮುಷ್ಕರ ನಡೆಸದಂತೆ ನೋಡಿಕೊಳ್ಳುವುದೇ ಎಸ್ಮಾ ಕಾಯ್ದೆ. ಈ ಕಾಯ್ದೆ ಜಾರಿಯಾದ ಇಲಾಖೆಗಳ ನೌಕರರು ಮುಷ್ಕರ ನಡೆಸುವುದು ಅಪರಾಧ. ಕಾಯ್ದೆ ಉಲ್ಲಂ ಸಿ ಮುಷ್ಕರದಲ್ಲಿ ಭಾಗಿಯಾದರೆ ದಂಡ ವಿಧಿಸುವ ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನು ಈ ಕಾನೂನು ಕಲ್ಪಿಸುತ್ತದೆ.
– ಶಶಿವರ್ಣಂ
ಮೇ 31, 2016 ನಿಮ್ಮ ಟಿಪ್ಪಣಿ ಬರೆಯಿರಿ
ಬೆಂಗಳೂರು ಸರಣಿ ಸ್ಫೋಟ ನಡೆದು ಎಂಟು ವರ್ಷಗಳ ನಂತರ ಪ್ರಮುಖ ಸಂಚುಕೋರ ಪಾಕಿಸ್ತಾನದ ಪೇಶಾವರ್ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕೇರಳ ಮೂಲದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮಹಮದ್ ಸಬೀರ್ 2008ರ ನವೆಂಬರ್ನಲ್ಲಿ ನಕಲಿ ಪಾಸ್ಪೋರ್ಟ್ ಬಳಿಸಿಕೊಂಡು ಮುಂಬೈ ಮಾರ್ಗವಾಗಿ ಪಾಕಿಸ್ತಾನ ತಲುಪಿ ದ್ದಾನೆ. ಕಳೆದ ತಿಂಗಳು ದುಬೈ ಪೊಲೀಸರಿಂದ ಭಾರತಕ್ಕೆ ಗಡೀಪಾರಾಗಿದ್ದ ಸಬೀರ್ನ ಸಹಚರ ಕೆ.ಎ. ಅನೂಪ್ನ ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ. ಸದ್ಯ ಅನೂಪ್ ಕೇರಳದ ಎರ್ನಾಕುಲಮ್ನ ಜೈಲಿನಲ್ಲಿದ್ದಾನೆ.
2008 ರ ಜು.25 ರಂದು ನಗರದ ಏಳು ಕಡೆ ಒಂಬತ್ತು ಬಾಂಬ್ಗಳು ಸರಣಿ ಸ್ಫೋಟಗೊಂಡಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿ ದ್ದರು. 2005ರಲ್ಲಿ ಐಐಎಸ್ಸಿ ದಾಳಿ ನಂತರ ನಡೆದ ಎರಡನೇ ಭಯೋತ್ಪಾದಕ ಕೃತ್ಯ ಇದಾಗಿತ್ತು. ಕೇರಳದ ಸಿಮಿ ಉಗ್ರ ಸಂಘಟನೆ ಅಧ್ಯಕ್ಷ ಸಬೀರ್ ಮೇಲೆ ಬೆಂಗಳೂರು ಸರಣಿ ಸ್ಫೋಟ, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಮತ್ತು ಕೇರಳದ ಕೊಚ್ಚಿಯಲ್ಲಿ ಬಸ್ ಸುಟ್ಟುಹಾಕಿದ್ದು ಸೇರಿ ಹಲವು ಪ್ರಕರಣಗಳಿವೆ.
ಅನೂಪ್ನ ವಿಚಾರಣೆ ವೇಳೆ ಇಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆಗಳ ಪರಿಶೀಲನೆಯಿಂದ ಆತ ಪಾಕಿಸ್ತಾನದ ಪೇಶಾ ವರ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಕೇರಳದಲ್ಲಿರುವ ಸಬೀರ್ನ ಪತ್ನಿಯನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆಸಿ ಕೊಳ್ಳುವ ಉದ್ದೇಶದಿಂದ ಆತ ಅನೂಪ್ನೊಂದಿಗೆ ಈ ಬಗ್ಗೆ ಹಲವು ಬಾರಿ ಚರ್ಚೆ ನಡೆಸಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2008ರ ಲಷ್ಕರೆ ತಯ್ಬಾ ಸಂಘಟನೆ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಹಮದ್ ಸಬೀರ್ ಉಗ್ರ ಸಂಘಟನೆಗ ಳೊಂದಿಗೆ ಕೈಜೋಡಿಸಿ ಯುವಕರ ಸೆಳೆಯು ತ್ತಿದ್ದ. ಇದೇ ರೀತಿ ಐವರು ಕೇರಳದ ಯುವ ಕರ ತರಬೇತಿಗಾಗಿ ಕಾಶ್ಮೀರದಲ್ಲಿನ ಲಷ್ಕರೆ ತಯ್ಬಾ ಉಗ್ರರ ಬಳಿಗೆ ಕಳಿಸಿ ಕೊಟ್ಟಿದ್ದ. ಆದರೆ ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟು ಅಬ್ದುಲ್ ಜಬ್ಬಾರ್ ಎಂಬಾತ ಬದುಕುಳಿದಿದ್ದ. ನಂತರ ಕೇರಳ ಪೊಲೀಸರು ಬಂಧಿಸಿದ್ದರು.
ಬೆಂಗಳೂರಿನಲ್ಲಿ ಸರಣಿ ಸ್ಫೋಟ ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ಸೆಳೆದ ಆರೋಪದ ಮೇಲೆ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಸಬೀರ್ ನಕಲಿ ಪಾಸ್ಪೋರ್ಟ್ ಬಳಿಸಿಕೊಂಡು 2008ರ ನ.21 ರಂದು ಪಾಕಿಸ್ತಾನಕ್ಕೆ ಹಾರಿದ್ದ. ಕೇರಳದ ಶಮೀರ್ ಆಲಿಕುಟ್ಟಿ ಎಂಬಾತನ ಹೆಸರಲ್ಲಿದ್ದ ಪಾಸ್ಪೋರ್ಟ್ ನಕಲಿ ಮಾಡಿ ಸಬೀರ್ ತನಿಖಾಧಿಕಾರಿಗಳ ದಾರಿ ತಪ್ಪಿಸಿದ್ದ. ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಲಷ್ಕರೆ ಉಗ್ರ ಚಟುವಟಿಕೆಗಳಲ್ಲಿ ನಿರತನಾಗಿದ್ದ ರೆಹಾನ್ ಅಲಿಯಾಸ್ ಆಲಿ ಎಂಬಾತ ಸಬೀರ್ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡಿದ್ದ. ರೆಹಾನ್ ಅಲಿಯಾಸ್ ವಾಲಿ 2008ರ ಮುಂಬೈ ದಾಳಿಯಲ್ಲೂ ಭಾಗಿಯಾಗಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಮದನಿ ಬೆಂಬಲ ಕೋರಿದ್ದ ಎಲ್ಇಟಿ: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಲಷ್ಕರೆ ತಯ್ಬಾ ಉಗ್ರರು 2005ರಲ್ಲಿ ಐಐಎಸ್ಸಿ ದಾಳಿ ನಡೆಸಿದ್ದರು. ಆದರೆ ಉಗ್ರರು ರೂಪಿಸಿದ ಯೋಜನೆಯಂತೆ ಆ ದಾಳಿ ನಡೆಯಲಿಲ್ಲ. ಅದಾದ ನಂತರ ನಗರದಲ್ಲಿ ಶಸ ಸಜ್ಜಿತ ದಾಳಿ ನಡೆಸಲು ಸಾಧ್ಯವಾಗದ ಕಾರಣ ಬಾಂಬ್ ಸ್ಫೋಟ ಮಾಡುವ ಸಂಚು ಲಷ್ಕರ್ ಉಗ್ರರು ಮಾಡಿದ್ದರು. ಇದಕ್ಕೆ ಕೇರಳದಲ್ಲಿ ಬೇರೂರಿದ್ದ ಉಗ್ರ ಸಂಘಟನೆಯ ನಾಯಕರ ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರಲಾಗಿತ್ತು. 1998ರಲ್ಲಿ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಅವರ ಗುರಿಯಾಗಿಸಿಕೊಂಡು ಕೋಯಮತ್ತೂರಿನಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿಯ ಬೆಂಬಲ ಕೇಳಲಾಗಿತ್ತು. ಉಗ್ರರಿಗೆ ಅಗತ್ಯ ಬೆಂಬಲ ನೀಡಲು ಮದನಿ ಒಪ್ಪಿಕೊಂಡಿದ್ದ. ಕೇರಳದ ಕಲ್ಲು ಕ್ವಾರಿಗಳಿಂದ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಬಾಂಬ್ ತಯಾರಿಸಿ ನಂತರ ದುಷ್ಕೃತ್ಯ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮದನಿ ಸೇರಿದಂತೆ ಮೂವತ್ತಕ್ಕೂ ಹೆಚ್ಚುಮಂದಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
–ಶಶಿವರ್ಣಂ!